ಪ್ರಧಾನಿ ಮೋದಿಯವರೇ.. ಕರ್ನಾಟಕಕ್ಕೆ ಸ್ವಾಗತ; ರಾಜ್ಯದ ಜನರ ಈ ಪ್ರಶ್ನೆಗಳಿಗೆ ನಿಮ್ಮಿಂದ ಉತ್ತರ ನಿರೀಕ್ಷಿಸಬಹುದೇ?: ಸಿಎಂ ಸಿದ್ದರಾಮಯ್ಯ ಟ್ವೀಟ್

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ 2024(Lok Sabha election 2024)ರ ಮೊದಲ ಹಂತದ ಮತದಾನಕ್ಕೆ ಇನ್ನು 11 ದಿನವಷ್ಟೇ ಬಾಕಿ ಇರುವುದು.
ಸಿಎಂ ಸಿದ್ದರಾಮಯ್ಯ-ಪ್ರಧಾನಿ ನರೇಂದ್ರ ಮೋದಿ
ಸಿಎಂ ಸಿದ್ದರಾಮಯ್ಯ-ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ 2024(Lok Sabha election 2024)ರ ಮೊದಲ ಹಂತದ ಮತದಾನಕ್ಕೆ ಇನ್ನು 11 ದಿನವಷ್ಟೇ ಬಾಕಿ ಇರುವುದು. ಈ ಹೊತ್ತಿನಲ್ಲಿ ಇಂದು ಭಾನುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಎರಡನೇ ಸುತ್ತಿನ ಮತಯಾಚನೆಗೆ ರಾಜ್ಯಕ್ಕೆ ಬರುತ್ತಿದ್ದು, ಸಹಜವಾಗಿ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

ಸಿಎಂ ಸಿದ್ದರಾಮಯ್ಯ ತವರಿನಲ್ಲಿ ಪ್ರಧಾನಿ ಚುನಾವಣಾ ರಣಕಹಳೆ: ಇಂದು ಸಂಜೆ 4.30 ರಿಂದ 5.20ರವರೆಗೆ ಮೈಸೂರಿನಲ್ಲಿ ಸಮಾವೇಶ ನಡೆಸಲಿದ್ದಾರೆ. ಆ ಮೂಲಕ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ಮಾಡಲಿದ್ದಾರೆ. ಹಳೇ ಮೈಸೂರು ಭಾಗದ NDA ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ. ಈ ವೇಳೆ ಮಾಜಿ ಪ್ರಧಾನಿ ದೇವೇಗೌಡರು ಮೋದಿಗೆ ಸಾಥ್ ನೀಡಲಿದ್ದಾರೆ.

ಸಂಜೆ 4.30 ರಿಂದ 5.20 ರವರೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾವೇಶ ಆಯೋಜಿಸಲಾಗಿದ್ದು, ಹಳೆ ಮೈಸೂರು ಭಾಗವನ್ನೇ ಗುರಿಯಾಗಿಸಿ ಪ್ರಧಾನಿ ಮೋದಿ ಮತಯಾಚನೆ ಮಾಡಲಿದ್ದಾರೆ. ಬಳಿಕ ಮೈತ್ರಿ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇನ್ನು ಸಮಾವೇಶದಲ್ಲಿ 3 ಕ್ಷೇತ್ರಗಳಿಂದ 1 ಲಕ್ಷಕ್ಕೂ ಹೆಚ್ಚು ಜನರನ್ನ ಸೇರಿಸಲು ಪ್ಲ್ಯಾನ್ ಮಾಡಲಾಗಿದೆ.

ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ: ಮೈಸೂರಿನ ಸಮಾವೇಶದ ಬಳಿಕ ಪ್ರಧಾನಿ ಮೋದಿ ಮಂಗಳೂರಿಗೆ ತೆರಳಲಿದ್ದು, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಅಬ್ಬರದ ರೋಡ್ ಶೋ ನಡೆಸಲಿದ್ದಾರೆ. ಸಂಜೆ 7:45 ಕ್ಕೆ ನಾರಾಯಣಗುರು ವೃತ್ತದಲ್ಲಿ ನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೋಡ್ ಶೋ ಆರಂಭಿಸಲಿದ್ದಾರೆ. ಮಹಾನಗರ ಪಾಲಿಕೆ ಮುಂಭಾಗದಿಂದ ಬಲ್ಲಾಳ ಬಾಗ್, ಎಂ.ಜಿ.ರಸ್ತೆಯಾಗಿ ಪಿವಿಎಸ್ ಸರ್ಕಲ್ ಬಳಿ ಬಲಕ್ಕೆ ತಿರುಗಿ ರಾಷ್ಟ್ರಕವಿ ಗೋವಿಂದ ಪೈ ಸರ್ಕಲ್​​ವರೆಗೆ ರೋಡ್ ಶೋ ಸಾಗಲಿದೆ. ರಾತ್ರಿ 8:30ರೊಳಗೆ ರೋಡ್ ಶೋ ಮುಗಿಯಲಿದೆ. ಈಗಾಗಲೇ ಮಂಗಳೂರಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪ್ರಧಾನಿ ಮೋದಿ ರಾಜ್ಯಕ್ಕೆ ಬರುತ್ತಿರುವುದು ಕಾಂಗ್ರೆಸ್​​ನ ಕೆಂಗಣ್ಣಿಗೆ ಗುರಿಯಾಗಿದೆ. ಮೈಸೂರು, ಮಂಗಳೂರು, ಬೆಂಗಳೂರಿನಲ್ಲಿ ಗೋ ಬ್ಯಾಕ್ ಮೋದಿ ಅಭಿಯಾನ ಕೈಗೊಂಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಸರಣಿ ಪ್ರಶ್ನೆ: ಪ್ರಧಾನಿಯವರು ರಾಜ್ಯಕ್ಕೆ ಆಗಮಿಸುತ್ತಿರುವ ಹೊತ್ತಿನಲ್ಲಿ ಸಿಎಂ ಸಿದ್ದರಾಮಯ್ಯ ರಾಜ್ಯದ ಜನತೆ ಪರವಾಗಿ ಪ್ರಧಾನಿಯವರಿಗೆ ಹಲವು ಪ್ರಶ್ನೆಗಳನ್ನು ಕೇಳಿ ಟೀಕಿಸಿದ್ದಾರೆ.

ಮೈಸೂರು ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದೀರಿ. ಆ ಕ್ಷೇತ್ರಗಳಲ್ಲಿ ಲೋಕಸಭಾ ಸದಸ್ಯರಾಗಿದ್ದ ನಿಮ್ಮ ಇಬ್ಬರು ಶಿಷ್ಯರಿಗೆ ಈ ಬಾರಿ ನೀವು ಟಿಕೆಟ್ ನಿರಾಕರಿಸಿದ್ದು ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದೆ. ಈ ಟಿಕೆಟ್ ನಿರಾಕರಣೆಗೆ ಕಾರಣಗಳನ್ನು ನಿಮ್ಮ ಪಕ್ಷದವರೇ ಕತೆ ಕಟ್ಟಿ ಹೇಳುತ್ತಿದ್ದಾರೆ. ನಿಜವಾದ ಕಾರಣಗಳೇನು ಎನ್ನುವುದನ್ನು ನೀವೇ ಸ್ಪಷ್ಟಪಡಿಸುತ್ತೀರಾ ಎಂದು ಕೇಳಿದ್ದಾರೆ.

ಕರ್ನಾಟಕಕ್ಕೆ ಬರಬೇಕಾದ ನ್ಯಾಯಯುತ ಬರ ಪರಿಹಾರ ಹಣದ ಬಗ್ಗೆ ಇನ್ನೂ ಏನೂ ನಿರ್ಧಾರ ತೆಗೆದುಕೊಂಡಿಲ್ಲ, ಈ ಬಗ್ಗೆ ಏನು ಹೇಳುತ್ತೀರಿ? ನೀವು ಪ್ರವಾಹದ ಸಮಯದಲ್ಲಿ ಅಥವಾ ಬರಗಾಲದ ಸಮಯದಲ್ಲಿ ನಮ್ಮನ್ನು ಭೇಟಿ ಮಾಡುವುದಿಲ್ಲ, ಎಂದಿಗೂ ಚುನಾವಣಾ ಪ್ರಚಾರವನ್ನು ತಪ್ಪಿಸಿಕೊಳ್ಳುವುದಿಲ್ಲ. ಇದರ ಹೊರತಾಗಿಯೂ ಆರೂವರೆ ಕೋಟಿ ಕನ್ನಡಿಗರು ನಿಮ್ಮ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಬರಗಾಲದ ಸಮಯದಲ್ಲಿ ನೀವು ಸಹಾಯ ಮಾಡುವಿರಿ, ತೆರಿಗೆ ಹಂಚಿಕೆಯ ಮೂಲಕ ಹೆಚ್ಚಿನ ಕೊಡುಗೆ ನೀಡುವಿರಿ ಮತ್ತು ವಿಶೇಷ ಬೆಂಬಲದ ಭರವಸೆಗಳನ್ನು ಪೂರೈಸುವ ಅವರ ನಿರೀಕ್ಷೆಗಳನ್ನು ನೀವು ಪೂರೈಸುವಿರಾ ಎಂದು ಮುಖ್ಯಮಂತ್ರಿಗಳು ಕೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com