'ಕಲ್ಲೊಡೆದುಕೊಂಡು ಲೂಟಿ ಮಾಡುತ್ತಿದ್ದವರನ್ನು ಲೋಕಸಭೆಗೆ ಕಳುಹಿಸಿದ್ರೆ ಇನ್ನೇನಾಗುತ್ತೆ'

ಕಲ್ಲೊಡೆದುಕೊಂಡು ಇದ್ದವರನ್ನು ಲೋಕಸಭೆಗೆ ಆರಿಸಿ ಕಳಿಸಿದರೆ ಇನ್ನೇನಾಗುತ್ತೆ. ಇಲ್ಲಿ ಬಡ ಜನರನ್ನು ಲೂಟಿ ಮಾಡಿಕೊಂಡು ಸಾಕಷ್ಟು ಗುಡ್ಡೆ ಹಾಕಿದ್ದಾರೆ. ಅಂತಹವರನ್ನು ದೇಶ ಕಟ್ಟಲು ಲೋಕಸಭೆಗೆ ಕಳಿಸಿದರೆ ದೇಶ ಕಟ್ಟುತ್ತಾರಾ?
ಡಿ.ಕೆ ಸುರೇಶ್ ಮತ್ತು ಎಚ್.ಡಿ ಕುಮಾರಸ್ವಾಮಿ
ಡಿ.ಕೆ ಸುರೇಶ್ ಮತ್ತು ಎಚ್.ಡಿ ಕುಮಾರಸ್ವಾಮಿ
Updated on

ರಾಮನಗರ: ಕಲ್ಲೊಡೆದುಕೊಂಡು ಇದ್ದವರನ್ನು ಲೋಕಸಭೆಗೆ ಆರಿಸಿ ಕಳಿಸಿದರೆ ಇನ್ನೇನಾಗುತ್ತೆ. ಇಲ್ಲಿ ಬಡ ಜನರನ್ನು ಲೂಟಿ ಮಾಡಿಕೊಂಡು ಸಾಕಷ್ಟು ಗುಡ್ಡೆ ಹಾಕಿದ್ದಾರೆ. ಅಂತಹವರನ್ನು ದೇಶ ಕಟ್ಟಲು ಲೋಕಸಭೆಗೆ ಕಳಿಸಿದರೆ ದೇಶ ಕಟ್ಟುತ್ತಾರಾ? ಅವರ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಾರಷ್ಟೆ. ಇವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ, ಸಂಸದ ಡಿ.ಕೆ ಸುರೇಶ್ ವಿರುದ್ಧ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಬಿಡದಿಯ ತೋಟದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪ್ರತ್ಯೇಕ ರಾಷ್ಟ್ರದ ಬಗ್ಗೆ ಸಂಸದ ಡಿ.ಕೆ‌‌‌.ಸುರೇಶ್ ಅವರು ನೀಡಿರುವ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ಕಲ್ಲು ಹೊಡೆಕೊಂಡು ಲೂಟಿ ಮಾಡಿಕೊಂಡು ಇದ್ದೋರನ್ನು ಲೋಕಸಭೆಗೆ ಕಳುಹಿಸಿದರೆ ಇನ್ನೇನಾಗುತ್ತದೆ. ಇಲ್ಲಿ ಬಡ ಜನರನ್ನು ಲೂಟಿ ಮಾಡಿಕೊಂಡು ಸಾಕ್ಷಿಗುಡ್ಡೆ ಮಾಡಿದ್ದಾರೆ. ಅಂತವರನ್ನು ತೆಗೆದುಕೊಂಡು ಹೋಗಿ ದೇಶ ಕಟ್ಟು ಅಂತ ಕಳುಹಿಸಿದರೆ ಕಟ್ಟುತ್ತಾರೆಯೇ? ಅವರ ಸಾಮ್ರಾಜ್ಯ ಕಟ್ಟುಕೊಳ್ತಾರೆ ಅಷ್ಟೇ. ಇವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಎಂದು ಅವರು ಟಾಂಗ್ ನೀಡಿದರು.

ಸುರೇಶ್ ಅವರ ಹೇಳಿಕೆ ಬಾಲಿಶವಾಗಿದೆ. ಕೇಂದ್ರ ಸರ್ಕಾರದಿಂದ ನಮ್ಮ ಬೇಡಿಕೆಗಳನ್ನು ಸಂಘರ್ಷದಿಂದ ಈಡೇರಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿನ ವಾಸ್ತವವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು, ಹಣ ಪಡೆಯಬೇಕು. ಅದು ಬಿಟ್ಟು ಈ ರೀತಿ ಬಾಲಿಶವಾಗಿ ಮಾತನಾಡಿದರೆ, ಸಮಸ್ಯೆ ಬಗೆಹರಿಯುವುದಿಲ್ಲ. ಮತ್ತಷ್ಟು ಜಟಿಲಗೊಳ್ಳುತ್ತದೆ ಎಂದು ಕಿಡಿಕಾರಿದರು.

ಕರ್ನಾಟಕದಲ್ಲಿ ಬಿರಿಯಾನಿ ಊಟ ಮಾಡಿ ಭಾರತ್ ಜೋಡೊ ಮಾಡಿದ ಕಾಂಗ್ರೆಸ್‌ನವರು ಈಗ ವಿಭಜನೆಯ ಮಾತನಾಡುತ್ತಿದ್ದಾರೆ. ಒಂದು ವೇಳೆ ವಿಭಜನೆಯಾದರೂ, ತಮಿಳುನಾಡಿನಿಂದ ಕಾವೇರಿ ವಿಚಾರದಲ್ಲಿ ನ್ಯಾಯ ಪಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಡಿ.ಕೆ.ಸುರೇಶ್ ಅವರು ದೇಶ ವಿಭಜನೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ಆರ್ಥಿಕ ತಾರತಮ್ಯ, ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂಬ ಕಾರಣ ಕೊಟ್ಟಿದ್ದಾರೆ. ಇದು ಅಪ್ರಭುದ್ಧತೆಯ ಹೇಳಿಕೆ. ಕರ್ನಾಟಕದಲ್ಲಿ ಬಿರಿಯಾನಿ ಊಟ ಮಾಡಿ ಭಾರತ್ ಜೋಡೋ ಯಾತ್ರೆ ಮಾಡಿದರು. ಈಗ ವಿಭಜನೆಯ ಮಾತನ್ನು ಆಡುತ್ತಿದ್ದಾರೆ.

‘ದೇಶದ ಮೊದಲ ಬಜೆಟ್‌ ಮೊತ್ತ 174 ಕೋಟಿ ರೂ. ಇತ್ತು. ಆಗ ದೇಶದಲ್ಲಿ ಆಹಾರದ ಕೊರತೆ ಇತ್ತು. ಆಗಿನಿಂದಲೂ ಸರ್ಕಾರಗಳು ಬಜೆಟ್ ಮಂಡಿಸಿಕೊಂಡು ಬಂದಿವೆ. ನಾವು ಹಣಕಾಸು ಆಯೋಗಗಳನ್ನು ಮಾಡಿಕೊಂಡಿದ್ದೇವೆ. ಅವರು ಎಲ್ಲಾ ರಾಜ್ಯಕ್ಕೂ ಭೇಟಿ ನೀಡಿ ಪರಿಶೀಲನೆ ಮಾಡುತ್ತಾರೆ. ಯಾವ ರಾಜ್ಯಕ್ಕೆ ಎಷ್ಟು ಹಣ ಬೇಕೆಂಬ ವರದಿ ಕೊಡುತ್ತಾರೆ.

ಯಾವ ರಾಜ್ಯ ಅಭಿವೃದ್ಧಿಯಾಗಿದೆ ಮತ್ತು ಆಗಿಲ್ಲ ಎಂಬುದನ್ನು ನೋಡಿ ಹಣ ಹಂಚುತ್ತಾರೆ. ಈ ಹಂಚಿಕೆಯನ್ನು ಕಾಂಗ್ರೆಸ್ ಇದ್ದಾಗಲೇ ಪ್ರಾರಂಭ ಮಾಡಿದ್ದು‌. ಪ್ರಧಾನಿ ನರೇಂದ್ರ ಮೋದಿ ಇದನ್ನು ಪ್ರಾರಂಭ ಮಾಡಿದ್ದಲ್ಲ’ ಎಂದು ತಿರುಗೇಟು ನೀಡಿದರು.

ದಕ್ಷಿಣದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ, ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮುಂದಿಡಬೇಕಾಗುತ್ತದೆ’ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿಕೆ ನೀಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com