ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸರ್ಕಾರಿ ಹುದ್ದೆ ತೊರೆದ ಶ್ರೀನಿವಾಸ್ ಪ್ರಸಾದ್ ಅಳಿಯ ಡಾ. ಮೋಹನ್!
ಚಾಮರಾಜನಗರ: ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯ ಸರ್ಕಾರಿ ವೈದ್ಯರಾಗಿ ಕೆಲಸ ಮಾಡುತ್ತಿದ್ದ ಬಿಜೆಪಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಅವರ ಅಳಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಸಂಜಯಗಾಂಧಿ ಆಸ್ಪತ್ರೆಯ ಖ್ಯಾತ ಬೆನ್ನುಹುರಿ ತಜ್ಞ ಹಾಗೂ ಪ್ರಾಧ್ಯಾಪಕರಾಗಿದ್ದ ಡಾ.ಎನ್.ಎಸ್.ಮೋಹನ್ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಇದೀಗ ಚುನಾವಣಾ ಅಖಾಡಕ್ಕಿಳಿಯಲು ಲಕ್ಷಾಂತರ ರೂ. ವೇತನದ ಸರ್ಕಾರಿ ಹುದ್ದೆಯನ್ನು ತೊರೆದಿದ್ದಾರೆ.
ಡಾ.ಮೋಹನ್ ಸರ್ಕಾರಿ ಕೆಲಸಕ್ಕೆ ಸೇರಿ ಕೇವಲ 15 ವರ್ಷಗಳಾಗಿತ್ತು. ಇನ್ನೂ ಉನ್ನತ ಹುದ್ದೆಗೇರುವ ಅವಕಾಶವಿದ್ದರೂ ಸಹ ರಾಜಕೀಯದಲ್ಲಿ ಸಕ್ರಿಯರಾಗಲು ತಮ್ಮ ವೃತ್ತಿ ತೊರೆದಿದ್ದಾರೆ. ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಆತ್ಮವಿಶ್ವಾಸದಲ್ಲಿರುವ ಮೋಹನ್ ಅವರು, ಬಿಜೆಪಿ ವರಿಷ್ಠರು ಟಿಕೆಟ್ ನೀಡಿ ಗೆಲ್ಲಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಅವರು ಆರ್ ಎಸ್ ಎಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ.