ಒಳ ಮೀಸಲಾತಿ ಬಗ್ಗೆ ಇಂದು ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ: ಗೃಹ ಸಚಿವ ಡಾ. ಜಿ.ಪರಮೇಶ್ವರ್
ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿ ಜಾರಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಒಳ ಮೀಸಲಾತಿ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದೇವೆ. ಹಿಂದಿನ ಸರ್ಕಾರದಲ್ಲಿ ಚಿತ್ರದುರ್ಗ ಸಮಾವೇಶ ಮಾಡಿ ನಿರ್ಣಯ ಮಾಡಲಾಗಿತ್ತು. ನ್ಯಾ ಸದಾಶಿವ ಆಯೋಗದ ವರದಿ ಬಗ್ಗೆ ನಿರ್ಣಯಕ್ಕೆ ತೀರ್ಮಾನ ಮಾಡಲಾಗಿದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ವರದಿ ತಿರಸ್ಕಾರ ಮಾಡಿದ್ದರು. ಕಾನೂನಾತ್ಮಕವಾಗಿ ಒಳ ಮೀಸಲಾತಿ ಕೊಡಬೇಕಾಗುತ್ತದೆ . ನಾವೇ ಸಂವಿಧಾನ ತಿದ್ದುಪಡಿ ತರಲು ಆಗಲ್ಲ. ಹೀಗಾಗಿ ಶಿಫಾರಸ್ಸು ಮಾಡುವ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಬಾಬ್ರಿ ಮಸೀದಿಯಂತೆ ಇತರೆ ಮಸೀದಿ ನಿರ್ನಾಮ ಮಾಡುತ್ತೇವೆ ಎಂಬ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ, ಅನಂತ್ ಕುಮಾರ್ ಹೆಗಡೆ ಸಂಯಮದಿಂದ ವರ್ತಿಸಲಿ. ಪೊಲೀಸರು ಹೆಗಡೆಗೆ ಸಮಯ ನೀಡಿದ್ದಾರೆ . ಅದನ್ನ ಅರ್ಥ ಮಾಡಿಕೊಳ್ಳಬೇಕು. ಅನಂತ್ ಕುಮಾರ್ ಹೆಗಡೆ ಮಾತು ಮುಂದುವರೆಸಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಸುಮಲತಾ ಅವರು ಕಾಂಗ್ರೆಸ್ ಕೈಹಿಡಿಯುತ್ತಾರೆ ಎಂಬ ವದಂತಿಯಿದೆ ಎಂಬ ಬಗ್ಗೆ ಅದು ಗೊತ್ತಿಲ್ಲ, ಅದೆಲ್ಲ ಪಕ್ಷದಲ್ಲಿ ಆಗುವ ಬೆಳವಣಿಗೆಗಳು, ಪಕ್ಷದ ಅಧ್ಯಕ್ಷರು ಇದನ್ನೆಲ್ಲ ನೋಡಿಕೊಳ್ಳುತ್ತಾರೆ, ಅವರು ಕಾಂಗ್ರೆಸ್ ಸೇರುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ ಎಂದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ