ಚಿಕ್ಕಬಳ್ಳಾಪುರ: ಅಯೋಧ್ಯೆ ರಾಮಮಂದಿರ ಉದ್ಘಾಟಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು 11 ದಿನ ಉಪವಾಸ ಮಾಡಿದ್ದರೇ? ಎಂದು ಅನುಮಾನ ವ್ಯಕ್ತಪಡಿಸಿದ ಕೇಂದ್ರ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಅವರು ಹೊಸ ವಿವಾದ ಸೃಷ್ಟಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮೊಯ್ಲಿ, 11 ದಿನಗಳ ಉಪವಾಸ ಆಚರಿಸಿದರೆ ಮನುಷ್ಯ ಜೀವಂತವಾಗಿರುವುದು ಅಸಾಧ್ಯವೆಂದು ನನಗೆ ಹೇಳಲಾಗಿದೆ. ವೈದ್ಯರ ಅಭಿಪ್ರಾಯದಂತೆ, ಒಬ್ಬ ವ್ಯಕ್ತಿಯು ಕೇವಲ ತೆಂಗಿನ ನೀರು ಕುಡಿದು ಬದುಕುವುದು ಅಸಾಧ್ಯ. ಆದರೆ ಪ್ರಧಾನಿ ಮೋದಿ ತಾವು 11 ದಿನ ಉಪವಾಸ ಮಾಡುತ್ತಿದ್ದೆ ಮತ್ತು ಅನೇಕ ಸ್ಥಳಗಳಿಗೆ ಭೇಟಿ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ನರೇಂದ್ರ ಮೋದಿ ಅವರು ಉಪವಾಸ ಇದ್ದಂತೆ ಕಾಣಲಿಲ್ಲ ಎಂದು ಹೇಳಿದ್ದಾರೆ.
"ನಾನು ವೈದ್ಯರೊಂದಿಗೆ ಉಪವಾಸದ ಬಗ್ಗೆ ಚರ್ಚಿಸಿದೆ. 11 ದಿನ ಉಪವಾಸ ಮಾಡಿದರೆ ಬದುಕಿರಲು ಸಾಧ್ಯವಿಲ್ಲ. ಬದುಕಿದರೆ ಅದು ಪವಾಡ. ಹೀಗಾಗಿ ಮೋದಿ ಉಪವಾಸ ಆಚರಿಸಿರುವುದು ಅನುಮಾನ. ಒಂದು ವೇಳೆ ಪ್ರಧಾನಿ ಮೋದಿ ಉಪವಾಸ ವ್ರತ ಮಾಡದೆ ಗರ್ಭಗುಡಿಗೆ ಹೋಗಿದ್ದರೆ ಆ ಸ್ಥಳ ಪಾವಿತ್ರ್ಯತೆ ಕಳೆದುಕೊಳ್ಳುತ್ತದೆ ಎಂದು ಮೊಯ್ಲಿ ಹೇಳಿದ್ದಾರೆ.
ಜನವರಿ 22 ರಂದು ರಾಮಮಂದಿರದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಮೋದಿ ಜನವರಿ 12 ರಿಂದ ಉಪವಾಸ ಕೈಗೊಂಡಿದ್ದರು ಮತ್ತು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಂತರ ಅರ್ಚಕರು ಅವರಿಗೆ 'ಪ್ರಸಾದ' ನೀಡಿದ ನಂತರ ಅವರು ಉಪವಾಸ ಕೊನೆಗೊಳಿಸಿದರು.
ಮೊಯ್ಲಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ಹಿರಿಯ ನಾಯಕ ಆರ್ ಅಶೋಕ್ ಅವರು, ಮೋದಿ ಹಿಂದುಳಿದ ಸಮುದಾಯದಿಂದ ಬಂದವರೆಂದು ಕಾಂಗ್ರೆಸ್ ನಾಯಕರು ಅವರನ್ನು ನಿಂದಿಸುತ್ತಿದ್ದಾರೆ ಎಂದರು.
ಇದೇನಾ ನಿಮ್ಮ ಕಾಂಗ್ರೆಸ್ ಪಕ್ಷದ ಜಾತ್ಯತೀತತೆ? ಇದೇನಾ ನಿಮ್ಮ ಪಕ್ಷದ ಸಮಾಜವಾದ? ಇದೇನಾ ನಿಮ್ಮ ಪಕ್ಷದ ಸಾಮಾಜಿಕ ನ್ಯಾಯ? ಇದೇನಾ ನಿಮ್ಮ ಕಾಂಗ್ರೆಸ್ ಪಕ್ಷ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಕೊಡುವ ಗೌರವ? ಎಂದು ಆರ್ ಅಶೋಕ್ ಪ್ರಶ್ನಿಸಿದ್ದಾರೆ.
ವೀರಪ್ಪ ಮೊಯ್ಲಿ ಅವರು ಈ ಕೂಡಲೇ ಪ್ರಧಾನಿ ಮೋದಿ ಅವರಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು, ಇಲ್ಲವಾದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮೊಯ್ಲಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
Advertisement