ಸಿಎಂ, ಡಿಸಿಎಂ ಮತ್ತು ಹೈಕಮಾಂಡ್ ನಡುವೆ ಮೂಡದ ಒಮ್ಮತ: ಗಜ ಪ್ರಸವದಂತಾದ ನಿಗಮ-ಮಂಡಳಿ ನೇಮಕಾತಿ!

ನಿಗಮ-ಮಂಡಳಿ ನೇಮಕಾತಿ ಸಂಬಂಧ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಮತ್ತು ಪಕ್ಷದ ಹೈಕಮಾಂಡ್ ಒಮ್ಮತಕ್ಕೆ ಬಾರದ ಕಾರಣ ಬಿಕ್ಕಟ್ಟು ಎದುರಾಗಿದೆ. ನಿಗಮ -ಮಂಡಳಿ ನೇಮಕಾತಿ ಮತ್ತಷ್ಟು ವಿಳಂಬವಾಗುತ್ತಿದೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್

ಬೆಂಗಳೂರು: ನಿಗಮ-ಮಂಡಳಿ ನೇಮಕಾತಿ ಸಂಬಂಧ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಮತ್ತು ಪಕ್ಷದ ಹೈಕಮಾಂಡ್ ಒಮ್ಮತಕ್ಕೆ ಬಾರದ ಕಾರಣ ಬಿಕ್ಕಟ್ಟು ಎದುರಾಗಿದೆ. ನಿಗಮ -ಮಂಡಳಿ ನೇಮಕಾತಿ ಮತ್ತಷ್ಟು ವಿಳಂಬವಾಗುತ್ತಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್ ಅವರು ಸಹಿ ಹಾಕಿದ್ದಾರೆ ಎನ್ನಲಾದ 39 ಪಕ್ಷದ ಕಾರ್ಯಕರ್ತರ ಪಟ್ಟಿ ಸೋರಿಕೆಯಾದ ನಂತರ ಸಮಸ್ಯೆ ಉಂಟಾಗಿದೆ. 2013-18ರ ಕಾಂಗ್ರೆಸ್ ಆಡಳಿತದಲ್ಲಿ  ಪ್ರಬಲ ಹುದ್ದೆಗಳನ್ನು ಅಲಂಕರಿಸಿದ ವ್ಯಕ್ತಿಗಳಿಗೂ ನಿಗಮ-ಮಂಡಳಿಯಲ್ಲಿ ಮಣೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

ಡಿ ಕೆ ಶಿವಕುಮಾರ್ ಬೆಂಬಲಿಗರಾದ ಬಿಬಿಎಂಪಿ ಮಾಜಿ ಮೇಯರ್‌ಗಳಾದ ಆರ್ ಸಂಪತ್ ರಾಜ್ ಮತ್ತು ಜಿ ಪದ್ಮಾವತಿ ಅವರ ನೇಮಕಕ್ಕೂ ವಿರೋಧ ವ್ಯಕ್ತವಾಗಿದೆ. ಇದರ ಜೊತೆಗೆ 2018 ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಕೆಲಸ ಮಾಡಿದ್ದ ನರೇಂದ್ರ ಅವರಿಗೆ ಸ್ಥಾನ ನೀಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ವಿಧಾನಸಭೆ ಚುನಾವಣೆ ವೇಳೆ ಹೈಕಮಾಂಡ್‌ಗೆ ಅನುಕೂಲ ಮಾಡಿಕೊಡುವ ಪಾತ್ರ ವಹಿಸಿದ್ದ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಮಾಜಿ ಅಧ್ಯಕ್ಷ ಎಸ್ ಇ ಸುಧೀಂದ್ರ  ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸಿಎಂ ಕಚೇರಿಗೆ ಸ್ಥಳಾಂತರಗೊಳ್ಳುವವರೆಗೂ ಅವರ ಪತ್ನಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಕೆಆರ್‌ನಗರ ಜೆಡಿಎಸ್‌ನ ಮಾಜಿ ಶಾಸಕ ಮಂಚನಹಳ್ಳಿ ಮಹದೇವ್‌ ಅವರ ಪುತ್ರಿ ಐಶ್ವರ್ಯ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಇದಕ್ಕೆ ಕೆಲ ಕುರುಬ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೋರಿಕೆಯಾದ ಪಟ್ಟಿಯಂತೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಮಜರಖಾನ್, ರಾಜ್ಯಮಟ್ಟದ ಮಂಡಳಿ ಅಧ್ಯಕ್ಷ ಸ್ಥಾನ ಜಗದೇವ ಗುತ್ತೇದಾರ್ ಅವರಿಗೆ ನೀಡಬೇಕಿತ್ತು.

ಮಾಜಿ ಸಚಿವ ಎಸ್.ಆರ್.ಪಾಟೀಲ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ವಕ್ತಾರ ರಮೇಶ್ ಬಾಬು, ಮುಖಂಡರಾದ ಸೋಮಣ್ಣ ಬೇವಿನಮರದ್, ಶಾಕೀರ್ ಸನದಿ, ಎಸ್.ಮನೋಹರ್ ಮತ್ತಿತರರು ಪಕ್ಷದ ಕಾರ್ಯಕರ್ತರ ಹೆಸರು ಪಟ್ಟಿಯಲ್ಲಿದೆ ಎಂದು ಹೇಳಲಾಗಿದೆ.

ಕೆಲವು ಬದಲಾವಣೆಗಳನ್ನು ಮಾಡಿದ ನಂತರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆಯಿದೆ. ಜನವರಿ 26 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ನಗರದ್ದೆ ಬರಲಿದ್ದು, ಜನವರಿ 29 ರಂದು ಬಿಡುಗಡೆಯಾಗುವ ಪಟ್ಟಿಗೆ ಒಪ್ಪಿಗೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿದರೂ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ನಿರಾಸೆ ಅನುಭವಿಸುವ ಮೂಲಕ ಗದ್ದಲ ಉಂಟಾಗುವ ಸಾಧ್ಯತೆಯಿದೆ. ಇದರಿಂದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

36 ಶಾಸಕರ ನಾಮನಿರ್ದೇಶನಕ್ಕೆ ಕೆಲವು ಸಚಿವರು ತಮ್ಮ ಇಲಾಖೆಗಳ ಅಡಿಯಲ್ಲಿನ ಮಂಡಳಿಗಳು ಮತ್ತು ನಿಗಮಗಳಿಗೆ ಸಂಬಂಧಿಸಿದಂತೆ ಅವರ ಅಭಿಪ್ರಾಯಗಳನ್ನು ತೆಗೆದುಕೊಳ್ಳದ ಕಾರಣ ಆಕ್ಷೇಪಣೆಗಳು ಬಂದವು. ಗೃಹ ಸಚಿವ ಡಾ.ಜಿ.ಪರಮೇಶ್ವರ ಕೂಡ ಇದೇ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ (ಸಿಎಂ ಮತ್ತು ಡಿಸಿಎಂ ಅವರಿಂದ) ಮತ್ತು ನವದೆಹಲಿಯಲ್ಲಿ (ಹೈಕಮಾಂಡ್) ಕೆಲವು ಆಕಾಂಕ್ಷಿಗಳ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ, ಜಿಲ್ಲಾ ಉಸ್ತುವಾರಿ ಸಚಿವರ ಸಲಹೆ ಪಡೆಯಬೇಕಾಗಿತ್ತು ಎಂದು  ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com