
ಬೆಂಗಳೂರು: ಮುಖ್ಯಮಂತ್ರಿ ಮತ್ತು ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಾಳಯದಲ್ಲಿ ಶುರುವಾಗಿರುವ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಈ ಸಂಬಂಧ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಾರ್ನಿಂಗ್ ನೀಡಿದರೂ ಕೇರ್ ಮಾಡದ ಸಚಿವ ಕೆ.ಎನ್ ರಾಜಣ್ಣ ಅವರು, ನೋಟಿಸ್ ಕೊಡಲಿ ಬಿಡಿ, ಕೊಟ್ಮೇಲೆ ನಾನು ಹೇಳುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೆಎನ್ ರಾಜಣ್ಣ, ನಾವು ಹೇಳಿದರೆ ಏನು ತಪ್ಪಾಗುತ್ತೆ. ವಾರ್ನಿಂಗ್ಗೆಲ್ಲಾ ನಾನು ಕೇಳುತ್ತೇನಾ. ನಾವು ಅಲ್ಲ. ಬಾಯಿಗೆ ಎಲ್ಲರೂ ಬೀಗ ಹಾಕಿಕೊಳ್ಳಬೇಕು. ಅವರು ಹೇಳಿದ್ದಕ್ಕೆ ಬಾಯಿ ಮುಚ್ಚಿಕೊಂಡು ಇರಲು ಆಗಲ್ಲ ಎಂದು ಡಿಕೆ ಶಿವಕುಮಾರ್ ಎಚ್ಚರಿಕೆಗೆ ತಿರುಗೇಟು ನೀಡಿದರು.
ಸ್ವಾಮಿಗಳು ಹೇಳಿದಂತೆ ಸಿಎಂ ಮಾಡುವುದಕ್ಕೆ ಆಗುತ್ತಾ? ಎಲ್ಲರೂ ಸುಮ್ಮನೆ ಇದ್ರೆ ನಾನೂ ಸುಮ್ಮನೆ ಇರುತ್ತೇನೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೇಳಿದ್ರೂ ನಾವು ಸುಮ್ಮನಿರಬೇಕಾ? ಸ್ವಾಮೀಜಿಗಳು ಹೇಳೋದನ್ನು ಕೇಳೋದಕ್ಕೆ ಆಗುತ್ತಾ ಎಂದು ಸಾಲು ಸಾಲು ಪ್ರಶ್ನೆ ಮಾಡಿದರು.
ಶಾಮನೂರು ಶಿವಶಂಕರಪ್ಪ ಅವರನ್ನು ಸಿಎಂ ಮಾಡಿ ಅಂತಾ ಕೆಲವು ಶ್ರೀಗಳು ಕೇಳುತ್ತಾರೆ. ಸತೀಶ್ ಜಾರಕಿಹೊಳಿ ಮಾಡಿ ಅಂತಾ ಅವ್ರ ಸ್ವಾಮೀಜಿ ಹೇಳುತ್ತಾರೆ. ಸ್ವಾಮೀಜಿ ಹೇಳಿರೋದು ಪ್ರಜಾಪ್ರಭುತ್ವಕ್ಕೆ ಅವಮಾನ. ನಾನು ಸಿಎಂ ಪರ ಅಂತಲ್ಲ, ನಾನು ಪ್ರಜಾಪ್ರಭುತ್ವ ಪರ ಎಂದು ರಾಜಣ್ಣ ಹೇಳಿದ್ದಾರೆ.
ನಾನು ಹಗರಣ ಮಾಡಿದರೆ ತನಿಖೆ ಮಾಡಲಿ. ಬಡವರ ಪರ ಸಿಎಂ ಸಿದ್ದರಾಮಯ್ಯ ಕೆಲಸ ಮಾಡುತ್ತಾರೆ. ಅದಕ್ಕೆ ಸಿದ್ದರಾಮಯ್ಯರ ಜೊತೆ ನಾವಿದ್ದೇವೆ. ಸಂಸದರಾಗಿ ಡಿ.ಕೆ.ಸುರೇಶ್ ಒಳ್ಳೆಯ ಕೆಲಸ ಮಾಡಿದ್ದಾರೆ. ಪರಿಣಾಮಕಾರಿಯಾಗಿ ಕೆಲಸ ಮಾಡಿರುವವರಲ್ಲಿ ಅವರು ಪ್ರಮುಖರು. ಯಾರು ಸೋಲಿಸಿದ್ದು, ಸ್ವಾಮೀಜಿಗಳು ಒಂದಾಗಿ ಅವರನ್ನು ಸೋಲಿಸಿದ್ದರು. ದೇವೇಗೌಡರು ಹುಟ್ಟು ಹಾಕಿದ ಸ್ವಾಮೀಜಿಗಳು ಇವರು. ಯಾರನ್ನ ಸಿಎಂ ಮಾಡಬೇಕೆಂದು ವರಿಷ್ಠರು, ಶಾಸಕರು ನಿರ್ಧರಿಸುತ್ತಾರೆ. ಸ್ವಾಮೀಜಿಗಳು ಹೇಳಿದಂತೆ ಸಿಎಂ ಮಾಡುವುದಕ್ಕೆ ಆಗಲ್ಲ ಎಂದಿದ್ದಾರೆ.
Advertisement