ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಂಗಳವಾರ ಕುಂದಾನಗರಿಗೆ ಭೇಟಿ ನೀಡಿದ ನಂತರ ಬೆಳಗಾವಿಯ ಬಿಜೆಪಿ ಕಾರ್ಯಕರ್ತರ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ಟಿಕೆಟ್ಗಾಗಿ ಹಲವು ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ, ಇದರ ನಡುವೆಯೇ ಜೆಪಿ ನಡ್ಡಾ ಹಾಲಿ ಬಿಜೆಪಿ ಸಂಸದ ಮಂಗಳ ಸುರೇಶ ಅಂಗಡಿ ಅವರ ನಿವಾಸಕ್ಕೆ ಭೇಟಿ ನೀಡಿರುವುದು ಊಹಾಪೋಹಗಳಿಗೆ ಕಾರಣವಾಗಿದೆ.
ಬಿಜೆಪಿ ಲೋಕಸಭಾ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸುವ ಒಂದು ದಿನ ಮುಂಚಿತವಾಗಿ ನಡ್ಡಾ ಭೇಟಿ ನೀಡಿರುವುದು ಸುರೇಶ್ ಅಂಗಡಿ ಅಥವಾ ಜಗದೀಶ್ ಶೆಟ್ಟರ್ ಕುಟುಂಬಕ್ಕೆ ಟಿಕೆಟ್ ಸಿಗುವ ಸಾಧ್ಯತೆಯನ್ನು ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಅವರ ಪುತ್ರಿ ಶ್ರದ್ಧಾ ಶೆಟ್ಟರ್, ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಬೆಳಗಾವಿ ವಿಭಾಗದ ಮಾಜಿ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ, ಸಂಸದೆ ಮಂಗಳಾ ಅಂಗಡಿ, ಹಾಗೂ ಅವರ ಮಗಳು ಸ್ಪೂರ್ತಿ ಪಾಟೀಲ್ ಸೇರಿದಂತೆ ಹಲವರು ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದಾರೆ. ಮಂಗಳವಾರ ಬೆಳಗಾವಿಗೆ ನಡ್ಡಾ ಆಗಮಿಸಿದ್ದ ವೇಳೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಷ್ಟವಾಗಿರುವುದರಿಂದ ಬೂತ್ ಮಟ್ಟದ ಕಾರ್ಯಕರ್ತರು ಮನಸ್ಥಿತಿಯನ್ನು ಅರಿಯಲು ನಡ್ಡಾ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದರು. ಪಕ್ಷದ ಹೈಕಮಾಂಡ್ ಯಾವುದೇ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೂ ಅವರ ಪರ ಕೆಲಸ ಮಾಡುವಂತೆ ಬಿಜೆಪಿ ಕಾರ್ಯಕರ್ತರಿಗೆ ತಾಕೀತು ಮಾಡಿದರು.
ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ನಡ್ಡಾ ಕೆಲಕಾಲ ಬಿಡುವು ಮಾಡಿಕೊಂಡು ಮಂಗಳಾ ಅಂಗಡಿಯವರ ಮನೆಗೆ ಭೇಟಿ ನೀಡಿ ಒಂದು ಗಂಟೆಗೂ ಹೆಚ್ಚು ಕಾಲ ಕಳೆದರು. ಬೆಳಗಾವಿಯ ಅಂಗಡಿ ಕುಟುಂಬ ಮತ್ತು ಹುಬ್ಬಳ್ಳಿಯ ಶೆಟ್ಟರ್ ಕುಟುಂಬಗಳು ಬೆಳಗಾವಿ ಅಥವಾ ಹುಬ್ಬಳ್ಳಿಯಿಂದ ಟಿಕೆಟ್ಗಾಗಿ ಪಕ್ಷದ ಹೈಕಮಾಂಡ್ನೊಂದಿಗೆ ತೀವ್ರ ಲಾಬಿ ನಡೆಸಿದ್ದಾರೆ. ಬೆಳಗಾವಿ ಟಿಕೆಟ್ಗೆ ಸ್ಪೂರ್ತಿ ಪಾಟೀಲ್ ಮತ್ತು ಶ್ರದ್ಧಾ ಶೆಟ್ಟರ್ ಪ್ರಬಲ ಅಭ್ಯರ್ಥಿಗಳು ಎನ್ನಲಾಗಿದೆ. ನಡ್ಡಾ ಅವರ ಭೇಟಿ ಅವರಲ್ಲಿ ಒಬ್ಬರಿಗೆ ಟಿಕೆಟ್ ಸಿಗುತ್ತದೆ ಎಂಬ ಭರವಸೆ ಮೂಡಿಸಿದೆ.
Advertisement