ಹೊಸಬ V/s ಹಿರಿಯ: ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ವಿರುದ್ಧ ಮೃಣಾಲ್ ಹೆಬ್ಬಾಳ್ಕರ್ ಸೆಣಸಾಟ

ಕುಂದಾ ನಗರಿ ಬೆಳಗಾವಿಯಲ್ಲಿ ಹಿರಿಯ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ರಾಜಕೀಯಕ್ಕೆ ಹೊಸಬರಾಗಿರುವ ಕಾಂಗ್ರೆಸ್‌ನ ಯುವ ಮುಖ ಮೃಣಾಲ್ ಹೆಬ್ಬಾಳ್ಕರ್ ನಡುವೆ ಸೆಣಸಾಟ.
ಮೃಣಾಲ್ ಹೆಬ್ಬಾಳ್ಕರ್ - ಜಗದೀಶ್ ಶೆಟ್ಟರ್
ಮೃಣಾಲ್ ಹೆಬ್ಬಾಳ್ಕರ್ - ಜಗದೀಶ್ ಶೆಟ್ಟರ್

ಬೆಂಗಳೂರು: ಕುಂದಾ ನಗರಿ ಬೆಳಗಾವಿಯಲ್ಲಿ ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ರಾಜಕೀಯಕ್ಕೆ ಹೊಸಬರಾಗಿರುವ ಕಾಂಗ್ರೆಸ್‌ನ ಯುವ ಮುಖ ಮೃಣಾಲ್ ಹೆಬ್ಬಾಳ್ಕರ್ ನಡುವೆ ಸೆಣಸಾಟಕ್ಕೆ ವೇದಿಕೆ ಸಿದ್ಧವಾಗಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ವಿರುದ್ಧ ಕಾಂಗ್ರೆಸ್‌ನಿಂದ ಸಚಿವೆ ಲಕ್ಷ್ಮಿ ಹೆಬ್ಳಾಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರು ಕಣಕ್ಕಿಳಿದಿದ್ದು, ಸ್ಪರ್ಧೆ ತೀವ್ರ ಕುತೂಹಲಕಾರಿಯಾಗಿದೆ.

ಸ್ಥಳೀಯ ಮುಖಂಡರ ವಿರೋಧದ ನಡುವೆಯೂ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಅವರ ವಿರುದ್ಧ ‘ಗೋ ಬ್ಯಾಕ್’ ಅಭಿಯಾನವನ್ನು ನಡೆಸಿ, ಟಿಕೆಟ್ ನೀಡದಂತೆ ಪಕ್ಷದ ಕೇಂದ್ರ ನಾಯಕರಿಗೂ ಮನವಿ ಮಾಡಲಾಗಿತ್ತು. ಆದರೆ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬೆಂಬಲದಿಂದ ಶೆಟ್ಟರ್ ಎರಡನೇ ಪಟ್ಟಿಯಲ್ಲಿ ಟಿಕೆಟ್ ಪಡೆದಿದ್ದಾರೆ.

ಮೃಣಾಲ್ ಹೆಬ್ಬಾಳ್ಕರ್ - ಜಗದೀಶ್ ಶೆಟ್ಟರ್
ಬೆಳಗಾವಿ ಮೇಲೆ ಶೆಟ್ಟರ್ ಕಣ್ಣು: ಸ್ಥಳೀಯ ನಾಯಕರ ಅಪಸ್ವರ; ಮತ್ತೊಂದು ಕ್ಷೇತ್ರದಲ್ಲಿ BJP ಬಂಡಾಯದ ಸೂಚನೆ!

ಕಳೆದ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ ಕಾರಣ ಶೆಟ್ಟರ್ ಬಿಜೆಪಿ ತೊರೆದಿದ್ದರು. ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಕಾಂಗ್ರೆಸ್ ಸೇರಿದ್ದರು.

ಜಗದೀಶ್ ಶೆಟ್ಟರ್ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಒಂದು ಕಾಲದಲ್ಲಿ ತಮ್ಮ ಬಲಗೈ ಬಂಟರಾಗಿದ್ದ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ವಿರುದ್ಧ ಚುನಾವಣೆಯಲ್ಲಿ ಸೋತರು. ಆದರೂ ಶೆಟ್ಟರ್ ಅವರನ್ನು ಕಾಂಗ್ರೆಸ್ ಎಂಎಲ್ಸಿ ಮಾಡಿತು. ಈಗ ಲೋಕಸಭೆ ಚುನಾವಣೆಗೂ ಮುನ್ನ ಮತ್ತೆ ಬಿಜೆಪಿ ಸೇರಿದ್ದಾರೆ.

ಶೆಟ್ಟರ್ ಅವರು ಈಗ ತಮ್ಮ ರಾಜಕೀಯ ಜೀವನದ ಸೂಕ್ಷ್ಮ ಘಟ್ಟದಲ್ಲಿದ್ದು, ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲಾದ ಬೆಳಗಾವಿ ಕ್ಷೇತ್ರವನ್ನು ಉಳಿಸಿಕೊಳ್ಳುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಾಗಿದೆ.

ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಯುವ ಮುಖ, ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರನ್ನು ಸೆಳೆಯುವ ಭರವಸೆಯಲ್ಲಿದ್ದಾರೆ. ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ.

ಮೃಣಾಲ್ ಹೆಬ್ಬಾಳ್ಕರ್ - ಜಗದೀಶ್ ಶೆಟ್ಟರ್
ಹೆಬ್ಬಾಳ್ಕರ್-ಜಾರಕಿಹೊಳಿ ಕೋಲ್ಡ್ ವಾರ್: ಬೆಳಗಾವಿ ಕಾರ್ಯಕರ್ತರಿಗಿಲ್ಲ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ!

ಬೆಳಗಾವಿ ಲೋಕಸಭಾ ಕ್ಷೇತ್ರವು ಅರಭಾವಿ, ಗೋಕಾಕ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮಾಂತರ, ಬೈಲಹೊಂಗಲ, ಸೌಂದತ್ತಿ ಯಲ್ಲಮ್ಮ ಮತ್ತು ರಾಮದುರ್ಗ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಹೊಂದಿದ್ದರೆ, ಕಾಂಗ್ರೆಸ್ ಐದು ಶಾಸಕರು ಹೊಂದಿದೆ.

ಮಾಜಿ ಕೇಂದ್ರ ಸಚಿವ ದಿವಂಗತ ಸುರೇಶ ಅಂಗಡಿ ಅವರು 1999, 2004, 2009, 2014 ಮತ್ತು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಬೆಳಗಾವಿಯಿಂದ ಗೆದ್ದು ಎರಡು ದಶಕಗಳ ಕಾಲ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅವರ ನಿಧನದ ನಂತರ, ಅವರ ಪತ್ನಿ ಮಂಗಳಾ ಅಂಗಡಿ 2021 ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು.

ಈ ಸ್ಥಾನವನ್ನು 1996 ರಲ್ಲಿ JD(S) ಗೆದ್ದುಕೊಂಡಿತು. 1957 ರಿಂದ 1991 ರವರೆಗೆ ಕಾಂಗ್ರೆಸ್ ಬೆಳಗಾವಿ ಸ್ಥಾನವನ್ನು ಹೊಂದಿತ್ತು. ಸುರೇಶ ಅಂಗಡಿ ಅವರು 2019 ರಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದರು ಮತ್ತು ಕಾಂಗ್ರೆಸ್ ಅಭ್ಯರ್ಥಿಯನ್ನು ಸುಮಾರು ಮೂರು ಲಕ್ಷ ಮತಗಳಿಂದ ಸೋಲಿಸಿದ್ದರು. ಆದರೆ, ಉಪಚುನಾವಣೆಯಲ್ಲಿ ಗೆಲುವಿನ ಅಂತರ 5,240 ಮತಗಳಿಗೆ ಕುಸಿದಿದೆ. ಆಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com