ಬೆಂಗಳೂರು: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಮೂರು ಪಕ್ಷಗಳು ತಮ್ಮ ಕಾರ್ಯತಂತ್ರ ರೂಪಿಸುತ್ತಿವೆ, ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ಪಣ ತೊಟ್ಟಿವೆ.
ಕಳೆದ ನಾಲ್ಕು ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಎರಡಂಕಿಯ ಸ್ಥಾನಗಳನ್ನು ಮುಟ್ಟಿಲ್ಲ, ಹೀಗಾಗಿ ಈ ಬಾರಿ ತನ್ನ 20 ವರ್ಷಗಳ ಹಿಂದಿನ ಹಣೆ ಬರಹ ಬದಲಿಸಲು ಕಾಂಗ್ರೆಸ್ ಯತ್ನಿಸುತ್ತಿದೆ.
1999 ರಲ್ಲಿ ಕಾಂಗ್ರೆಸ್ ಪಕ್ಷ 18 ಸ್ಥಾನಗಳನ್ನು ಗೆದ್ದಿತ್ತು. 2004 ರಲ್ಲಿ, ಇದು ಎಂಟಕ್ಕೆ ಇಳಿಯಿತು. 2009 ರಲ್ಲಿ ಆರು ಮತ್ತು 2014 ರಲ್ಲಿ ಒಂಬತ್ತಕ್ಕೆ ಸೀಮಿತವಾಯಿತು. ಕಳೆದ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಆದರೆ, ಈ ಬಾರಿ ಕಾಂಗ್ರೆಸ್ ಪಕ್ಷ ಕನಿಷ್ಠ 20 ಸ್ಥಾನ ಗಳಿಸುವ ವಿಶ್ವಾಸದಲ್ಲಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣಾ ಫಲಿತಾಂಶ ಮತ್ತು ಸಾಮಾಜಿಕ ನ್ಯಾಯದ ಕೆಲಸಗಳು ತಮ್ಮಲ್ಲಿ ಆತ್ಮವಿಶ್ವಾಸ ಮೂಡಿಸಿವೆ ಎಂದು ಕಾಂಗ್ರೆಸ್ ಶಾಸಕ ಹಾಗೂ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಉಪಾಧ್ಯಕ್ಷ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
ಕಳೆದ ಹತ್ತು ತಿಂಗಳಲ್ಲಿ ಕೈಗೊಂಡ ನಮ್ಮ ಸಾಮೂಹಿಕ ಸಂಪರ್ಕ ಕಾರ್ಯಕ್ರಮಗಳು, ಗ್ಯಾರಂಟಿಗಳು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ನಮಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಅದೇ ಸಮಯದಲ್ಲಿ, ಎಲ್ಲಾ ದಕ್ಷಿಣ ರಾಜ್ಯಗಳು ಹಣ ಹಂಚಿಕೆಯಲ್ಲಿ ಕೇಂದ್ರದಿಂದ ತಮಗೆ ಆಗಿರುವ ಅನ್ಯಾಯದಿಂದ ಬೇಸತ್ತಿವೆ. "ಇತ್ತೀಚಿನ ಚುನಾವಣಾ ಬಾಂಡ್ ಬಹಿರಂಗಪಡಿಸಿದಂತೆ ಎನ್ಡಿಎ ಭ್ರಷ್ಟಾಚಾರದಲ್ಲಿ ತೊಡಗಿರುವುದರಿಂದ ಕಳೆದ ಒಂದು ತಿಂಗಳಲ್ಲಿ ಕಾಂಗ್ರೆಸ್ ಬಗ್ಗೆ ಜನರ ಗ್ರಹಿಕೆ ಬದಲಾಗಿದೆ ಎಂದು ಅವರು ಹೇಳಿದರು.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಪ್ರಾದೇಶಿಕ ಪಕ್ಷದ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಈ ಅಂಶವೂ ಕೂಡ ಕಾಂಗ್ರೆಸ್ಗೆ ಸಹಾಯ ಮಾಡುತ್ತದೆ. ಜೆಡಿಎಸ್ -ಬಿಜೆಪಿ ಮೈತ್ರಿಯನ್ನು ಕಾರ್ಯಕರ್ತರು ತಿರಸ್ಕರಿಸಿಸಿದ್ದಾರೆ, ಹೀಗಾಗಿ ಅನೇಕರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಈ ಬಾರಿಯ ಚುನಾವಣೆ ನಿಸ್ಸಂದೇಹವಾಗಿ ಕುತೂಹಲ ಮೂಡಿಸಿದೆ ಎಂದು ರಾಜಕೀಯ ವಿಮರ್ಶಕ ಪ್ರೊ.ಸಂದೀಪ್ ಶಾಸ್ತ್ರಿ ಹೇಳಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮೇಲೆ ಅವಲಂಬಿತವಾಗಿದೆ ಮತ್ತು ಬಿಜೆಪಿಯೊಳಗಿನ ರಾಜಕೀಯ ಪ್ರಕ್ಷುಬ್ಧತೆ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತದೆ ಎಂದು ಅವರು ಭಾವಿಸುತ್ತಾರೆ. ಈ ಬಾರಿ ಹೊಸ ಮುಖಗಳನ್ನು ಮತ್ತು ಮಹಿಳಾ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕಿಳಿಸುವ ಕುತೂಹಲಕಾರಿ ಹೋರಾಟಕ್ಕೆ ಕಾಂಗ್ರೆಸ್ ಕೈಹಾಕಿದೆ ಎಂದು ಹೇಳಿದರು. ಆದರೆ ರಾಜ್ಯದಲ್ಲಿ ಪಕ್ಷಕ್ಕೆ ಮೋದಿ ಅಂಶ ಅತ್ಯಂತ ಸವಾಲಾಗಿ ಪರಿಣಮಿಸಲಿದೆ. ಅಲ್ಲದೆ, ಅನೇಕ ಹಾಲಿ ಸಚಿವರು ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ ಎಂದು ಅವರು ಹೇಳಿದರು.
Advertisement