ವಿಧಾನ ಪರಿಷತ್ ಗೆ ಇಬ್ಬರ ನಾಮ ನಿರ್ದೇಶನ: ಸರ್ಕಾರ- ರಾಜಭವನ ನಡುವೆ ಮತ್ತೊಮ್ಮೆ ಘರ್ಷಣೆ ಸಾಧ್ಯತೆ
ಬೆಂಗಳೂರು: ರಾಜ್ಯ ವಿಧಾನಪರಿಷತ್ ಗೆ ಇಬ್ಬರ ನಾಮ ನಿರ್ದೇಶನ ವಿಚಾರವಾಗಿ ಮತ್ತೊಮ್ಮೆ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನಡುವೆ ಘರ್ಷಣೆ ನಡೆಯುವ ಸಾಧ್ಯತೆಯಿದೆ.
ಸರ್ಕಾರವು ವಿಶೇಷವಾಗಿ ಈ ಬಾರಿ ಪರಿಷತ್ತಿಗೆ ನಾಮನಿರ್ದೇಶನ ಮಾಡಲು ರಾಜಕಾರಣಿಗಳನ್ನು ಹೊರತುಪಡಿಸಿ ವಿವಿಧ ಕ್ಷೇತ್ರಗಳ ಪ್ರತಿಷ್ಠಿತ ವ್ಯಕ್ತಿಗಳ ಹೆಸರನ್ನು ಪ್ರಸ್ತಾಪಿಸಬೇಕಿದೆ. ಸಮಾಜ ಸೇವೆ ಮತ್ತು ಕ್ರೀಡಾ ಕೋಟಾಗಳ ಅಡಿಯಲ್ಲಿ ಕ್ರಮವಾಗಿ ನಾಮನಿರ್ದೇಶನಗೊಂಡಿರುವ ಹಾಲಿ ಎಂಎಲ್ಸಿಗಳಾದ ಯುಬಿ ವೆಂಕಟೇಶ್ ಮತ್ತು ಪ್ರಕಾಶ್ ರಾಥೋಡ್ ಅವರು ಅಕ್ಟೋಬರ್ 29, 2024 ರಂದು ನಿವೃತ್ತರಾಗುತ್ತಿದ್ದಾರೆ.
ಹೀಗಾಗಿ ಈ ಸ್ಥಾನಗಳಿಗೆ ಪ್ರತಿಷ್ಠಿತ ವ್ಯಕ್ತಿಗಳನ್ನು ಆಯ್ಕೆ ಮಾಡುವ ಸವಾಲು ಸರಕಾರದ ಮುಂದಿದೆ. ಇಲ್ಲದಿದ್ದರೆ, ಅಭ್ಯರ್ಥಿಗಳು ನಾಮನಿರ್ದೇಶನಕ್ಕೆ ಅರ್ಹರಲ್ಲ ಎಂದು ಪರಿಗಣಿಸಿದರೆ ರಾಜ್ಯಪಾಲರು ಪ್ರಸ್ತಾವನೆಗಳನ್ನು ತಿರಸ್ಕರಿಸಬಹುದು ಎಂದು ಮೂಲಗಳು ತಿಳಿಸಿವೆ. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಫ್ರೈಡೇ ಮ್ಯಾನ್ ಎಂದು ಪರಿಗಣಿಸಿದ ವೆಂಕಟೇಶ್ ಮತ್ತು ಎಂಎಲ್ಸಿ ಬಿಕೆ ಹರಿಪ್ರಸಾದ್ ಅವರ ನಿಕಟವರ್ತಿ ಪ್ರಕಾಶ್ ರಾಥೋಡ್ ಅವರು ಸರ್ಕಾರದಿಂದ ಮರುನಾಮನಿರ್ದೇಶನಗೊಳ್ಳುವಲ್ಲಿ ಯಶಸ್ವಿಯಾಗಲಿದ್ದಾರೆಯೇ ಎಂಬುದು ಕುತೂಹಲಕಾರಿಯಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಪ್ತ ವಿಜಯ್ ಮುಳುಗುಂದ, ಹಿರಿಯ ನಾಯಕ ಹಾಗೂ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ಸಾಹಿತಿ ಪ್ರೊ. ಕೆ.ಇ.ರಾಧಾಕೃಷ್ಣ ಸೇರಿದಂತೆ ಇತರರು ಸಮಾಜ ಸೇವೆ, ಕಲೆ, ಸಂಸ್ಕೃತಿ, ಸಾಹಿತ್ಯಿಕ ಕೋಟಾದಡಿ ನಾಮನಿರ್ದೇಶನಕ್ಕೆ ಲಾಬಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ