ಕೃಷ್ಣ ಭೈರೇಗೌಡ ಕೃಷಿ ಸಚಿವರಾಗಿದ್ದು ರಾಜ್ಯದ ದೌರ್ಭಾಗ್ಯ; ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮನೆಹಾಳು ಕೆಲಸ ಮಾಡಬಾರದು: ಆರ್.ಅಶೋಕ್

ನನ್ನನ್ನು ನಿಂದಿಸುವ ಭರದಲ್ಲಿ ಕಡಲೆಕಾಯಿ ಬೆಳೆಯುವ ಸಾಮಾನ್ಯ ರೈತನಿಗೆ ಇರುವಷ್ಟು 'ಕನಿಷ್ಠ ಜ್ಞಾನ' ಎಂದು ರೈತರನ್ನು ಯಾಕೆ ಹೀಯಾಳಿಸುತ್ತೀರಿ ಸನ್ಮಾನ್ಯ ಕೃಷ್ಣ ಭೈರೇಗೌಡರೇ, ಎಲ್ಲರಿಗೂ ತಮ್ಮ ರೀತಿ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಿಕೊಂಡು ಬರುವಷ್ಟು ಅನುಕೂಲ ಇರುವುದಿಲ್ಲ.
ವಿಪಕ್ಷ ನಾಯಕ ಆರ್. ಅಶೋಕ್
ವಿಪಕ್ಷ ನಾಯಕ ಆರ್. ಅಶೋಕ್
Updated on

ಬೆಂಗಳೂರು: ರೈತರ ಬಗ್ಗೆ ಕೀಳರಿಮೆ ಇರುವ ಕೃಷ್ಣ ಭೈರೇಗೌಡರು ಐದು ವರ್ಷಗಳ ಕಾಲ ಕೃಷಿ ಸಚಿವರಾಗಿದ್ದು ಈ ರಾಜ್ಯದ ದೌರ್ಭಾಗ್ಯ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ (R Ashok) ಟೀಕಿಸಿದ್ದಾರೆ.

ನನ್ನನ್ನು ನಿಂದಿಸುವ ಭರದಲ್ಲಿ ಕಡಲೆಕಾಯಿ ಬೆಳೆಯುವ ಸಾಮಾನ್ಯ ರೈತನಿಗೆ ಇರುವಷ್ಟು 'ಕನಿಷ್ಠ ಜ್ಞಾನ' ಎಂದು ರೈತರನ್ನು ಯಾಕೆ ಹೀಯಾಳಿಸುತ್ತೀರಿ ಸನ್ಮಾನ್ಯ ಕೃಷ್ಣ ಭೈರೇಗೌಡರೇ, ಎಲ್ಲರಿಗೂ ತಮ್ಮ ರೀತಿ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಿಕೊಂಡು ಬರುವಷ್ಟು ಅನುಕೂಲ ಇರುವುದಿಲ್ಲ. ರಾಜಕಾರಣದಲ್ಲಿ ಕುಟುಂಬದ ಹಿನ್ನೆಲೆ ಇಲ್ಲದಂತಹ ನಮ್ಮಂತಹ ಸಾಮಾನ್ಯರೂ ಇದ್ದೀವಿ. ರೈತರ ಬಗ್ಗೆ ಇಂತಹ ಕೀಳರಿಮೆ ಇರುವ ತಮ್ಮಂತಹವರು ಐದು ವರ್ಷಗಳ ಕಾಲ ರಾಜ್ಯದ ಕೃಷಿ ಸಚಿವರಾಗಿದ್ದರಲ್ಲ, ಅದೇ ನಮ್ಮ ರಾಜ್ಯದ ದೌರ್ಭಾಗ್ಯ. ಜಿಎಸ್ ಟಿ ಸಭೆಯಲ್ಲಿ ತೆರಿಗೆ ಹಂಚಿಕೆ ಬಗ್ಗೆ ಅಧಿಕೃತವಾಗಿ ಚರ್ಚೆ ನಡೆಯುವುದಿಲ್ಲ ಎಂಬ ಅರಿವು ನನಗೂ ಇದೆ. ಆದರೆ ಜಿಎಸ್ ಟಿ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವರು, ರಾಜ್ಯಗಳ ಹಣಕಾಸು ಸಚಿವರು ಅಥವಾ ಇನ್ಯಾರಾದರೂ ಪ್ರತಿನಿಧಿ ಮಂತ್ರಿಗಳು ಬಂದಿರುತ್ತಾರೆ ಅಲ್ಲವೇ? ಇಂತಹ ವೇದಿಕೆಯಲ್ಲಿ ಅನೌಪಚಾರಿಕವಾಗಿ ತೆರಿಗೆ ಹಂಚಿಕೆ ಬಗ್ಗೆ ಚರ್ಚಿಸಿ ಒಂದು ಒಮ್ಮತ ಸೃಷ್ಟಿಸುವ ಪ್ರಯತ್ನ ಮಾಡಬಹುದಿತ್ತಲ್ಲವೇ? ನನ್ನ ಮಾತಿನ ಅರ್ಥ ಇದಾಗಿತ್ತು.

ಕೇರಳದಲ್ಲಿ ಇತ್ತೀಚೆಗೆ ಐದು ಬಿಜೆಪಿಯೇತರ ಸರ್ಕಾರಗಳ ಪ್ರತಿನಿಧಿಗಳು ಒಟ್ಟಿಗೆ ಸೇರಿ ಸಭೆ ಮಾಡಿದರಲ್ಲ, ಅದು ತೆರಿಗೆ ಹಂಚಿಕೆ ಬಗ್ಗೆ ಚರ್ಚಿಸುವ ವೇದಿಕೆನಾ? ವೇದಿಕೆಗಳ ಮೇಲೆ ರಾಜಕೀಯ ಭಾಷಣ ಮಾಡಿ ಕೇಂದ್ರ ಸಚಿವರಿಗೆ ಬಹಿರಂಗ ಚರ್ಚೆಗೆ ಬರಲು ಸವಾಲು ಹಾಕುತ್ತೀರಲ್ಲ, ತೆರಿಗೆ ಹಂಚಿಕೆ ಬಗ್ಗೆ ಚರ್ಚಿಸಲು ಅದು ವೇದಿಕೆನಾ? ದೆಹಲಿ ಚಲೋ ಅಂತ ಬೀದಿನಾಟಕ ಮಾಡಿ, ಜಂತರ್ ಮಂತರ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡರಲ್ಲ, ತೆರಿಗೆ ಹಂಚಿಕೆ ಬಗ್ಗೆ ಚರ್ಚೆ ಮಾಡಲು ಅದು ವೇದಿಕೆನಾ? ಚುನಾವಣೆ ಬಂದರೆ ಸಾಕು, ಸರ್ಕಾರಕ್ಕೆ ಒಂಚೂರು ಮುಜುಗರ ಆದರೆ ಸಾಕು ಜನರ ಗಮನ ಬೇರೆಡೆ ಸೆಳೆಯಲು 'ನನ್ನ ತೆರಿಗೆ ನನ್ನ ಹಕ್ಕು' ಅಂತ ನಾಟಕ ಶುರು ಮಾಡುತ್ತೀರಲ್ಲ, ಸಾಮಾಜಿಕ ಜಾಲತಾಣಗಳು ತೆರಿಗೆ ಹಂಚಿಕೆ ಬಗ್ಗೆ ಚರ್ಚೆ ಮಾಡಲು ವೇದಿಕೆನಾ? ಈ ತಂತ್ರಗಾರಿಕೆ, ಟೂಲ್ ಕಿಟ್ ರಾಜಕಾರಣ ಜನಸಾಮಾನ್ಯರಿಗೆ ಅರ್ಥ ಆಗೋದಿಲ್ಲ ಅಂತ ಎಣಿಸಿದ್ದೀರಾ?ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ವಿಪಕ್ಷ ನಾಯಕ ಆರ್. ಅಶೋಕ್
ಸಿದ್ದರಾಮಯ್ಯ ಅಲ್ಲ, ಮೊದಲೂ ನೀವು ರಾಜೀನಾಮೆ ನೀಡಿ: ಬಿಜೆಪಿ ನಾಯಕರಿಗೆ ಕೃಷ್ಣ ಬೈರೇಗೌಡ ತಿರುಗೇಟು

ರಾಜ್ಯದ ಹಿತಾಸಕ್ತಿ ಕಾಪಾಡಬೇಕು, ರಾಜ್ಯದ ಬೊಕ್ಕಸಕ್ಕೆ ಒಂದು ನಾಲ್ಕು ಕಾಸು ಹೆಚ್ಚು ಬರಬೇಕು ಎನ್ನುವ ಉದ್ದೇಶ ತಮಗೆ ಮತ್ತು ತಮ್ಮ ಕಾಂಗ್ರೆಸ್ ಪಕ್ಷಕ್ಕೆ ಕಿಂಚಿತ್ತಾದರೂ ಇದ್ದಿದ್ದರೆ ತಾವು, ತಮ್ಮ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಜೊತೆ ವ್ಯವಹರಿಸುವ ರೀತಿಯೇ ಬೇರೆ ಇರುತ್ತಿತ್ತು.

ಆದರೆ ಸತ್ಯ ಏನಪ್ಪಾ ಅಂದರೆ, ನಿಮಗೆ ಅದ್ಯಾವ ಸದುದ್ದೇಶವೂ ಇಲ್ಲ. ತಮಗೆ ಬೇಕಾಗಿರೋದೆಲ್ಲ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮೇಲೆ ಗೊಬೆ ಕೂರಿಸೋದು, ಆ ಮೂಲಕ ತಮ್ಮ ಸರ್ಕಾರದ ವೈಫಲ್ಯಗಳನ್ನ, ಭ್ರಷ್ಟಾಚಾರವನ್ನ, ತಪ್ಪುಗಳನ್ನ ಮುಚ್ಚಿಕೊಳ್ಳೋದು. ಜನರ ಗಮನ ಬೇರೆಡೆ ಸೆಳೆಯೋದು. ಬಿಜೆಪಿ ವಿರುದ್ಧ ಒಂದು narrative ಸೃಷ್ಟಿಸೋದು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮನೆಹಾಳು ಮಾಡುವ ಕೆಲಸ ಮಾಡಬಾರದು. ಇವತ್ತು ನೀವು "ನಮ್ಮ ತೆರಿಗೆ ನಮ್ಮ ಹಕ್ಕು" ಎನ್ನುತ್ತೀರಿ. ನಾಳೆ ಬೆಂಗಳೂರಿನ ಜನತೆ ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುತ್ತಾರೆ. ಮುಂದೊಂದು ದಿನ ಮಹದೇವಪುರದ ಜನ ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುತ್ತಾರೆ. ಹೀಗೆ ಮುಂದುವರೆದರೆ ಪ್ರತಿಯೊಂದು ಧರ್ಮ, ಜಾತಿಯವರು ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುತ್ತಾರೆ. ಹೀಗಾದರೆ ಇದಕ್ಕೆ ಕೊನೆ ಎಲ್ಲಿ?

ಇದೆಲ್ಲಾ ತಮಗೆ ಗೊತ್ತಿಲ್ಲ ಎಂದೇನಿಲ್ಲ. ಬಹುಶಃ ಅತೀ ಬುದ್ಧಿವಂತಿಕೆ ಪ್ರದರ್ಶನ ಮಾಡುವ ಮೂಲಕ ಹೈಕಮಾಂಡ್ ಗಮನ ಸೆಳೆದು ಮುಖ್ಯಮಂತ್ರಿ ಕುರ್ಚಿಗೆ ನನ್ನದೂ ಒಂದು ಇರಲಿ ಅಂತ ಟವಲ್ ಹಾಕುತ್ತಿರಬಹುದು. ದುರಾಡಳಿತದಿಂದ ಬೇಸತ್ತಿರುವ ಕರ್ನಾಟಕಕ್ಕೆ ನಿಮ್ಮಂತಹ ಸುಶಿಕ್ಷಿತ, ಸಭ್ಯ, ಬುದ್ಧಿವಂತ ನಾಯಕರು ಮುಖ್ಯಮಂತ್ರಿ ಆದರೆ ಒಳ್ಳೆಯದೇ! ಆದರೆ ನಿಮ್ಮ ಕಾಂಗ್ರೆಸ್ ಹೈಕಮಾಂಡ್ ಗೆ ಬೇಕಾಗಿರೋದು 'ಸಂಪನ್ಮೂಲ' ಒದಗಿಸುವ ಮಹಾನಾಯಕರೇ ಹೊರತು ನಿಮ್ಮಂತಹ ಸಂಪನ್ಮೂಲ ವ್ಯಕ್ತಿಗಳಲ್ಲ. ಒಟ್ಟಿನಲ್ಲಿ ನಿಮಗೆ ಶುಭವಾಗಲಿ ಲೇವಡಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com