ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನದ ಮೇಲೆ ಹಲವು ನಾಯಕರ ಕಣ್ಣು: ಶಿವಾನಂದ ಪಾಟೀಲ್- ಎಂಬಿ ಪಾಟೀಲ್ ನಡುವೆ ಮಾತಿನ ಚಕಮಕಿ

ಶಿವಾನಂದ ಪಾಟೀಲ್ ಹೇಳಿದಂತೆ ಒಂದು ವೇಳೆ ಹಿರಿತನ ಪರಿಗಣಿಸುವುದಾದರೆ, ನಾನು ಕಾಯುತ್ತೇನೆ. ಅದನ್ನು ಒಪ್ಪಿಕೊಳ್ಳೋಣ. ಆದರೆ, ಇತ್ತೀಚೆಗೆ ಜನತಾದಳ, ಬಿಜೆಪಿಯಿಂದ ಬಂದಿರುವ ಅವರು ಮುಖ್ಯಮಂತ್ರಿ ರೇಸ್ ನಲ್ಲಿ ಇರಲು ಸಾಧ್ಯವಿಲ್ಲ.
ಎಂಬಿ ಪಾಟೀಲ್, ಶಿವಾನಂದ ಪಾಟೀಲ್
ಎಂಬಿ ಪಾಟೀಲ್, ಶಿವಾನಂದ ಪಾಟೀಲ್
Updated on

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿರುವುದರಿಂದ ಇತ್ತ ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆಗಾಗಿ ಆಕಾಂಕ್ಷಿಗಳ ನಡುವೆ ಪೈಪೋಟಿಯ ಲಕ್ಷಣಗಳು ಕಂಡುಬರುತ್ತಿವೆ.

ಆದಾಗ್ಯೂ, ಎಲ್ಲಾ ಕಾಂಗ್ರೆಸ್ ಮುಖಂಡರು ಮತ್ತು ಸಚಿವರು ಸಿದ್ದರಾಮಯ್ಯ ಅವರೇ ಸಿಎಂ ಹುದ್ದೆಯಲ್ಲಿ ಮುಂದುವರೆಯುತ್ತಾರೆ ಎಂದು ಹೇಳುತ್ತಿದ್ದಾರೆ. ಸಿಎಂ ಹುದ್ದೆಗೆ ಹಿರಿತನವೇ ಮುಖ್ಯವಾಗುವ ವಿಚಾರದಲ್ಲಿ ಹಿರಿಯ ನಾಯಕರಾದ ಎಂಬಿ ಪಾಟೀಲ್ ಮತ್ತು ಶಿವಾನಂದ ಪಾಟೀಲ್ ನಡುವೆ ಮಾತಿನ ಚಕಮಕಿ ನಡೆದಿದೆ.

ಕಾಂಗ್ರೆಸ್ ನಲ್ಲಿ ಸಿಎಂ ಆಗಲು ಆಗಲು ಎಂ ಬಿ ಪಾಟೀಲ್ ಗಿಂತ ಬಹಳ ಜನರು‌ ಹಿರಿಯರಿದ್ದಾರೆ ಎಂದು ಶಿವಾನಂದ ಪಾಟೀಲ್ ನೀಡಿದ ಹೇಳಿಕೆಗೆ ಎಂಬಿ ಪಾಟೀಲ್ ತಿರುಗೇಟು ನೀಡಿದ್ದಾರೆ. ವಿಜಯಪುರ ಜಿಲ್ಲೆ ‌ಬಬಲೇಶ್ವರ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಮಾತನಾಡಿದ ಎಂಬಿ ಪಾಟೀಲ್, ನನಗಿಂತ ಹಿರಿಯರಿದ್ದಾರೆ, ಆದರೆ ಹಿರಿತನ ಮಾತ್ರ ಮಾನದಂಡವಲ್ಲ, ಈಗ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ, ಅವರು ಇರುತ್ತಾರೆ ಮತ್ತು ಮುಂದೆಯೂ ಮುಂದುವರಿಯುತ್ತಾರೆ, ಆದ್ದರಿಂದ ಸಿಎಂ ಬದಲಾಯಿಸುವ ಮಾತು ಅಪ್ರಸ್ತುತ ಎಂದರು.

ಶಿವಾನಂದ ಪಾಟೀಲ್ ಹೇಳಿದಂತೆ ಒಂದು ವೇಳೆ ಹಿರಿತನ ಪರಿಗಣಿಸುವುದಾದರೆ, ನಾನು ಕಾಯುತ್ತೇನೆ. ಅದನ್ನು ಒಪ್ಪಿಕೊಳ್ಳೋಣ. ಆದರೆ, ಇತ್ತೀಚೆಗೆ ಜನತಾದಳ, ಬಿಜೆಪಿಯಿಂದ ಬಂದಿರುವ ಅವರು ಮುಖ್ಯಮಂತ್ರಿ ರೇಸ್ ನಲ್ಲಿ ಇರಲು ಸಾಧ್ಯವಿಲ್ಲ.

ವಿಜಯಪುರ ಜಿಲ್ಲೆಯಿಂದ ಯಾರಾದರೂ ಸಿಎಂ ಆಗಬೇಕಾದರೆ ನಾನು ಹೊರತುಪಡಿಸಿದರೆ ಬೇರೆ ಯಾರೂ ಇಲ್ಲ. ಶಿವಾನಂದ ಪಾಟೀಲ್ ಹೇಳಿಕೆ ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ತಳ್ಳಿಹಾಕಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ, ಸಿದ್ದರಾಮಯ್ಯ, ಆರ್ ವಿ ದೇಶಪಾಂಡೆ ನನಗಿಂತ ಹಿರಿಯರಿದ್ದಾರೆ. ಸತೀಶ್ ಜಾರಕಿಹೊಳಿ ನನಗಿಂತ ಕಿರಿಯರು, ಪರಮೇಶ್ವರ್ ನಾವೆಲ್ಲ ಒಂದೇ ಹಂತದಲ್ಲಿದ್ದೇವೆ. ಸಿಎಂ ಮಾಡುವ ವೇಳೆ ಸೀನಿಯರ್ ಜೂನಿಯಾರಿಟಿ ಪ್ರಶ್ನೆ ಬರಲ್ಲ. ಈಗ ಸಿಎಂ ಕುರ್ಚಿ ಖಾಲಿ ಇಲ್ಲ ಎಂದರು.

ಎಂಬಿ ಪಾಟೀಲ್, ಶಿವಾನಂದ ಪಾಟೀಲ್
ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ, ಸರ್ಕಾರದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ: ಡಿ ಕೆ ಶಿವಕುಮಾರ್

ಇದಕ್ಕೂ ಮುನ್ನಾ ಮಾತನಾಡಿದ ಶಿವಾನಂದ ಪಾಟೀಲ್, ಎಂಬಿ ಪಾಟೀಲ್ ಗಿಂತ ಕಾಂಗ್ರೆಸ್ ನಲ್ಲಿ ಹಲವರು ಹಿರಿಯರಿದ್ದಾರೆ. ಹಿರಿಯರು ಇರುವಾಗ ಕಾಯಬೇಕಲ್ಲವೇ?’’ ಎಂದು ಪ್ರಶ್ನಿಸಿದರು. ಕೆಲಸ ಮಾಡಿ ಪಕ್ಷ ಕಟ್ಟಿಕೊಂಡು ಕಾಯುತ್ತಿರುವ ಹಿರಿಯರು ಸಿಎಂ ಆಗಿದರೆ ಖುಷಿಯಾಗುತ್ತೆ ಅಂತ ಹೇಳಿದ್ದೆ ಹೊರತು ಬೇರೇನೂ ಅಲ್ಲ ಎಂದರು. ಈ ನಡುವೆ ಮಾತನಾಡಿದ ಸತೀಶ್ ಜಾರಕಿಹೊಳಿ , ಸಿಎಂ ಬದಲಾವಣೆ ಈಗ ಅಪ್ರಸ್ತುತ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ನಾನು 2028ರವರೆಗೂ ಕಾಯುತ್ತೇನೆ ಎಂದರು. ಹಿರಿಯ ಕಾಂಗ್ರೆಸ್ ನಾಯಕ ಆರ್. ವಿ. ದೇಶಪಾಂಡೆ ಕೂಡಾ ಇತ್ತೀಚಿಗೆ ಮುಖ್ಯಮಂತ್ರಿ ಆಕಾಂಕ್ಷಿ ಎಂದಿದ್ದರು.

ಈ ಮಧ್ಯೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಹಿರಿಯ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್, ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ಪೈಪೋಟಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ತೀವ್ರಗೊಳ್ಳಲಿದೆ. ಈ ಕಾರಣದಿಂದ ಮುಂದಿನ ದಿನಗಳಲ್ಲಿ ಸರ್ಕಾರ ತೊಂದರೆಗೆ ಸಿಲುಕುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com