
ಬೆಳಗಾವಿ: ಜನಿವಾರ ವಿಚಾರವನ್ನು ಬಿಜೆಪಿಯವರು ಅನವಶ್ಯಕವಾಗಿ ದೊಡ್ಡದು ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿ ಶಾಸಕರು ತಾವೇ ನೇತೃತ್ವ ವಹಿಸಿ ಪ್ರತಿಭಟನೆ ಮಾಡಿದ್ದಾರೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಹಿಜಾಬ್ ವಿವಾದ ನಡೆದಿತ್ತು, ಈಗ ಜನಿವಾರ ವಿವಾದ ನಡೆದಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಸಿಯಿಸಿದ ಅವರು, ಜಿಲ್ಲೆಯಲ್ಲಿ ಬೇರೆ ಯಾರಿಗಾದ್ರೂ ಅನ್ಯಾಯವಾದಾಗ ಈ ಶಾಸಕರು ಬರೋದಿಲ್ಲ. ಆದರೆ ಎಲ್ಲರನ್ನೂ ಒಂದೇ ರೀತಿ ಕಾಣಬೇಕು ಅಲ್ಲವಾ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಗೆ ತಿರುಗೇಟು ಕೊಟ್ಟರು.
ಹಿಜಾಬ್ ವಿವಾದದ ಸಂಬಂಧ ಮಾತನಾಡಿದ ಅವರು, ಅದು ಬೇರೆ, ಈ ವಿಷಯ ಬೇರೆ. ಎರಡನ್ನೂ ಹೋಲಿಕೆ ಮಾಡಲು ಆಗಲ್ಲ. ಬಿಜೆಪಿಯವರು ಪ್ರತಿಭಟನೆ ಮಾಡುತ್ತಾರೆ. ಈಗ ಅವರಿಗೆ ಬೇರೇನು ಕೆಲಸ?. ಅದೇ ರೀತಿ ಬೆಳಗಾವಿಯಲ್ಲಿ ಬಿಜೆಪಿ ಶಾಸಕರೇ ಪ್ರತಿಭಟನೆಗೆ ಎಲ್ಲರನ್ನೂ ಕರೆದುಕೊಂಡು ಬಂದಿದ್ದರು. ಯಾರು ತಪ್ಪಿತಸ್ಥರಿದ್ದಾರೋ ಅವರ ಮೇಲೆ ಕ್ರಮ ಆಗಬೇಕು. ಆದರೆ, ಸರ್ಕಾರಕ್ಕೂ ಅದಕ್ಕೂ ಏನು ಸಂಬಂಧ?" ಎಂದರು.
"ಮೊದಲ ವರ್ಷದಿಂದ ಹೊಸ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಆಗಬೇಕು ಎಂದು ಪ್ರಯತ್ನಿಸುತ್ತಿದ್ದೇವೆ. ಮೂರು ಹಂತಗಳಲ್ಲಿ ಕಾಮಗಾರಿ ನಡೆಯಲಿದೆ. ಈಗ ಮೊದಲ ಹಂತದ ಕಾಮಗಾರಿ ಆರಂಭವಾಗಲಿದೆ. ಈಗಿರುವ ಕಚೇರಿಗಳನ್ನು ತಾತ್ಕಾಲಿಕವಾಗಿ ಬೇರೆ ಕಡೆ ಸ್ಥಳಾಂತರಿಸಲಾಗುತ್ತಿದೆ. ಅದು ಮುಗಿಯಲು 2-3 ವರ್ಷ ಬೇಕು. ಇನ್ನು ಮೇಲ್ಸೇತುವೆಗೂ ಕನಿಷ್ಠ 2 ವರ್ಷ ಬೇಕು. ಮಳೆಗಾಲದ ಬಳಿಕ ಕೆಲಸ ಪ್ರಾರಂಭವಾಗುತ್ತದೆ. ಸ್ಮಾರ್ಟ್ ಸಿಟಿ ಯೋಜನೆಗಳು ಒಂದೊಂದಾಗಿ ಮುಗಿಯುತ್ತಿವೆ" ಎಂದು ವಿವರಿಸಿದರು.
Advertisement