
ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಯಿಂದ ಅಮಾಯಕ 26 ಜನರು ಸಾವನ್ನಪ್ಪಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನ ಪರಿಸ್ಥಿತಿವೇರ್ಪಟ್ಟಿದ್ದು, ಯುದ್ಧದ ಕಾರ್ಮೋಡ ಆವರಿಸಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ಫೋಸ್ಟ್ ವಾರ್ ನಲ್ಲಿ ತೊಡಗಿಸಿಕೊಳ್ಳುವ ಮೂಲಕ ಕೀಳು ಮಟ್ಟದ ರಾಜಕೀಯದಲ್ಲಿ ನಿರತವಾಗಿವೆ.
ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಪೋಸ್ಟರ್ ವೊಂದನ್ನು ಹಂಚಿಕೊಳ್ಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದೆ.
‘ಬಂಧ್ಗಲಾ ಕುರ್ತಾ, ಚುಡಿದಾರ್ ಪೈಜಾಮಾ ಮತ್ತು ಕಪ್ಪು ಪಾದರಕ್ಷೆಯ ಮೇಲೆ 'ಗಾಯಾಬ್' (ಕಾಣೆಯಾಗಿದ್ದಾರೆ) ಎಂದು ಬರೆದಿರುವ ಪೋಸ್ಟರ್ ನಲ್ಲಿ ಯಾರ ಮುಖವೂ ಇಲ್ಲ. ಆದರೆ, ಫೋಟೋ ಶೈಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹೋಲುವಂತಿದೆ.
ಈಗ ಇದಕ್ಕೆ ತಿರುಗೇಟು ನೀಡುವಂತೆ ರಾಷ್ಟ್ರೀಯ ವಕ್ತಾರ ಆರ್ ಪಿ ಸಿಂಗ್, ಫೋಸ್ಟ್ ವೊಂದನ್ನು ಮಾಡಿದ್ದಾರೆ. ಬಿಳಿ ಬಟ್ಟೆ ಧರಿಸಿರುವ ವ್ಯಕ್ತಿಯೊಬ್ಬ ಬೆನ್ನಿನ ಹಿಂದೆ ಚೂರಿ ಹಿಡಿದಿರುವ ಫೋಸ್ಟರ್ ನೊಂದಿಗೆ ಪಾಕಿಸ್ತಾನದ ಸ್ನೇಹಿತರು ಎಂದು ಬರೆದಿದ್ದಾರೆ. ಆದರೆ, ಬೆನ್ನಿನ ಹಿಂದೆ ಚೂರಿ ಹಿಡಿದಿರುವ ವ್ಯಕ್ತಿಯ ಹೆಸರನ್ನು ಬಿಜೆಪಿ ಉಲ್ಲೇಖಿಸಿಲ್ಲ. ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಸಾರ್ವಜನಿಕವಾಗಿ ಹಲವಾರು ಬಾರಿ ಬಿಳಿ ಟಿ-ಶರ್ಟ್ ಧರಿಸಿದ್ದನ್ನು ಸ್ಮರಿಸಬಹುದು. ಇದು ಹೊಸ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ.
ಕಾಂಗ್ರೆಸ್ ಫೋಸ್ಟರ್ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ನಿಷ್ಕಾಂತ್ ದುಬೆ, ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿಯವರ "ತಲೆ ಮತ್ತು ದೇಹವನ್ನು ಬೇರ್ಪಡಿಸಲು" ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದು, ಭಯೋತ್ಪಾದಕ ಸಂಘಟನೆಯಾದ "ಘಜ್ವಾ-ಎ-ಹಿಂದ್" ನೊಂದಿಗೆ ಅದರ ನಂಟನ್ನು ಪ್ರಶ್ನಿಸಿದ್ದಾರೆ.
Advertisement