
ಕೋಲಾರ: ರಾಜ್ಯ ಬಿಜೆಪಿಯಲ್ಲಿನ ಬಣ ಬಡಿದಾಟ ಸದ್ಯ ದೆಹಲಿಗೆ ಶೆಫ್ಟ್ ಆಗಿದೆ. ಈ ಮಧ್ಯೆ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಬಿ ಶ್ರೀರಾಮುಲು ಅವರು ತಾವು ರಾಜ್ಯಾಧ್ಯಕ್ಷರಾಗಲು ಸಿದ್ದ ಎಂದು ಬುಧವಾರ ಹೇಳಿದ್ದಾರೆ.
ಇಂದು ಕೋಲಾರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಶ್ರೀರಾಮುಲು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾಯಿಸುವಂತೆ ನಾನು ಒತ್ತಾಯ ಮಾಡಲ್ಲ. ಒಂದು ವೇಳೆ ನನಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವಕಾಶ ಕೊಟ್ಟರೆ ನಿಭಾಯಿಸುವೆ ಎಂದರು.
ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಇದ್ದರೆ, ಆಕಸ್ಮಿಕವಾಗಿ ಬದಲಾವಣೆಯಾದರೆ ನಾನು ರಾಜ್ಯಾಧ್ಯಕ್ಷನಾಗಲು ಸಿದ್ಧ. ಬಸನಗೌಡ ಪಾಟೀಲ್ ಯತ್ನಾಳ್ ನನ್ನ ಹೆಸರು ಪ್ರಸ್ತಾಪ ಮಾಡಿದ್ದಾರೆ. ದೊಡ್ಡ ಮನಸ್ಸಿನಿಂದ ಅವರು ನನ್ನ ಹೆಸರು ಪ್ರಸ್ತಾಪ ಮಾಡಿರುವುದು ಸಂತೋಷ ಎಂದರು.
ಯಡಿಯೂರಪ್ಪ ಅವರಿಂದ ನಾವು ಬೆಳೆದಿದ್ದೇವೆ. ಅವರು ಮನಸ್ಸು ಮಾಡಿ ನನಗೆ ಅವಕಾಶಕೊಟ್ಟರೆ ರಾಜ್ಯದ 224 ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿ ಭಿನ್ನಾಭಿಪ್ರಾಯವನ್ನು ಶಮನ ಮಾಡುತ್ತೇನೆ ಎಂದರು.
ಒಂದು ವೇಳೆ ನಾನು ರಾಜ್ಯಾಧ್ಯಕ್ಷನಾದರೆ 2028ರಲ್ಲಿ ನಡೆಯುವ ವಿಧಾನಸಭೆ ಚುನಾವಣೆ ರಾಜ್ಯದಲ್ಲಿ ಬಿಜೆಪಿಗೆ 150 ಸೀಟ್ಗಳನ್ನು ಗೆಲ್ಲಿಸುವ ಮೂಲಕ ಅಧಿಕಾರಕ್ಕೆ ತರುತ್ತೇನೆ. ನಾನು ಅಧ್ಯಕ್ಷನಾಗಲು ಬಸನಗೌಡ ಪಾಟೀಲ್ ಯತ್ನಾಳ ಅವರ ಸಹಮತವಿದೆ ಎಂದು ಹೇಳಿದರು.
Advertisement