
ಬೆಂಗಳೂರು: ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಘೋಷಿಸಿದ ಹಣವನ್ನು ಬಿಡುಗಡೆ ಮಾಡದೆ ಕರ್ನಾಟಕಕ್ಕೆ "ದ್ರೋಹ ಮಾಡಿದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿ "ಸುಳ್ಳು ಹರಡುತ್ತಿದೆ" ಎಂದು ಆರೋಪಿಸಿದರು.
ಜೆಜೆಎಂ ಅಡಿಯಲ್ಲಿ ಕರ್ನಾಟಕಕ್ಕೆ 28,623 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಆದರೆ ರಾಜ್ಯವು 11,760 ಕೋಟಿ ರೂ. ಮಾತ್ರ ಖರ್ಚು ಮಾಡಿದೆ ಎಂದು ಸೋಮಣ್ಣ ಲೋಕಸಭೆಗೆ ತಿಳಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿವೆ.
"ಕೇಂದ್ರ ಸರ್ಕಾರವು ಕರ್ನಾಟಕದಲ್ಲಿ ಜಲ ಜೀವನ್ ಮಿಷನ್ ಅನ್ನು ಉದ್ದೇಶಪೂರ್ವಕವಾಗಿ ಹಾಳುಗೆಡವಿರುವುದನ್ನು ಮುಚ್ಚಿಹಾಕಲು ಕೇಂದ್ರ ಸಚಿವ ಸೋಮಣ್ಣ ಸುಳ್ಳು ಹರಡುತ್ತಿದ್ದಾರೆ!" ಎಂದು ಸಿಎಂ ಸಿದ್ದರಾಮಯ್ಯ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜೆಜೆಎಂಗೆ (ರಾಜ್ಯದಲ್ಲಿ) ಒಟ್ಟು ಹಂಚಿಕೆ 49,262 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಕೇಂದ್ರದ ಪಾಲು 26,119 ಕೋಟಿ ರೂ.ಗಳಾಗಿದ್ದು, ರಾಜ್ಯದ ಪಾಲು 23,142 ಕೋಟಿ ರೂ. ಆಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಿಡುಗಡೆಯಾದ ಒಟ್ಟು ನಿಧಿ 32,202 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಕೇಂದ್ರದ ಪಾಲು 11,760 ಕೋಟಿ ರೂ.ಗಳು(ಅದು ಅದರ ಬದ್ಧತೆಯ ಕೇವಲ ಶೇ. 45 ರಷ್ಟು) ಮತ್ತು ರಾಜ್ಯದ ಪಾಲು 20,442 ಕೋಟಿ ರೂ.ಗಳು (ಇದು ಅದರ ಬದ್ಧತೆಯ ಶೇಕಡಾ 88.3") ಕೋಟಿ ರೂ.ಗಳಾಗಿದೆ. ರಾಜ್ಯ ಖರ್ಚು ಮಾಡಿದ ಒಟ್ಟು ಮೊತ್ತ 29,413 ಕೋಟಿ ರೂ.ಗಳು ಎಂದು ಸಿಎಂ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
"ಕೇಂದ್ರ ಬಿಡುಗಡೆ ಮಾಡಿದ ಪ್ರತಿಯೊಂದು ರೂಪಾಯಿಯನ್ನು ಕರ್ನಾಟಕ ಸಂಪೂರ್ಣವಾಗಿ ಬಳಸಿಕೊಂಡಿದೆ. ಆದರೆ ಮೋದಿ ಸರ್ಕಾರವು ಹಣವನ್ನು ನಿರ್ಬಂಧಿಸುವುದನ್ನು ಮುಂದುವರೆಸಿದೆ ಮತ್ತು ಕರ್ನಾಟಕಕ್ಕೆ ಅದರ ಸರಿಯಾದ ಪಾಲನ್ನು ನಿರಾಕರಿಸುತ್ತಿದೆ" ಎಂದು ಮುಖ್ಯಮಂತ್ರಿ ಆರೋಪಿಸಿದ್ದಾರೆ.
2024-25ರ ಆರ್ಥಿಕ ವರ್ಷದಲ್ಲಿಯೂ ಕೇಂದ್ರದ ನಿರ್ಲಕ್ಷ್ಯ ಮುಂದುವರೆದಿದೆ ಎಂದು ಸಿಎಂ ಕಿಡಿ ಕಾರಿದ್ದಾರೆ.
"ಕೇಂದ್ರವು 3,804 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಆದರೆ ಆ ಪೈಕಿ ಕೇವಲ 570 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಹಲವು ಪತ್ರಗಳನ್ನು ಬರೆದರೂ ಯಾವುದೇ ಹಣವನ್ನು ಬಿಡುಗಡೆ ಮಾಡಿಲ್ಲ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Advertisement