
ಚಿಕ್ಕಮಗಳೂರು: ಸಿಎಂ ಬದಲಾವಣೆ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವಂತೆಯೇ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಟೆಂಪಲ್ ರನ್ ಕೂಡಾ ಸಾಕಷ್ಟು ಗಮನ ಸೆಳೆದಿದೆ. ಇಂದು ಶೃಂಗೇರಿಯ ಪ್ರಸಿದ್ಧ ಶಾರದಾಂಬ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಇದಕ್ಕೂ ಮುನ್ನಾ ಚಿಕ್ಕಮಗಳೂರಿನಲ್ಲಿ ಸಿಎಂ ಬದಲಾವಣೆ ಸೇರಿದಂತೆ ಸಾಕಷ್ಟು ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಐದು ವರ್ಷಗಳ ಅಧಿಕಾರ ನೀಡಿದ್ದು, ವರಿಷ್ಠರದ ನಿರ್ದೇಶನದಂತೆ ತಾನು ಮತ್ತು ಸಿಎಂ ಸಿದ್ದರಾಮಯ್ಯ ಕಾರ್ಯನಿರ್ವಹಣೆಯನ್ನು ಮುಂದುವರೆಸುತ್ತೇವೆ ಎಂದು ಹೇಳಿದರು.
ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಅವರ ಬೆಂಬಲಿಗರು ಹೇಳುತ್ತಿರುವಂತೆಯೇ, ನನಗೆ ಯಾರ ಬೆಂಬಲವೂ ಅಗತ್ಯವಿಲ್ಲ. ಪಕ್ಷ ಏನು ಹೇಳುತ್ತದೆಯೋ ಅದಕ್ಕೆ ವಿಧೇಯನಾಗಿರುವುದಾಗಿ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಯಾರೂ ಆತಂಕಪಡಬೇಕಾಗಿಲ್ಲ. ಯಾವುದೇ ರಾಜಕೀಯ ಬದಲಾವಣೆಯ ಅಗತ್ಯವಿಲ್ಲ. ಜನರು ನಮಗೆ ಅವಕಾಶ ನೀಡಿದ್ದು, ಐದು ವರ್ಷಗಳ ಕಾಲ ಮುಂದುವರೆಯುತ್ತೇವೆ. ಸದ್ಯ ಕೇಳಿಬರುತ್ತಿರುವ ಮಾತುಗಳಿಗೆ ಯಾವುದೇ ಬೆಲೆ ಇಲ್ಲ. ಪಕ್ಷದ ನಿರ್ದೇಶನದಂತೆ ನಾನು ಹಾಗೂ ಸಿಎಂ ಕಾರ್ಯವನ್ನು ಮುಂದುವರೆಸುತ್ತೇವೆ ಎಂದರು.
ಮುಂದಿನ ಸಿಎಂ ಆಗಬೇಕು ಎಂಬ ಬೆಂಬಲಿಗರ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನನಗಾಗಿ ಯಾರೂ ಬೇಡಿಕೆ ಇಡಬೇಕಾಗಿಲ್ಲ. ನನಗೆ ಯಾರ ಬೆಂಬಲವೂ ಬೇಕಾಗಿಲ್ಲ. ನನಗೆ ಯಾವುದೇ ಶಾಸಕರ ಬೆಂಬಲವೂ ಬೇಕಾಗಿಲ್ಲ. ಇದು ನನ್ನ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಇದೆ. ಕಾಂಗ್ರೆಸ್ ಪಕ್ಷ ಏನು ಹೇಳುತ್ತದಯೋ ಅದರಂತೆ ನಾನು ಕಾರ್ಯನಿರ್ವಹಿಸುತ್ತೇನೆ. ಕಾರ್ಯಕರ್ತರು ಅಥವಾ ಶಾಸಕರು ನನ್ನ ಪರವಾಗಿ ಬೇಡಿಕೆ ಇಡುವುದು ಅಥವಾ ನನ್ನ ಬೆಂಬಲಕ್ಕೆ ನಿಲುವುದನ್ನು ಬಯಸುವುದಿಲ್ಲ. ನನ್ನ ಕರ್ತವ್ಯವನ್ನು ಮಾಡುತ್ತೇನೆ ಎಂದರು.
"ಕರ್ಮಣ್ಯೇ ವಧಿಕಾರಸ್ತೇ ಮಾ ಫಲೇಷು ಕದಾಚನ" ಎಂಬ ಮಾತನ್ನು ನಾನು ನಂಬುತ್ತೇನೆ, ಪ್ರಯತ್ನಗಳನ್ನು ಮಾಡಿ ಮತ್ತು ಫಲಿತಾಂಶವನ್ನು ದೇವರಿಗೆ ಬಿಟ್ಟುಬಿಡಿ ಎಂದು ಅವರು ಹೇಳಿದರು. ಡಿಕೆ ಶಿವಕುಮಾರ್ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗಲಿ ಎಂಬ ಸಿದ್ದರಾಮಯ್ಯ ಆಪ್ತ ಕೆ.ಎನ್. ರಾಜಣ್ಣ ಅವರ ಸಲಹೆ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಆಯ್ದ ದಲಿತ ಮತ್ತು ಪರಿಶಿಷ್ಟ ಪಂಗಡದ ಸಚಿವರೊಂದಿಗೆ ಸಿಎಂ ಡಿನ್ನರ್ ನಡೆಸಿದ ನಂತರ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಸಾಕಷ್ಟು ಸುದ್ದಿ ಮಾಡುತ್ತಿದೆ. ಮಾರ್ಚ್ ನಂತರ ಅಧಿಕಾರ ಹಂಚಿಕೆ ಸೂತ್ರ ಅನ್ವಯವಾಗಲಿದೆ ಎಂಬ ವದಂತಿಗಳು ಹಬ್ಬಿವೆ.
ಒಕ್ಕಲಿಗ ಸಮುದಾಯದ ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ನೇತೃತ್ವದಲ್ಲಿ ಬುಧವಾರ ಸಂಜೆ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶಾಸಕರು, ಸಚಿವರು,ನಾಯಕರ 'ಡಿನ್ನರ್ ಪಾರ್ಟಿ' ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ನಿರ್ದೇಶನದಂತೆ ಮುಂದೂಡಲ್ಪಟ್ಟಿದೆ.
ಡಿಕೆ ಶಿವಕುಮಾರ್ ಸೋಮವಾರ ರಾತ್ರಿ ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅವರನ್ನು ಭೇಟಿಯಾದ ನಂತರ ಡಿನ್ನರ್ ಪಾರ್ಟಿ ಮುಂದೂಡಿಕೆಗೆ ಸುರ್ಜೇವಾಲಾ ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ದಲಿತ ಅಥವಾ ಅಹಿಂದ ಸಮುದಾಯದವರು ಮುಂದಿನ ಮುಖ್ಯಮಂತ್ರಿಯಾಗಬೇಕು ಎಂಬ ಬೇಡಿಕೆ ಕುರಿತು ಚರ್ಚಿಸಲು ಪರಮೇಶ್ವರ್ ಸಭೆ ಆಯೋಜಿಸಲು ನಿರ್ಧರಿಸಿದ್ದರು ಎನ್ನಲಾಗಿದೆ. ಈ ಬೇಡಿಕೆ ಒಂದು ವೇಳೆ ರಾಜ್ಯ ಬಜೆಟ್ ನಂತರ ಸಿಎಂ ಬದಲಾವಣೆಯಾದರೆ ಇದು ಶಿವಕುಮಾರ್ ಮಹತ್ವಾಕಾಂಕ್ಷೆಗೆ ದೊಡ್ಡ ಅಡ್ಡಿಯಾಗುವ ಆತಂಕವಿದೆ. ಈ ಮಧ್ಯೆ ಸಿಎಂ ಪದವಿಗಾಗಿಯೇ ಡಿಕೆ ಶಿವಕುಮಾರ್ ದೇವಾಲಯಗಳನ್ನು ಸುತ್ತಾಡುತ್ತಿದ್ದಾರೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ. ಒಟ್ಟಾರೇ ಮುಂದಿನ ರಾಜಕೀಯ ಬೆಳವಣಿಗೆಗಳು ತೀವ್ರ ಕುತೂಹಲಕ್ಕೆ ಕಾರಣವಾಗಿವೆ.
Advertisement