
ಶಿವಮೊಗ್ಗ: ಈ ಹಿಂದೆ ರಾಯಣ್ಣ ಬ್ರಿಗೇಡ್ ಆರಂಭಿಸಿ ಬಿಜೆಪಿಗೆ ಸಡ್ಡು ಹೊಡೆದಿದ್ದ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರು ಈಗ ‘ಕ್ರಾಂತಿ ವೀರ ಬ್ರಿಗೇಡ್’ ಸಂಘಟನೆ ಘೋಷಿಸುವ ಮೂಲಕ ಮತ್ತೊಮ್ಮೆ ಕೇಸರಿ ಪಕ್ಷಕ್ಕೆ ಸಡ್ಡು ಹೊಡೆಯಲು ಮುಂದಾಗಿದ್ದಾರೆ.
‘ಕ್ರಾಂತಿವೀರ ಬ್ರಿಗೇಡ್’ ಎಲ್ಲಾ ಜಾತಿಗಳ ಮಠಾಧೀಶರನ್ನು ಒಳಗೊಂಡಿದ್ದು, ಹಿಂದೂಗಳ ಏಕೀಕರಣಕ್ಕಾಗಿ ಕೆಲಸ ಮಾಡಲಿದೆ. ಈ ಸಂಘಟನೆ ಫೆಬ್ರವರಿ 4 ರಂದು ಬಸವನ ಬಾಗೇವಾಡಿಯಲ್ಲಿ ಉದ್ಘಾಟನೆಯಾಗಲಿದೆ ಎಂದು ಈಶ್ವರಪ್ಪ ಅವರು ಗುರುವಾರ ತಿಳಿಸಿದ್ದಾರೆ.
ರಾಜ್ಯದಲ್ಲಿ ಹಿಂದುತ್ವವನ್ನು ಉಳಿಸಲು ಕೆಲಸ ಮಾಡುವ ಮಠಾಧೀಶರ ವೇದಿಕೆ ರಚನೆಗೆ ನೇತೃತ್ವ ವಹಿಸುವಂತೆ ಉತ್ತರ ಕರ್ನಾಟಕದ ಮಠಾಧೀಶರು ತಮ್ಮನ್ನು ಕೇಳಿಕೊಂಡಿದ್ದರು ಎಂದು ಈಶ್ವರಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಮಠಾಧೀಶರನ್ನು ಒಳಗೊಂಡ ಈ ವೇದಿಕೆಯನ್ನು ಕ್ರಾಂತಿವೀರ ಬ್ರಿಗೇಡ್ ಎಂದು ಹೆಸರಿಸಲಾಗಿದೆ. ನಾನು ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಪ್ರಯಾಣಿಸಿದೆ ಮತ್ತು ಹೆಚ್ಚು ಅಭಿವೃದ್ಧಿ ಹೊಂದಿಲ್ಲದ ಎಲ್ಲಾ ಜಾತಿಗಳ ಮಠಗಳಿಗೆ ಭೇಟಿ ನೀಡಿದ್ದೇನೆ. ಅವರಿಗೆ ಮೂಲಭೂತ ಮೂಲಸೌಕರ್ಯಗಳಿಲ್ಲ. ಅವುಗಳಲ್ಲಿ ಕೆಲವು ಗುಡಿಸಲುಗಳಲ್ಲಿ ನಡೆಯುತ್ತಿವೆ. ಅವರಿಗೆ ಆರ್ಥಿಕ ಸಮಸ್ಯೆಗಳೂ ಇವೆ. ಆದರೆ, ಅವುಗಳನ್ನು ಮುನ್ನಡೆಸುವ ಮಠಾಧೀಶರು ಹೆಚ್ಚಿನ ಜ್ಞಾನವನ್ನು ಹೊಂದಿದ್ದಾರೆ ಮತ್ತು ಹಿಂದುತ್ವದ ರಕ್ಷಣೆಗೆ ಬದ್ಧರಾಗಿದ್ದಾರೆ. "ಈ ಶ್ರೀಗಳು ಹಿಂದೂ ಸಮುದಾಯವನ್ನು ಉಳಿಸಲು ತಪಸ್ಸು ಮಾಡುತ್ತಿದ್ದಾರೆ" ಎಂದು ಈಶ್ವರಪ್ಪ ಹೇಳಿದರು.
12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ಕ್ರಾಂತಿ ವೀರ ಬ್ರಿಗೇಡ್ ಉದ್ಘಾಟನೆಗೊಳ್ಳಲಿದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಶ್ರೀಗಳು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ 1008 ಶ್ರೀಗಳಿಗೆ ಪಾದಪೂಜೆ ಮಾಡಲಾಗುತ್ತದೆ. ಸಮಾವೇಶ ಮುಗಿದ ನಂತರ, ರಾಜ್ಯಾದ್ಯಂತ ಬ್ರಿಗೇಡ್ನ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಘಟಕಗಳನ್ನು ರಚಿಸಲಾಗುವುದು" ಎಂದು ಅವರು ಹೇಳಿದರು.
Advertisement