
ಬೆಂಗಳೂರು: ತೊಗರಿ ಬೇಳೆ ಹಾಳಾಗಿ ನಷ್ಟವಾಗಿದೆ ಎಂದು ಅಳಲು ತೋಡಿಕೊಂಡ ರೈತರ ಮೇಲೆ ದಬ್ಬಾಳಿಕೆ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧಾ ವಾಗ್ಧಾಳಿ ನಡೆಸಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಕಿಡಿಕಾರಿರುವ ಕುಮಾರಸ್ವಾಮಿ, ರೈತರ ಬಗ್ಗೆ ನಿಮ್ಮ ನಡವಳಿಕೆ ಕಂಡು ಬಹಳ ಬೇಸರವಾಯಿತು. ನಿಮ್ಮಂತಹ ಹಿರಿಯರಿಂದ ಇಂಥ ವರ್ತನೆಯನ್ನು ನಾನು ಖಂಡಿತ ನಿರೀಕ್ಷೆ ಮಾಡಿರಲಿಲ್ಲ. ಕಷ್ಟದಲ್ಲಿರುವ ರೈತ ನಿಮ್ಮಂಥವರ ಬಳಿ ಬಂದು ದುಃಖ ತೋಡಿಕೊಳ್ಳದೆ ಇನ್ನು ಯಾರ ಬಳಿ ಹೋಗಿ ಹೇಳಿಕೊಳ್ಳಬೇಕು? ಎಂದು ಪ್ರಶ್ನಿಸಿದ್ದಾರೆ.
ನೀವು ರಾಜ್ಯಸಭೆ ಪ್ರತಿಪಕ್ಷ ನಾಯಕರು ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರು. ಇದೆಲ್ಲವನ್ನೂ ತಾವು ಮರೆತು ಮಾತನಾಡಿದ್ದೀರಿ! ಇದು ತಮಗೆ ಭೂಷಣವಲ್ಲ. ದುಃಖ ಹೇಳಿಕೊಳ್ಳಲು ಬಂದ ರೈತನ ಮೇಲೆ ಈ ಪರಿಯ ದರ್ಪ ಅಗತ್ಯವಿರಲಿಲ್ಲ. ನೀವೂ ತೊಗರಿ ರೈತರೇ ಆಗಿರಬಹುದು. ಆದರೆ 40 ಎಕರೆಯಲ್ಲಿ ಬೆಳೆಯುವ ತಮಗೂ, ಒಂದು ಅಥವಾ ಎರಡು ಎಕರೆಯಲ್ಲಿ ಬೆಳೆಯುವ ಆ ಬಡರೈತನಿಗೂ ಹೋಲಿಕೆಯೇ? ನಷ್ಟವನ್ನು ಭರಿಸುವ ಶಕ್ತಿ ನಿಮಗಿರುತ್ತದೆ, ರೈತನಿಗೆ ಆ ಶಕ್ತಿ ಇರಬೇಕಲ್ಲವೇ? ಎಂದು ಕುಮಾರಸ್ವಾಮಿ ಹೇಳಿದ್ದಾರೆ.
"ನಿನ್ನದು 4 ಎಕ್ರೆ ಹಾಳಾಗಿದೆ. ನನ್ನದು 40 ಎಕ್ರೆ ಹಾಳಾಗಿದೆ. ಪ್ರಚಾರಕ್ಕಾಗಿ ತೊಗರಿ ತೆಗೆದುಕೊಂಡು ಬಂದ್ದಿದ್ದೀಯ? ತೊಗರಿ ಅಷ್ಟೆ ಅಲ್ಲ; ಉದ್ದು, ಹೆಸರು ಕೂಡ ಹಾಳಾಗಿರುವುದು ನನಗೆ ಗೊತ್ತಿದೆ. ಆರು ಹಡೆದವಳ ಮುಂದೆ ಮೂರು ಹಡೆದವಳು ಹೇಳಿದಂತಾಯಿತು..".
ಹೀಗೆಂದರೇನು ಖರ್ಗೆಯವರೇ? ಹಿರಿಯರು ತಾವೇ ಹೇಳಬೇಕು. ರೈತನನ್ನು ಅಪಮಾನಿಸಿದ್ದೀರಿ. ಜತೆಗೆ, ತಾಯಿಯನ್ನು ಅಪಮಾನಿಸಿದ್ದೀರಿ! ಇದು ಸರಿಯಲ್ಲ. ಕೊನೇಪಕ್ಷ ಆ ವ್ಯಕ್ತಿಗೆ ಸಾಂತ್ವನ ಹೇಳಿ, ಆತನ ಕಣ್ಣೀರು ಒರೆಸಬಹುದಿತ್ತು. ನಿಮ್ಮ ನಡವಳಿಕೆ INC ಕಾಂಗ್ರೆಸ್ ಪಕ್ಷದ ಪರಂಪರಾಗತ ದರ್ಪ, ಅಹಂಗೆ ಸಾಕ್ಷಿ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
Advertisement