

ಬಾಗಲಕೋಟೆ: ‘ನಂಬಿಕೆದ್ರೋಹ, ವಿಶ್ವಾಸದ್ರೋಹಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ’ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನ್ನನ್ನು ವಿಶ್ವಾಸದ್ರೋಹಿ ಎಂದು ದೂರಿದ್ದಾರೆ. ಆದರೆ ನಾನು ಯಾರಿಗೆ ವಿಶ್ವಾಸದ್ರೋಹ ಮಾಡಿದ್ದೇನೆ ಎನ್ನುವುದನ್ನು ಅರಳು - ಮರಳು ಯಡಿಯೂರಪ್ಪ ಅವರು ಹೇಳಬೇಕು. ಇಂಥಾ ವಿಷಯದಲ್ಲಿ ಅವರು ಗಾಳಿಯಲ್ಲಿ ಗುಂಡು ಹೊಡೆಯದೆ ಆಧಾರ ಸಹಿತವಾಗಿ ಮಾತನಾಡಬೇಕು ಎಂದು ತಿರುಗೇಟು ನೀಡಿದ್ದಾರೆ.
ಇಂದು ಬಾಗಲಕೋಟೆ ಜಿಲ್ಲೆಯ ನವನಗರ ಹೆಲಿಪ್ಯಾಡ್ ನಲ್ಲಿ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ನಾನು ಯಾರಿಗಾದರೂ ದ್ರೋಹ ಮಾಡಿದ್ರೆ ಹೇಳಲಿ. ಸುಮ್ಮ ಸುಮ್ಮನೆ ಹೇಳಿ ಬಿಟ್ರೆ ಹೇಗೆ? ಎಂದು ಪ್ರಶ್ನಿಸಿದರು.
ದಾವಣಗೆರೆ ದಕ್ಷಿಣದಲ್ಲಿ ನಮ್ಮ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಅಲ್ಲೇ ಇದ್ದು ಪ್ರಚಾರ ಮಾಡಿದ್ದೇನೆ. ಅವರು ಯಾವ ಜಾತಿ? ನನ್ನ ಜಾತಿಯವರೇ? ನಾನು ಜಾತಿ ನೋಡಿ ಪ್ರಚಾರಕ್ಕೆ ಹೋಗುವವನಲ್ಲ, ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಬೇಕು ಅಷ್ಟೆ.
ಯಡಿಯೂರಪ್ಪ ಯಾವ ಜಾತಿ?
ಸ್ವಜಾತಿಯವ್ರು ಅಭ್ಯರ್ಥಿಯಾಗಿರುವ ಕಾರಣ ಸಿಎಂ ಪ್ರಚಾರಕ್ಕೆ ಬರ್ತಿದಾರೆ ಎಂಬ ಯಡಿಯೂರಪ್ಪ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಯಡಿಯೂರಪ್ಪ ಯಾವ ಜಾತಿ? ಯಾರ ಪರ ಮಾಡ್ತಿದಾರೆ? ಅವ್ರು ಉಮೇಶ್ ಮೇಟಿ ಪರ ಮಾಡ್ತಿದಾರಾ? ಚರಂತಿಮಠ ಯಾವ ಜಾತಿ? ಚರಂತಿಮಠ ಲಿಂಗಾಯತರು, ಹಾಗಾದ್ರೆ ಅವ್ರು ಮಾಡ್ತಿರೋದೇನು? ಉಮೇಶ ಮೇಟಿ ನಮ್ಮ ಪಕ್ಷದ ಅಭ್ಯರ್ಥಿ ಹಾಗಾಗಿ ಮಾಡ್ತೀನಿ ಎಂದರು.
ಎರಡೂ ಕ್ಷೇತ್ರದ ಉಪ ಚುನಾವಣೆಯಲ್ಲಿ ನಮಗೆ ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗಿದೆ. ಎರಡೂ ಕಡೆ ಗೆಲ್ಲುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
Advertisement