

ಮೈಸೂರು: ಆರ್ ಎಸ್ಎಸ್ ಒಂದು ವಿಷಕಾರಿ ಹಾವು ಇದ್ದಂತೆ ಎಂದಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಬುಧವಾರ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಈ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಇಂದು ಮೈಸೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ, ಅಪ್ಪ, ಮಗನಿಗೆ RSS ಹುಚ್ಚು ಹಿಡಿದಿದೆ. ಮೊದಲು ಮರಿ ಖರ್ಗೆಗೆ ಆರ್ ಎಸ್ಎಸ್ ಹುಚ್ಚು ಹಿಡಿದಿತ್ತು. ಮಗನಿಗೆ ಹಿಡಿದ ಹುಚ್ಚು ಈಗ ಅಪ್ಪನಿಗೆ ಬಂದಿದೆ. ಆರ್ ಎಸ್ ಎಸ್ ಬಗ್ಗೆ ಮಾತಾಡದೆ ಇದ್ದರೆ ಅಪ್ಪ - ಮಗನಿಗೆ ತಿಂದಿದ್ದು ಕರಗಲ್ಲ ಎಂದು ತಿರುಗೇಟು ನೀಡಿದ್ದಾರೆ.
ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳುವ ಉದ್ದೇಶದಿಂದಲೇ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರಬಹುದು ಎಂದು ಪ್ರತಾಪ್ ಸಿಂಹ ಎಂದು ವ್ಯಂಗ್ಯವಾಡಿದರು.
ದೇಶಾದ್ಯಂತ ಕೋಮು ದ್ವೇಷವನ್ನು ಉಂಟುಮಾಡುವ ರೀತಿಯಲ್ಲಿ ಖರ್ಗೆ ಹೇಳಿಕೆ ನೀಡಿದ್ದಾರೆ. ಆರ್ಎಸ್ಎಸ್ ಅನ್ನು ಬೆಳೆಸಿರುವುದು ಹಿಂದೂಗಳು. ಹೀಗಾಗಿ, ಅವರ ಹೇಳಿಕೆಗಳಿಂದ ಹಿಂದೂ ಸಮುದಾಯವನ್ನು ಅವಮಾನಿಸಿದಂತಾಗಿದೆ ಎಂದು ಮಾಜಿ ಸಂಸದ ಆರೋಪಿಸಿದರು.
ಮಲ್ಲಿಕಾರ್ಜುನ ಖರ್ಗೆ 21ನೇ ಶತಮಾನದ ಮಹಮ್ಮದ್ ಅಲಿ ಜಿನ್ನಾ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅವತ್ತಿನ ಮುಸ್ಲಿಂ ಲೀಗ್ ಅಧ್ಯಕ್ಷ ಜಿನ್ನಾ ಹೇಗೆ ಮಾತನಾಡಿದರೋ, ಅದೇ ಶೈಲಿಯಲ್ಲಿ ಖರ್ಗೆ ಮಾತನಾಡುತ್ತಿದ್ದಾರೆ. ಇಂದು ಕಾಂಗ್ರೆಸ್ನಲ್ಲಿ ಖರ್ಗೆಯೇ ಮುಸ್ಲಿಂ ಲೀಗ್ ಮನೋಭಾವವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಟೀಕಿಸಿದರು.
Advertisement