

ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ರಾಜ್ಯಸಭೆಗೆ ಪುನರಾಯ್ಕೆ ಮಾಡುವ ವಿಚಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಹೈಕಮಾಂಡ್ಗೆ ಬಿಟ್ಟಿದ್ದು. ನಾವು ಯಾವುದರಲ್ಲೂ ಒತ್ತಡ ಹೇರುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ದೇವೇಗೌಡರ ರಾಜ್ಯಸಭೆ ಅವಧಿ ಮುಕ್ತಾಯವಾಗುವ ಬಗ್ಗೆ ಹಾಸನದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ನಿಖಿಲ್, ದೇವೇಗೌಡರು ಮುತ್ಸದ್ಧಿ ರಾಜಕಾರಣಿ. ಅವರು ರಾಜ್ಯಸಭೆಯಲ್ಲಿರಬೇಕು ಎಂಬುದು ಪಕ್ಷಾತೀತವಾಗಿ ಎಲ್ಲರ ಅಭಿಲಾಷೆ. ಸದನದಲ್ಲಿ ರಾಜ್ಯದ ಹಿತದ ಬಗ್ಗೆ ಗಟ್ಟಿಧ್ವನಿಯಿಂದ ಮಾತನಾಡಿ ಸರ್ಕಾರದ ಗಮನ ಸೆಳೆಯುವ ವ್ಯಕ್ತಿ ರಾಜ್ಯದಿಂದ ಯಾರಾದರೂ ಇದ್ದರೆ ಅದು ದೇವೇಗೌಡರು ಮಾತ್ರ ಎಂದರು. ಯಾವುದರಲ್ಲೂ ಒತ್ತಡ ಹೇರುವ ಪ್ರಶ್ನೆ ಇಲ್ಲ. ಯಾವುದೇ ಷರತ್ತು ಹಾಕದೇ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ದೇವೇಗೌಡರ ಮರು ಆಯ್ಕೆ ಪ್ರಧಾನಿಗೆ ಬಿಟ್ಟ ವಿಚಾರ ಎಂದರು.
ರಾಜ್ಯದ ಅಭಿವೃದ್ಧಿಯ ಕುರಿತು ದೇವೇಗೌಡರು ಗಟ್ಟಿ ಧ್ವನಿಯಿಂದ ಮಾತನಾಡುತ್ತಾರೆ. ನೀರಾವರಿ, ಎತ್ತಿನಹೊಳೆ ಯೋಜನೆ ಕುರಿತು ಪ್ರಧಾನಿ, ಗೃಹ ಸಚಿವರ ಗಮನ ಸೆಳೆದಿದ್ದಾರೆ ಎಂದು ತಿಳಿಸಿದರು.
ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ದೇವೇಗೌಡರು ರಾಜ್ಯಸಭೆಗೆ ಮರುಆಯ್ಕೆಯಾದರೆ ರಾಜ್ಯಕ್ಕೆ ಉಪಯೋಗವಾಗುತ್ತದೆ. ನೀರಾವರಿ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳ ಬಗ್ಗೆ ದಿಟ್ಟವಾಗಿ ಧ್ವನಿ ಎತ್ತುವ ಸಾಮರ್ಥ್ಯ ಅವರಿಗಿದೆ ಎಂದರು. ದೇವೇಗೌಡರಂತಹ ಅನುಭವ ಸಂಪನ್ನ ಹಾಗೂ ದೂರದೃಷ್ಟಿಯುಳ್ಳ ನಾಯಕತ್ವ ರಾಜ್ಯಕ್ಕೂ, ರಾಷ್ಟ್ರಕ್ಕೂ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement