ನಿನ್ನ ಮೇಲೆ ಹೈಕಮಾಂಡ್ ಸಿಟ್ಟಾಗಿದೆ: ಜಮೀರ್ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ; ಶೀಘ್ರದಲ್ಲೇ ತಲೆದಂಡ ಸಾಧ್ಯತೆ

ಇಂದು ಬೆಳಗ್ಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ 'ಕಾವೇರಿ' ನಿವಾಸದಲ್ಲಿ ಭೇಟಿ ಮಾಡಿದ್ದು, ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.
siddaramaiah and minister Zameer
ಸಿದ್ದರಾಮಯ್ಯ, ಜಮೀರ್ ಅಹ್ಮದ್
Updated on

ಬೆಂಗಳೂರು: ನಾಯಕತ್ವ ಬದಲಾವಣೆ ಮತ್ತು ಸಚಿವ ಸಂಪುಟ ಪುನರ್ ರಚನೆ ಗೊಂದಲದ ನಡುವೆಯೇ ದಾವಣಗೆರೆ ಉಪ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್​​ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.

ಟಿಕೆಟ್​​ ವಿಚಾರಕ್ಕೆ ಆರಂಭವಾಗಿದ್ದ ಕಾಂಗ್ರೆಸ್ ಬಂಡಾಯದ ಬಿಸಿ ಅಬ್ದುಲ್ ಜಬ್ಬಾರ್ ಹಾಗೂ ನಸೀರ್​ ಅಹ್ಮದ್ ನಂತರ ಈಗ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೂ ತಟ್ಟಿದೆ.

ಇಂದು ಬೆಳಗ್ಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ 'ಕಾವೇರಿ' ನಿವಾಸದಲ್ಲಿ ಭೇಟಿ ಮಾಡಿದ್ದು, ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಪಕ್ಷದ ಆಂತರಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು, ಸಚಿವ ಜಮೀರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಹೈಕಮಾಂಡ್ ಕೆಂಗಣ್ಣಿನ ಕುರಿತು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

siddaramaiah and minister Zameer
ಜಮೀರ್ ಅಹ್ಮದ್ ರಾಜಿನಾಮೆ ಖಚಿತ, ಇಂದು ರಾತ್ರಿಯೇ ಕ್ಲೈಮ್ಯಾಕ್ಸ್: MP Renukacharya ಹೊಸ ಬಾಂಬ್!

ಪಕ್ಷದೊಳಗೆ ಬಂಡಾಯಕ್ಕೆ ಪ್ರಚೋದನೆ ನೀಡುತ್ತಿರುವ ಆರೋಪ ಜಮೀರ್ ಅವರ ವಿರುದ್ಧ ಕೇಳಿಬರುತ್ತಿದ್ದು, ಈ ಬಗ್ಗೆ ಹೈಕಮಾಂಡ್ ಹಂತದಲ್ಲಿ ದೂರುಗಳು ಸಲ್ಲಿಕೆಯಾಗಿವೆ ಎಂದು ಸಿಎಂ ಅಸಮಾಧಾನ ಹೊರಹಾಕಿದ್ದಾರೆ. "ಬಂಡಾಯದ ವಿಚಾರವಾಗಿ ನಿನ್ನ ಮೇಲೆ ಹೈಕಮಾಂಡ್ ಸಿಟ್ಟಾಗಿದೆ. ನೀನೇ ಹೈಕಮಾಂಡ್‌ಗೆ ಸರಿಯಾದ ಸಮಜಾಯಿಷಿ ನೀಡಬೇಕು" ಎಂದು ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್, "ನಾನು ಪಕ್ಷದ ವಿರುದ್ಧ ಯಾವುದೇ ಕೆಲಸ ಮಾಡಿಲ್ಲ. ಕೇವಲ ಸಮುದಾಯಕ್ಕೆ ಟಿಕೆಟ್ ನೀಡುವಂತೆ ವಿನಂತಿಸಿದ್ದೆ. ನಿಮ್ಮ ಸೂಚನೆಯಂತೆ ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿ ಪರ ಕೆಲಸ ಮಾಡಲು ಸೂಚಿಸಿದ್ದೇನೆ" ಎಂದು ಸಮರ್ಥಿಸಿಕೊಂಡರು.

ಅಲ್ಲದೆ, ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹ್ಮದ್ ಅವರಿಗೆ ಜವಾಬ್ದಾರಿ ನೀಡಿದ್ದರಿಂದ ತಾವು ಕೇರಳ ಚುನಾವಣಾ ಪ್ರಚಾರ ಹಾಗೂ ವೈಯಕ್ತಿಕ ಕಾರಣಗಳಿಂದ ಮುಂಬೈಗೆ ತೆರಳಿದ್ದಾಗಿ ವಿವರಣೆ ನೀಡಿದರು.

ಜಮೀರ್ ಅವರ ಸುದೀರ್ಘ ಸ್ಪಷ್ಟನೆ ಆಲಿಸಿದ ಸಿಎಂ, ಹೈಕಮಾಂಡ್ ನಾಯಕರ ಜೊತೆ ನೇರವಾಗಿ ಮಾತನಾಡುವಂತೆ ಸೂಚಿಸಿದರು. ಈ ಚರ್ಚೆಯ ನಂತರ ಇಬ್ಬರೂ ನಾಯಕರು ಒಂದೇ ಕಾರಿನಲ್ಲಿ ವಿಧಾನಸೌಧಕ್ಕೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದು ಸದ್ಯಕ್ಕೆ ಭಿನ್ನಮತ ಶಮನದ ಮುನ್ಸೂಚನೆಯೋ ಅಥವಾ ಜಮೀರ್ ಅವರಿಂದ ರಾಜೀನಾಮೆ ಪಡೆಯುವ ಮೂಲಕ ಹೈಕಮಾಂಡ್ ಕಠಿಣ ಕ್ರಮ ಕೈಗೊಳ್ಳುವುದೋ ಎಂಬುದು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com