

ಬೆಂಗಳೂರು: ಮಹಿಳಾ ಮೀಸಲಾತಿ ಮಸೂದೆಗಾಗಿ ಸಂಸತ್ತಿನ ವಿಶೇಷ ಅಧಿವೇಶನ ನಡೆಯುತ್ತಿದ್ದು, ಮಹಿಳೆಯರಿಗೂ ಕಾನೂನು ರಚನೆಗೆ ಸಮಾನ ಅವಕಾಶ ಸಿಗಲಿದೆ. ಇದಕ್ಕೆ ವಿರೋಧಪಕ್ಷ ಕಾಂಗ್ರೆಸ್ ಅಪಸ್ವರ ಎತ್ತಿದರೆ ಪಕ್ಷದ ಭವಿಷ್ಯ ಗಂಭೀರವಾಗಲಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರು ದೇಶದಲ್ಲಿ ಸರ್ವರಿಗೂ ಸಮಾನ ಹಕ್ಕು ಇರಬೇಕು, ಸಮಾನ ಅವಕಾಶ ಸಿಗಬೇಕು ಎಂದು ಬಯಸಿದ್ದರು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದೂ ಹೇಳಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಬಾಬಾ ಸಾಹೇಬರ ಚಿಂತನೆಗೆ ಶಕ್ತಿ ಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಹಿಂದೆ ಮಹಿಳೆಯರಿಗೆ ಅವಕಾಶ, ಅಧಿಕಾರ ಮತ್ತು ಸಮಾನ ಹಕ್ಕು ಕೊಡುವಲ್ಲಿ ಬಾಯಿ ಮಾತಿನ ಭಾಷಣ ಇತ್ತೇ ಹೊರತು ಹೃದಯವಂತಿಕೆ ಇರಲಿಲ್ಲ. ಆದರೆ ಇಂದು ನಾರಿ ಶಕ್ತಿ ಹೆಸರಿನಲ್ಲಿ ಪ್ರಧಾನಿಯವರು ಸಂಸತ್ತಿನ ವಿಶೇಷ ಅಧಿವೇಶನ ಕರೆದು ಮಸೂದೆ ಮಂಡಿಸುತ್ತಿದ್ದಾರೆ. ಇನ್ನು ಮುಂದೆ ಹೆಣ್ಣು ಮಕ್ಕಳಿಗೆ ಎಲ್ಲ ರೀತಿಯ ಅವಕಾಶಗಳ ದೊರೆಯಲಿವೆ ಎಂದರು.
ಕಾಟಾಚಾರದ ಅಂಬೇಡ್ಕರ್ ಜಯಂತಿ: ಕರ್ನಾಟಕ ಸರ್ಕಾರ ಅಂಬೇಡ್ಕರ್ ಜಯಂತಿಯನ್ನು ಕಾಟಾಚಾರಕ್ಕೆ ಆಚರಿಸಿತು. ಆಚರಣೆಯಲ್ಲಿ ಬಾಬಾ ಸಾಹೇಬರ ಬಗ್ಗೆ ವಿಶ್ವಾಸ ಹಾಗೂ ಪ್ರೀತಿ ಕಾಣಲಿಲ್ಲ. ಕಾರ್ಯಕ್ರಮದ ನಿಗದಿತ ಸಮಯಕ್ಕೆ ಮುಖ್ಯಮಂತ್ರಿಗಳು ಬರಲಿಲ್ಲ. ಕಾಂಗ್ರೆಸ್ ಕಾರ್ಯಕ್ರಮವಾಗಿದ್ದರೆ ಮುಖ್ಯಮಂತ್ರಿಗಳು ಸಮಯಕ್ಕೆ ಸರಿಯಾಗಿ ಬರುತ್ತಿದ್ದರು ಎಂದು ದೂರಿದರು.
ಓಟ್ ಬ್ಯಾಂಕ್ಗಾಗಿ ಕಪಟ ನಾಟಕ ಆಡಬೇಡಿ...
ಸಿದ್ದರಾಮಯ್ಯ ಅವರು ಕಾಂಗ್ರೆಸ್ ವಿರೋಧಿಯಾಗೇ ಬದುಕಿದವರು. ಈಗ ಕಾಂಗ್ರೆಸ್ಗೆ ಬಂದು ಸುಳ್ಳು ಹೇಳಲು ಆರಂಭಿಸಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಸಿದ್ದರಾಮಯ್ಯ ಅವರು ಇಷ್ಟು ಹಗುರವಾಗಿ ಮಾತನಾಡಬಾರದು ಎಂದರು. ಸಿದ್ದರಾಮಯ್ಯ ಅವರು ಸುಳ್ಳುರಾಮಯ್ಯ ಹೋಗಿ ಕುರುಡುರಾಮಯ್ಯ ಆಗಿದ್ದಾರೆ. ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾದ ಪ್ರಿಯಾಂಕ್ ಖರ್ಗೆ ಅವರು ಕೊಟ್ಟ ಪತ್ರ ಓದಿ ಸುಳ್ಳು ಹೇಳಬೇಡಿ. ನೆಹರು ಅವರು ಪತ್ರದಲ್ಲೇ ಅಂಬೇಡ್ಕರ್ ಸೋಲಿಸಿದ್ದು ನಾವೇ ಎಂದು ಹೇಳಿದ್ದಾರೆ. ಇಷ್ಟೇಲ್ಲಾ ಇರುವಾಗ ಸಿದ್ದರಾಮಯ್ಯ ಅವರು ಎಲ್ಲಾ ಸುಳ್ಳು ಅಂತಾರೆ. ಓಟ್ ಬ್ಯಾಂಕ್ಗಾಗಿ ಕಾಂಗ್ರೆಸ್ ಕಪಟ ನಾಟಕ ಆಡಬೇಡಿ. ಸತ್ಯ ಒಪ್ಪಿಕೊಳ್ಳಿ ಎಂದು ಆಗ್ರಹಿಸಿದರು.
ಮೋದಿ ವಿರುದ್ಧ ಕೆಟ್ಟ ಪದ ಬಳಕೆ ನಿಲ್ಲಿಸಲಿ...
ಪ್ರಧಾನಿಯವರಿಗೆ ಸಿದ್ದರಾಮಯ್ಯ ಅವರು ಹದಿನೆಂಟು ಬೇಡಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಮುಖಂಡರೂ ಭೇಟಿ ಮಾಡುವ ರೀತಿಗಿಂತ ಚೆನ್ನಾಗಿ ಮೋದಿಯವರು ಭೇಟಿ ಮಾಡಿದರು. ಮೋದಿಯವರು ಸಿದ್ದರಾಮಯ್ಯ ಅವರ ಕಿವಿಯ ಹತ್ತಿರ ಎಷ್ಟೊಂದು ಚೆಂದವಾಗಿ ಮಾತನಾಡಿದರು. ಆದರೆ ರಾಹುಲ್ ಗಾಂಧಿ ಅವರು ಎಂದೂ ಈ ರೀತಿ ಮಾತನಾಡಿಲ್ಲ. ಅವರು ಅಂತರ ಕಾಪಾಡುತ್ತಾರೆ. ಕಾಂಗ್ರೆಸ್ನವರು ಎಲ್ಲರ ಬಳಿ ಸಮಾನ ಅಂತರ ಕಾಪಾಡುತ್ತಾರೆ. ಏಕೆಂದರೆ ಬಾಸಿಸಂ ತೋರಿಸುತ್ತಾರೆ. ಮೋದಿ ಅವರು ಬಾಸ್ ಅಲ್ಲ ಎಂದರು.
ಹದಿನೆಂಟು ಯೋಜನೆಗಳಿಗೆ ಕೇಂದ್ರ ಸರ್ಕಾರದ ಬಳಿ ಹಣ ಕೇಳುವ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದಿಂದ ಏನು ಮಾಡಿದ್ದಾರೆ ಎಂದು ಹೇಳಲಿ. ಕೊಟ್ಟರೆ ಮಾತ್ರ ಅಭಿವೃದ್ಧಿ ಮಾಡುವವರೇ. ಕೇಂದ್ರದ ಪಾಲು ಬರಬೇಕಿದ್ದರೆ ಮಾತ್ರ ಮನವಿ ನೀಡಿ. ಸಿದ್ದರಾಮಯ್ಯ ಅವರನ್ನು ಇಷ್ಟೊಂದು ಪ್ರೀತಿಯಿಂದ ಕಂಡ ಮೋದಿ ಅವರನ್ನೇ ಹಗಲು ರಾತ್ರಿ ನಿಂದಿಸುತ್ತಾರೆ. ಈಗಲಾದರೂ ಸಿದ್ದರಾಮಯ್ಯ ಅವರಿಗೆ ನಾಚಿಕೆ ಆಗಿರಬೇಕು. ಇಂದಿನಿಂದ ಮೋದಿ ಅವರ ವಿರುದ್ಧ ಕೆಟ್ಟ ಪದ ಬಳಕೆ ನಿಲ್ಲಿಸಲಿ ಎಂದರು.
Advertisement