

ಚಿಕ್ಕಮಗಳೂರು: ಎನ್ಡಿಎ ಜೊತೆ ಮೈತ್ರಿ ಮಾಡಿಕೊಂಡ ನಂತರ ಜೆಡಿಎಸ್ ಪಕ್ಷವು ಜಾತ್ಯಾತೀತವಾಗಿಲ್ಲ ಎಂಬ ಟೀಕೆಗಳ ಬೆನ್ನಲ್ಲೇ ಜೆಡಿಎಸ್ ಇಂದಿಗೂ, ಎಂದೆಂದಿಗೂ ಜಾತ್ಯತೀತ ಪಕ್ಷವಾಗಿಯೇ ಉಳಿಯಲಿದೆ ಎಂಬ ಸಂದೇಶ ರವಾನಿಸಲು ಪಕ್ಷದ ನಾಯಕರು ಮುಂದಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಕುರಿತ ಇಂದಿಗೂ ಕಾರ್ಯಕರ್ತರಲ್ಲಿ ಅಪಸ್ವರಗಳಿವೆ. ಮೈತ್ರಿಯ ಕುರಿತು ಸಾಕಷ್ಟು ಸ್ಪಷ್ಟನೆ ನೀಡಿದ್ದರೂ ಗ್ರಾಮೀಣ ಭಾಗದಲ್ಲಿ ಭಿನ್ನದನಿ ಬದಲಾಗಿಲ್ಲ.
ಜಾತ್ಯತೀತ ಜನತಾದಳ ಅನ್ನುವುದು ಅದರ ಘೋಷ ವಾಕ್ಯದಲ್ಲೇ ಇದೆ. ನಾವು ಬಿಜೆಪಿ ಜತೆ ಮಿತ್ರ ಪಕ್ಷವಾಗಿ ಕೈ ಜೋಡಿಸಿದ್ದೇವೆ. ಆದರೆ, ನಮ್ಮ ಸಿದ್ಧಾಂತವನ್ನು ಯಾರ ಜತೆಗೂ ಅಡ್ಜಸ್ಟ್ ಮಾಡಿಲ್ಲ. ನಮ್ಮದು ಬೇರೆ ರಾಜಕೀಯ ಪಕ್ಷವಾಗಿದೆ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಮ್ಮ ಸಿದ್ದಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ಯಾವತ್ತಿದ್ರೂ ಜಾತ್ಯತೀತ. ಜಾತ್ಯತೀತವಾಗಿ ಉಳಿಯುತ್ತೇವೆ ಎಂದರು. ಜೆಡಿಎಸ್ ಸರ್ವ ಜನಾಂಗದ ಶಾಂತಿಯ ತೋಟದ ಪರಿಕಲ್ಪನೆ ಹೊಂದಿದೆ. ಯಾವುದೇ ಧರ್ಮ, ಜಾತಿ ಸಮುದಾಯದ ಆಧಾರದ ಮೇಲೆ ರಾಜಕಾರಣ ಮಾಡಿಕೊಂಡು ಬಂದಿಲ್ಲ. ಎಲ್ಲರನ್ನೂ ಸಮಾನವಾಗಿ ನೋಡುವ ಕೆಲಸವನ್ನು ಪಕ್ಷ ಮಾಡಿದೆ. ಇದನ್ನು ಮುಂದುವರಿಸುತ್ತೇವೆ ಎಂದರು.
ಕಾಂಗ್ರೆಸ್ ಮಹಿಳೆಯರನ್ನು ಮತ ಬ್ಯಾಂಕ್ ಮಾಡಿಕೊಂಡಿದೆ. ಹೆಣ್ಣುಮಕ್ಕಳು ರಾಜಕೀಯವಾಗಿ ಸಬಲರಾಗುವುದು ಅವರಿಗೆ ಬೇಕಿಲ್ಲ. ಹೀಗಾಗಿಯೇ ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ನೀಡಿಲ್ಲ. ಮಹಿಳಾ ಮೀಸಲಾತಿ ಸೋಲು ಎನ್ಡಿಎ ಸೋಲಲ್ಲ ಅಥವಾ ಪ್ರಧಾನಮಂತ್ರಿಗಳ ಸೋಲಲ್ಲ. ಪ್ರಜಾಪ್ರಭುತ್ವದ ಸೋಲಾಗಿದೆ. ಇದಕ್ಕೆ ಮೂಲ ಕಾರಣ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ಎಂದು ನಿಖಿಲ್ ಕುಮಾರಸ್ವಾಮಿ ಟೀಕಿಸಿದರು
Advertisement