

ಮೈಸೂರು: ನಟ ಚೇತನ್ ಅಹಿಂಸಾಗೆ ಧಮ್ ಇದ್ರೆ ಚುನಾವಣೆಗೆ ಸ್ಪರ್ಧೆ ಮಾಡಲಿ ಎಂದು ಜೆಡಿಎಸ್ನ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೇಲಿ ಕುಳಿತುಕೊಂಡು ಟ್ವೀಟ್ ಮಾಡುವುದಕ್ಕೆ ಅವರೇ ಬೇಕಾ?. ನನಗೂ ಬರವಣಿಗೆ ಗೊತ್ತು, ನಾನು ಸಾವಿರ ಟ್ವೀಟ್ ಮಾಡುತ್ತೇನೆ. ಜನ ಸಮುದಾಯದಲ್ಲಿ ನಿಂತು ಕೆಲಸ ಮಾಡಿದಾಗ ಅದರ ಬೆಲೆ ತಿಳಿಯಲಿದೆ.
ರಾಜ್ಕುಮಾರ್ ಅವರು ನಟರಷ್ಟೇ ಅಲ್ಲ, ಅವರು ನಾಡಿನ ಕಣ್ಮಣಿ ಎಂದು ಡಾ. ರಾಜ್ಕುಮಾರ್ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ನೀಡಿರುವ ಜಾಗದ ಕುರಿತು ಚೇತನ್ ಮಾಡಿದ್ದ ಟ್ವೀಟ್ಗೆ ತಿರುಗೇಟು ನೀಡಿದರು.
ಚೇತನ್ ಅಹಿಂಸಾ ಟ್ವಿಟರ್ನಲ್ಲಿ ಅದು ಇದು ಬರೆದುಕೊಂಡಿದ್ದಾರೆ. ಇದರ ಬದಲು ಅವರಿಗೆ ತಾಕತ್ತಿದ್ದರೆ. ಯಾವುದಾದರೊಂದು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲಿ. ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರು ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇದೇ ಕಾರಣದಿಂದ ಇವರೆಲ್ಲ ನಿಧನರಾದಾಗ ರಾಜ್ಯ ಸರ್ಕಾರ ಸೂಕ್ತ ಗೌರವ ನೀಡಿದೆ ಎಂದು ಹೇಳಿದರು.
ಡಾ. ರಾಜ್ಕುಮಾರ್ ಅವರು ನಿಧನರಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರು, ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡಿದರು. ಅಂಬರೀಶ್ ಅವರು ನಿಧನರಾದಾಗಲೂ ಕುಮಾರಸ್ವಾಮಿಯವರೇ ಸಿಎಂ ಆಗಿದ್ದರು. ಆಗಲೂ ಅಂಬರೀಶ್ ಅವರಿಗೆ ಸೂಕ್ತ ಗೌರವ ನೀಡಿದರು. ಇದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.
ಅಣ್ಣಾವ್ರ ಹೆಸರು ಹೇಳಲು, ಅವರ ಬಗ್ಗೆ ಮಾತನಾಡಲು ನಟ ಚೇತನ್ ಅವರಿಗೆ ಯೋಗ್ಯತೆ ಇಲ್ಲ. ಅವರೊಬ್ಬ ಪ್ರಚಾರಪ್ರಿಯ ಎಂದು ದೂರಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದ ಚೇತನ್ ಅಹಿಂಸಾ, ನಿಖಿಲ್ ಕುಮಾರಸ್ವಾಮಿ ಮತ್ತು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರನ್ನು ಟೀಕೆ ಮಾಡಿದ್ದರು.
Advertisement