

ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗದ ಸಂದರ್ಭದಲ್ಲೂ ಅವರು ಎಂದಿಗೂ ಪಕ್ಷದ ವಿರುದ್ಧ ಮಾತನಾಡಲಿಲ್ಲ, ಹಿಂದೆ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದಾಗಲೂ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಆದರೂ ಅವರು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್ನಲ್ಲಿ ಮೂಡಿರುವ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಪಕ್ಷದಿಂದ ನಾವು, ನಮ್ಮಿಂದ ಪಕ್ಷವಲ್ಲ. ಪಕ್ಷಕ್ಕಿಂತ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ ಎಂದು ಅಸಮಾಧಾನಿತ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಹುದ್ದೆ ಅವಕಾಶ ಸಿಗದ ಸಂಬಂಧ ಮಲ್ಲಿಕಾರ್ಜುನ ಖರ್ಗೆ ಎಂದಾದರೂ ಮಾತನಾಡಿದ್ರಾ? ಒಂದು ಬಾರಿಯಾದರೂ ಪಕ್ಷದಿಂದ ಅನ್ಯಾಯ ಆಗಿದೆ ಅಂತಾ ಏನಾದರೂ ಹೇಳಿದ್ರಾ? ಎಂದು ಪ್ರಶ್ನಿಸಿದ್ದಾರೆ.
ಕೆಲವರು, ನಮ್ಮಿಂದಲೇ ಪಕ್ಷ ಇದೆ ಎಂಬ ರೀತಿಯ ಹೇಳಿಕೆ ನೀಡುತ್ತಿರುವುದನ್ನು ಉಲ್ಲೇಖಿಸಿದ ಪ್ರಿಯಾಂಕ್ ಖರ್ಗೆ, ಆರಂಭದಲ್ಲಿ ಪಕ್ಷದ ಟಿಕೆಟ್ಗಾಗಿ, ಬಿ-ಫಾರಂಗಾಗಿ ಪಕ್ಷದ ಕಚೇರಿಗೆ ಓಡಾಡಿದ್ದು ಎಲ್ಲರೂ ಎಂಬುದನ್ನು ಮರೆಯಬಾರದು ಎಂದರು. ಇಂದು ನಾವು ದೊಡ್ಡ ನಾಯಕರು ಆಗಿರಬಹುದು. ಆದರೆ ಪಕ್ಷಕ್ಕಿಂತ ದೊಡ್ಡವರಾಗಲು ಸಾಧ್ಯವಿಲ್ಲ. ಪಕ್ಷದ ಕಚೇರಿಯ ಬಾಗಿಲು ಕಾಯ್ದ ದಿನಗಳನ್ನು ಯಾರೂ ಮರೆಯಬಾರದು ಎಂದು ಹೇಳಿದರು.
ರಾಜೀನಾಮೆ ಕೊಟ್ಟರೆ ಸ್ವೀಕಾರ ಮಾಡುತ್ತೇವೆ ಎಂದು ನಮ್ಮ ಪಕ್ಷದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ಹೇಳಿದ್ದಾರೆ. ಪಕ್ಷ ಕಟ್ಟುವುದು ಎಲ್ಲರಿಗೂ ಗೊತ್ತಿದೆ. ಜನರು ಕೂಡ ರಾಜಕಾರಣಿಗಳನ್ನ ನೋಡುತ್ತಿದ್ದಾರೆ ಸಚಿವ ಸಂಫುಟದಲ್ಲಿ ಇರುವ ನಮ್ಮಂತಹವರನ್ನ ನೋಡುತ್ತಿದ್ದಾರೆ. ಸಂಪುಟದಿಂದ ಹೊರಗುಳಿದವರನ್ನೂ ಕೂಡ ನೋಡುತ್ತಿದ್ದಾರೆ.
ಪಕ್ಷದ ವಿರುದ್ದ ಮಾತನಾಡುತ್ತಿರುವವರನ್ನೂ ನೋಡುತ್ತಿದ್ದಾರೆ. ಕಾರ್ಯಕರ್ತರು, ಮತದಾರರು ಇಲ್ಲ ಅಂದ್ರೆ ನಾನು ಏನೂ ಅಲ್ಲ. ನಾನು ಪಕ್ಷ ಹಾಗೂ ಕಾರ್ಯಕರ್ತರಿಗೆ ಚಿರ ಋಣಿಯಾಗಿರುತ್ತೇನೆ. ಪಕ್ಷದ ವರ್ಚಸ್ಸಿನಿಂದ ನಾವಿದ್ದೇವೆಂದು ಯಾರು ಮರೆಯಬಾರದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.