

ಬೆಂಗಳೂರು: ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆಯ ನಂತರ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನವದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ಇದೇ ವೇಳೆ ಪ್ರಮುಖ ಖಾತೆಗಳಿಗಾಗಿ ಲಾಬಿ ತೀವ್ರಗೊಂಡಿದೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಮತ್ತು ಹೊಸದಾಗಿ ಸೇರ್ಪಡೆಗೊಂಡ ಸಚಿವ ಶಿವರಾಜ್ ತಂಗಡಗಿ ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.
ತಮ್ಮ ಪುತ್ರಿ ಮತ್ತು ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರಿಗೆ ಸಚಿವ ಸ್ಥಾನ ಬಿಟ್ಟುಕೊಡಲು ಮುನಿಯಪ್ಪ ಅವರನ್ನು ಸಚಿವ ಸ್ಥಾನದಿಂದ ರಾಜೀನಾಮೆ ನೀಡುವಂತೆ ಕೇಳಬಹುದು ಎಂಬ ಊಹಾಪೋಹ ಕೇಳಿ ಬಂದಿತ್ತು,ಆ ದರೆ ಮುನಿಯಪ್ಪ ಅವರು ರಾಜೀನಾಮೆ ನೀಡುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುನಿಯಪ್ಪ ಸಮಾಜ ಕಲ್ಯಾಣ ಖಾತೆಯನ್ನು ಬಯಸುತ್ತಿದ್ದಾರೆ ಎಂದು ವರದಿಯಾಗಿದೆ. ತಂಗಡಗಿ ಕೂಡ ಅದೇ ಇಲಾಖೆಯ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ, ಆದರೂ ಅವರು ಖರ್ಗೆ ಭೇಟಿ ಮಾಡಲು ದೆಹಲಿಗೆ ತೆರಳಿದ್ದು ಇದೊಂದು ಸೌಜನ್ಯದ ಭೇಟಿ ಎಂದು ಬಣ್ಣಿಸಿದ್ದಾರೆ.
ಸಚಿವ ಸ್ಥಾನದ ರೇಸ್ನಲ್ಲಿದ್ದ ಖರ್ಗೆ ನಿಷ್ಠಾವಂತ ಮತ್ತು ಎಂಎಲ್ಸಿ ಮಂಜುನಾಥ ಭಂಡಾರಿ ಕೂಡ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ.
ಪಕ್ಷದೊಳಗೆ, ಬಿಕ್ಕಟ್ಟನ್ನು ಬಗೆಹರಿಸುವ ಪ್ರಯತ್ನಗಳ ಭಾಗವಾಗಿ ಹಲವಾರು ಸಾಧ್ಯತೆಗಳನ್ನು ಚರ್ಚಿಸಲಾಗುತ್ತಿದೆ. ಇವುಗಳಲ್ಲಿ ರೋಣ ಶಾಸಕ ಜಿ.ಎಸ್. ಪಾಟೀಲ್ ಅವರನ್ನು ಬದಲಿಸಿ ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರನ್ನು ವಿಧಾನಸಭಾ ಸ್ಪೀಕರ್ ಆಗಿ ನೇಮಿಸುವುದು.
ಎನ್. ಚಲುವರಾಯಸ್ವಾಮಿ ಅಥವಾ ಬಾಲಕೃಷ್ಣ ಅವರನ್ನು ಕೈಬಿಟ್ಟು ಎಂ. ಕೃಷ್ಣಪ್ಪ ಅವರನ್ನು ಸೇರಿಸುವುದು, ಬಸವರಾಜ ರಾಯರೆಡ್ಡಿ ಬದಲಿಗೆ ಹಂಪನಗೌಡ ಬಾದರ್ಲಿ ಅವರ ನೇಮಕ, ಕೆ.ಎಚ್. ಮುನಿಯಪ್ಪ ಅವರನ್ನು ರಾಜೀನಾಮೆ ನೀಡುವಂತೆ ಕೇಳುವ ಮೂಲಕ ರೂಪಕಲಾ ಶಶಿಧರ್ ಅವರ ದಾರಿ ಸುಗಮಗೊಳಿಸುವುದು ಮತ್ತು ಬಿ. ನಾಗೇಂದ್ರ ಅವರನ್ನು ಬದಲಿಸಿ ಅನ್ನಪೂರ್ಣ ಇ. ತುಕಾರಾಂ ಅವರನ್ನು ನೇಮಿಸುವ ಸಾಧ್ಯತೆಯಿದೆ.
ರಿಜ್ವಾನ್ ಅರ್ಷದ್ ಅವರನ್ನು ಬದಲಿಸಿ ಕನೀಜ್ ಫಾತಿಮಾ ಅವರನ್ನು ನೇಮಿಸುವ ಮೂಲಕ ಮಹಿಳಾ ಶಾಸಕರಿಗೆ ಪ್ರಾತಿನಿಧ್ಯ ನೀಡುವ ಬಗ್ಗೆಯೂ ಊಹಾಪೋಹಗಳಿವೆ. ಅಂತಹ ವ್ಯವಸ್ಥೆಯಲ್ಲಿ, ರಿಜ್ವಾನ್ ಅರ್ಷದ್ ಅವರನ್ನು ದೆಹಲಿಯಲ್ಲಿ ರಾಜ್ಯದ ವಿಶೇಷ ಪ್ರತಿನಿಧಿಯಾಗಿ ನೇಮಿಸಬಹುದು, ಆದರೆ ರಾಯರೆಡ್ಡಿ ಅವರನ್ನು ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರರಾಗಿ ಅಥವಾ ಕೆಕೆಆರ್ಡಿಬಿಯ ಅಧ್ಯಕ್ಷರನ್ನಾಗಿ ನೇಮಿಸಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮಾಜಿ ಸಚಿವ ಎನ್.ಎಸ್. ಬೋಸರಾಜು ಅವರ ಪುತ್ರ ರವಿ ಬೋಸರಾಜು ಅವರಲ್ಲದೆ, ಯಶವಂತ್ ರಾಯಗೌಡ ಪಾಟೀಲ್, ಅಪ್ಪಾಜಿ ಸಿ.ಎಸ್. ನಾಡಗೌಡ, ಶರತ್ ಬಚ್ಚೇಗೌಡ, ಎಸ್.ಆರ್. ಶ್ರೀನಿವಾಸ್, ಬಿ.ಜಿ. ಗೋವಿಂದಪ್ಪ, ಬೇಳೂರು ಗೋಪಾಲಕೃಷ್ಣ, ಜಿ.ಎಸ್. ಪಾಟೀಲ್, ಬಿ.ಆರ್. ಪಾಟೀಲ್ ಮತ್ತು ಕಂಪ್ಲಿ ಶಾಸಕ ಗಣೇಶ್ ಸೇರಿದಂತೆ ಹಲವಾರು ಅತೃಪ್ತ ಶಾಸಕರಿಗೆ ವಿವಿಧ ಮಂಡಳಿಗಳು ಮತ್ತು ನಿಗಮಗಳಲ್ಲಿ ಅಧ್ಯಕ್ಷ ಸ್ಥಾನಗಳನ್ನು ನೀಡಲು ಪಕ್ಷ ಪರಿಗಣಿಸುತ್ತಿದೆ.
ಕೃಷ್ಣಪ್ಪ ಅವರ ಪುತ್ರ ಮತ್ತು ಗೋವಿಂದರಾಜನಗರ ಶಾಸಕ ಪ್ರಿಯಾ ಕೃಷ್ಣ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಗಳಲ್ಲಿ ಒಂದರಲ್ಲಿ ಪ್ರಮುಖ ಸ್ಥಾನಕ್ಕೆ ಪರಿಗಣಿಸಬಹುದು, ಟಿ.ಬಿ. ಜಯಚಂದ್ರ ಅವರನ್ನು ಖಾತರಿ ಅನುಷ್ಠಾನ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಬಹುದು.
ನರಸಿಂಹರಾಜ ಶಾಸಕ ತನ್ವೀರ್ ಸೇಠ್ ಮತ್ತು ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಕೂಡ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಪರಿಗಣಿಸಲ್ಪಡುತ್ತಿರುವವರಲ್ಲಿ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವ ತನ್ವೀರ್ ಸೇಠ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸಿ ಅವರ ಬೆಂಬಲಿಗರು ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದರು.