

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೊದಲ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯ ಅಧ್ಯಕ್ಷತೆ ವಹಿಸಿದರು. ನಿನ್ನೆ ಮಂಗಳವಾರ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಈ ಸಭೆ ನಡೆಯಿತು.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಇಂದು ನನ್ನ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಮೊದಲ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ನಡೆಯಿತು. ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಜನಕೇಂದ್ರಿತ ಆಡಳಿತಕ್ಕೆ ಸಂಬಂಧಿಸಿದಂತೆ ಶಾಸಕರು ಮತ್ತು ನಾಯಕರೊಂದಿಗೆ ವಿಸ್ತೃತ ಚರ್ಚೆ ನಡೆಸಲಾಯಿತು.
ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವರಾದ ಕೆ.ಹೆಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಯು.ಟಿ. ಖಾದರ್, ಸತೀಶ್ ಜಾರಕಿಹೊಳಿ, ಡಾ. ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಉಪಸಭಾಪತಿ ಉಮಾಶ್ರೀ, ಸಿಎಲ್ಪಿ ಪ್ರಧಾನ ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಹಲವು ಗಣ್ಯರು ಸಭೆಯಲ್ಲಿ ಭಾಗವಹಿಸಿದ್ದರು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ, ಒಗ್ಗಟ್ಟು ಕಾಯ್ದುಕೊಂಡು ಅಧಿವೇಶನದಲ್ಲಿ ಒಟ್ಟಾಗಿ ಪ್ರತಿಪಕ್ಷಗಳನ್ನು ಎದುರಿಸುವಂತೆ ಮುಖ್ಯಮಂತ್ರಿಗಳು ಶಾಸಕರಿಗೆ ಸೂಚನೆ ನೀಡಿದರು. ಸಭೆಯಲ್ಲಿ ಅಧಿವೇಶನದ ಬಗ್ಗೆ ಚರ್ಚಿಸಲಾಯಿತು. ಸದನ ನಡೆಯುತ್ತಿದೆ. ಎಲ್ಲರೂ ಇರಬೇಕು, ಯಾರೂ ಗೈರಾಗಬಾರದು. ಪ್ರತಿಪಕ್ಷಗಳು ಬೇರೆ ಬೇರೆ ವಿಚಾರಗಳನ್ನು ಚರ್ಚೆಗೆ ತರುತ್ತಿವೆ.
ನಾವೆಲ್ಲರೂ ಒಗ್ಗಟ್ಟಾಗಿ ಅವರನ್ನು ಎದುರಿಸಬೇಕು. ಸಚಿವರಿಗೆ ನೀವೆಲ್ಲರೂ ಬೆಂಬಲ ನೀಡಬೇಕು. ಸರ್ಕಾರದ ಪರ ಸಮರ್ಥನೆ ಮಾಡಿಕೊಳ್ಳಬೇಕು. ಸಚಿವ ಬಿ.ನಾಗೇಂದ್ರ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಿ. ಯಾವುದೇ ಕಾರಣಕ್ಕೂ ಬಿ.ನಾಗೇಂದ್ರ ಅವರನ್ನು ಬಿಟ್ಟುಕೊಡಬಾರದು. ಎಲ್ಲರೂ ಅವರ ಪರವಾಗಿ ಧ್ವನಿ ಎತ್ತಬೇಕು. ಪ್ರತಿಪಕ್ಷಗಳಿಗೆ ಸರಿಯಾಗಿ ತಿರುಗೇಟು ನೀಡಿ. ಬಿಜೆಪಿ ಹಗರಣಗಳನ್ನು ಕೆದಕಿ ಕೌಂಟರ್ ಕೊಡಿ. ಅವರ ಕೈ ಮೇಲಾಗದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು.
ಪ್ರತಿ ತಿಂಗಳು ಶಾಸಕರ ಭೇಟಿಗೆ 2 ದಿನ ಮೀಸಲು
ಪ್ರತಿ ತಿಂಗಳಲ್ಲಿ ಎರಡು ದಿನ ಶಾಸಕರ ಭೇಟಿಗೆ ಸಮಯ ಮೀಸಲಿಡಲಾಗುವುದು. ಇದೇ ವೇಳೆ ಅನುದಾನ ನೀಡುವ ಬಗ್ಗೆ ಶಾಸಕರಿಗೆ ಸಿಎಂ ಭರವಸೆ ನೀಡಿದರು. ಅಲ್ಲದೆ, ಸ್ಥಳೀಯ ಸಂಸ್ಥೆಯ ಚುನಾವಣೆ ಮೇಲೆ ಗಮನ ಹರಿಸಿ. ಪಕ್ಷ ಸಂಘಟನೆ ಬಗ್ಗೆ ನಿಗಾ ವಹಿಸಿ. ಬರ, ಬೆಳೆ ವಿಮೆ, ಜಾನುವಾರು, ಕುಡಿಯುವ ನೀರು ಪೂರೈಕೆಗೆ ಒತ್ತು ನೀಡಿ ಎಂದು ಸಿಎಂ ಶಾಸಕರಿಗೆ ಸಲಹೆ ನೀಡಿದರು ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಸೇರಿ ಅತೃಪ್ತ ಶಾಸಕರು ಸಭೆಗೆ ಗೈರು
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದಾರೆ. ಹೆಚ್.ಸಿ. ಮಹದೇವಪ್ಪ ಮತ್ತು ಪ್ರಿಯಾ ಕೃಷ್ಣ ಕೂಡ ಸಭೆಗೆ ಹಾಜರಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದಾರೆ ಎಂಬ ಚರ್ಚೆಯ ಮಧ್ಯೆ ಅವರು ಶಾಸಕಾಂಗ ಸಭೆಗೆ ಗೈರಾಗಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮೊದಲ ದಿನದ ಕಲಾಪಕ್ಕೆ ಗೈರಾಗಿ, ಮರುದಿನ ಕೆಲಹೊತ್ತು ಹಾಜರಾಗಿದ್ದರು. ಸೋಮವಾರ ಸದನಕ್ಕೆ ಮತ್ತೆ ಗೈರಾಗಿದ್ದರೆ, ನಿನ್ನೆ ಬೆಳಗ್ಗೆ ಮತ್ತೆ ಹಾಜರಾಗಿ ವಾಪಸಾಗಿದ್ದರು. ಬೆಂಗಳೂರಿನ ತಮ್ಮ ನಿವಾಸದಲ್ಲೇ ಇದ್ದರೂ ಅವರು ಸಿಎಲ್ಪಿ ಸಭೆಯಲ್ಲಿ ಭಾಗಿಯಾಗಲಿಲ್ಲ.
ಇದರ ಜೊತೆಗೆ ಶಾಸಕಾಂಗ ಸಭೆಗೆ ಮಂತ್ರಿ ಸ್ಥಾನ ವಂಚಿತ ಶಾಸಕರಾದ ಹೆಚ್.ಸಿ.ಮಹದೇವಪ್ಪ, ಶಿವಾನಂದ ಪಾಟೀಲ್, ಎಂ.ಕೃಷ್ಣಪ್ಪ, ಅವರ ಪುತ್ರ ಪ್ರಿಯಕೃಷ್ಣ, ಎಂ.ಸಿ.ಸುಧಾಕರ್, ಎಸ್.ಎನ್.ನಾರಾಯಣಸ್ವಾಮಿ, ಕೊತ್ತನೂರು ಮಂಜುನಾಥ್ ಕೂಡ ಸಭೆಯಿಂದ ದೂರ ಉಳಿದಿದ್ದರು. ಕುತೂಹಲಕಾರಿ ಸಂಗತಿಯೆಂದರೆ, ಸಭೆಯಲ್ಲಿ ‘ಜೆನ್ ಝೆಡ್’ (Gen Z) ವಿಚಾರವೂ ಪ್ರಸ್ತಾಪವಾಗಿದೆ ಎಂದು ಮೂಲಗಳು ತಿಳಿಸಿವೆ. ಕಿರಿಯ ಮತದಾರರೊಂದಿಗೆ ಕಾಂಗ್ರೆಸ್ನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಕುರಿತು ಪಕ್ಷದಲ್ಲಿ ನಿಖರವಾಗಿ ಏನು ಚರ್ಚಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ.