

ಮೈಸೂರು: ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪಕ್ಷದ ಹೈಕಮಾಂಡ್ ಸುಮ್ಮನಿದೆ ಎಂದರೆ ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದರ್ಥ ಎಂದು ಗೃಹ ಸಚಿವ ಪರಮೇಶ್ವರ ಅವರು ಶನಿವಾರ ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ ಅವರು, ನಮ್ಮ ತಂದೆಯೇ 5 ವರ್ಷ ಸಿಎಂ ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ವೈಯಕ್ತಿಕ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದೇ ಅಂತಿಮ ಎಂದರು.
ಸದ್ಯಕ್ಕೆ ಹೈ ಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಸಿಎಂ ಬದಲಾವಣೆ ವಿಚಾರ ಕೇವಲ ಮಾಧ್ಯಮಗಳಲ್ಲಿನ ಗೊಂದಲ ಅಷ್ಟೇ. ಗೊಂದಲ ಇದ್ರೆ ಸಿಎಲ್ಪಿ ಸಭೆಯಲ್ಲಿ ಗೊತ್ತಾಗುತ್ತಿತ್ತು. ಮೊನ್ನೆ ನಡೆದ ಸಭೆಯಲ್ಲೂ ಯಾರೂ ಏನೂ ಹೇಳಿಲ್ಲ. ನಮ್ಮಲ್ಲಿ ಯಾವ ಗೊಂದಲವೂ ಇಲ್ಲ. ಸಿಎಂ ಬಜೆಟ್ ಮಂಡನೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂದರು.
ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಒಪ್ಪಂದದ ಪ್ರಸ್ತಾಪವೇ ಆಗಿಲ್ಲ, ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಹೈಕಮಾಂಡ್ ಘೋಷಣೆ ಮಾಡಿತ್ತು. ಆದರೆ ಅವರ ಬದಲಾವಣೆ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ವರಿಷ್ಠರು ಅಗತ್ಯ ಇದ್ದಾಗ ಮಾತನಾಡುತ್ತಾರೆ ಎಂದು ಪರಮೇಶ್ವರ ತಿಳಿಸಿದ್ದಾರೆ.
ಇನ್ನು ಮೈಸೂರಿನಲ್ಲಿ ಯಾವುದೇ ಡ್ರಗ್ಸ್ ಸಿಕ್ಕಿಲ್ಲ, ಎನ್ ಸಿಬಿ ಅವರು ವಾಪಸು ಹೋದ ಮೇಲೆ ಪ್ರೆಸ್ ರಿಲೀಸ್ ಮಾಡಿ ಡ್ರಗ್ಸ್ ಸಿಕ್ಕಿದೆ ಎಂದು ಹೇಳಿದ್ದಾರೆ. ಮೈಸೂರು ಕಮೀಷನರ್ನ ವಿಚಾರಿಸಿದಾಗ ಇಲ್ಲಿ ಏನು ಸಿಕ್ಕಿಲ್ಲ ಅಂತನೇ ಹೇಳಿದರು. ಎನ್ ಸಿಬಿ ಅವರು ಅವರು ಕೋರ್ಟ್ ನಲ್ಲಿ ಕೊಟ್ಟ ಹೇಳಿಕೆಯಲ್ಲಿ ಯಾವುದೇ ಡ್ರಗ್ಸ್ ಸಿಕ್ಕಿರುವ ಬಗ್ಗೆ ಉಲ್ಲೇಖ ಮಾಡಿಲ್ಲ. ದೆಹಲಿಗೆ ಹೋಗಿ ಪ್ರೇಸ್ ರಿಲೀಸ್ ಮಾಡುವ ಅಗತ್ಯ ಏನಿತ್ತು? ಇದರ ಹಿಂದಿನ ಉದ್ದೇಶವನ್ನು ಅವರೇ ಹೇಳಬೇಕು ಎಂದರು.
Advertisement