

ಹಾವೇರಿ: ನಮ್ಮ ಸರ್ಕಾರವು 1,000 ದಿನಗಳನ್ನು ಪೂರೈಸಿದ್ದು, ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿದ್ದಾರೆ.
ರಾಜ್ಯ ಸರ್ಕಾರ 1000 ದಿನಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಇಂದು ಹಾವೇರಿ ನಗರದ ಹೊರವಲಯದ ಅಜ್ಜಯ್ಯ ದೇವಸ್ಥಾನದ ಬಳಿ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ನಡೆಯುತ್ತಿದೆ.
ಸಮಾವೇಶದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸರ್ಕಾರವು ತನ್ನ ಬದ್ಧತೆಗಳನ್ನು ಈಡೇರಿಸಿದೆ ಮತ್ತು ಅದರ ಕಲ್ಯಾಣ ಕಾರ್ಯಕ್ರಮಗಳು ಮುಂದುವರಿಯುತ್ತವೆ ಎಂದರು.
ರಾಜ್ಯ ಸರ್ಕಾರದ ಕಾರ್ಯಕ್ರಮಗಳು ಅಂಚಿನಲ್ಲಿರುವ ವರ್ಗಗಳ ಸಬಲೀಕರಣದ ಗುರಿಯನ್ನು ಹೊಂದಿವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
"ಈ ಕಾರ್ಯಕ್ರಮ ದಲಿತರು, ಮಹಿಳೆಯರು, ಹಿಂದುಳಿದ ವರ್ಗಗಳು ಮತ್ತು ರೈತರು ಸೇರಿದಂತೆ ಅಂಚಿನಲ್ಲಿರುವವರ ಕಲ್ಯಾಣ ಮತ್ತು ಸಬಲೀಕರಣದ ಮೇಲೆ ಕೇಂದ್ರೀಕರಿಸುತ್ತವೆ. ನಾವು ಅವುಗಳನ್ನು ಕಾರ್ಯಗತಗೊಳಿಸುವುದನ್ನು ಮುಂದುವರಿಸುತ್ತೇವೆ" ಎಂದು ಅವರು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಸರ್ಕಾರದ 1,000 ದಿನಗಳನ್ನು "ಕತ್ತಲೆಯ ದಿನಗಳು" ಎಂದು ಟೀಕಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, "ಯಾವ ಸಾಧನೆಗಾಗಿ ಅವರು ಸಮಾವೇಶ ನಡೆಸುತ್ತಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸಮಾವೇಶದ ಬಗ್ಗೆ ಬಿಜೆಪಿಯ ಟೀಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, "ಕಳೆದ ನಾಲ್ಕು ವರ್ಷಗಳಲ್ಲಿ ಅವರು ಏನನ್ನೂ ಮಾಡದ ಕಾರಣ ಅವರಿಗೆ ಹೊಟ್ಟೆ ಉರಿ. ಅದಕ್ಕಾಗಿಯೇ ಅವರು ನಮ್ಮನ್ನು ಟೀಕಿಸುತ್ತಿದ್ದಾರೆ" ಎಂದು ತಿರುಗೇಟು ನೀಡಿದರು.
"ನಾವು 592 ಭರವಸೆಗಳನ್ನು ನೀಡಿದ್ದೇವೆ, ಅವುಗಳಲ್ಲಿ 240 ಈಡೇರಿಸಿದ್ದೇವೆ. ಉಳಿದ ಭರವಸೆಗಳನ್ನು ಸಹ ನಾವು ಈಡೇರಿಸುತ್ತೇವೆ. ನಮ್ಮ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು" ಎಂದರು ಸಿಎಂ ಹೇಳಿದರು.
ಇನ್ನು ನಾಯಕತ್ವದ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ ಎಂದರು.
"ಅದೇ ಪ್ರಶ್ನೆಯನ್ನು ಪುನರಾವರ್ತಿಸುವ ಅಗತ್ಯವಿಲ್ಲ. ಹೈಕಮಾಂಡ್ ಹೇಳುವುದನ್ನು ನಾವು ಕೇಳಬೇಕು. ನಮ್ಮ ಎಲ್ಲಾ ಪಕ್ಷದ ನಾಯಕರು ಹೈಕಮಾಂಡ್ ನಿರ್ದೇಶನಗಳನ್ನು ಪಾಲಿಸಬೇಕು" ಎಂದು ಅವರು ಹೇಳಿದರು.
Advertisement