

ಉಪ್ಪಿನಂಗಡಿ: 2028ರಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಹೇಳುತ್ತಿದ್ದಾರೆ. ಆದರೆ, 2048 ಆದರೂ ಅವರು ಸಿಎಂ ಆಗಲ್ಲ. ಏಕೆಂದರೆ ನಾವು ಬಿಡಲ್ಲ. ಇನ್ನು ಮುಂದೆ ದೇಶವೂ ನಮ್ಮದೇ, ರಾಜ್ಯವೂ ನಮ್ಮದೇ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಉಪ್ಪಿನಂಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ನಾನು ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲ್ಲ ಎಂದು ಹೇಳುತ್ತಿದ್ದಾರೆ. ಮತ್ತೊಂದೆಡೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾವುದೇ ಕಾರಣಕ್ಕೂ ಸಿಎಂ ಆಗದೇ ಬಿಡೋದಿಲ್ಲ ಎಂದು ಹೇಳುತ್ತಿದ್ದಾರೆ, ಕಾಂಗ್ರೆಸ್ ಹೈಕಮಾಂಡ್ ಜೀವವಿಲ್ಲದಂತಾಗಿದೆ. ಎಐಸಿಸಿ ಸತ್ತಂತೆ ಬದುಕುತ್ತಿದೆ. ಬಹುಶಃ ಹೈಕಮಾಂಡ್ ಐಸಿಯುನಲ್ಲಿದೆ. ಸಿಎಂ ಸ್ಥಾನ ವಿಚಾರದಲ್ಲಿ ಸ್ಪಷ್ಟ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರ ಇದೆಯೇ? ಹೈಕಮಾಂಡ್ ಎಂದರೆ ಯಾರು? ಅಧ್ಯಕ್ಷರೇ ಅಲ್ಲವೇ? ಎಂದು ಪ್ರಶ್ನಿಸಿದರು. ಎರಡೂವರೆ ವರ್ಷದ ಸಿಎಂ ಅಗ್ರಿಮೆಂಟ್ ವಿಚಾರವನ್ನು ಉಲ್ಲೇಖಿಸಿ, ಅದು ಲಿಖಿತವೋ, ಅಲಿಖಿತವೋ? ಯಾರು ಯಾರಿಗೆ ಹೇಳಿದರು? ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಕಾಂಗ್ರೆಸ್ನಿಂದ ಡಿಕೆಶಿ ಸಿಎಂ ಆದರೂ, ಸಿದ್ದರಾಮಯ್ಯ ಇದ್ದರೂ ನಮಗೆ ಏನೂ ಸಂಬಂಧ ಇಲ್ಲ. ಕಾಂಗ್ರೆಸ್ನಿಂದ ಯಾರೇ ಸಿಎಂ ಆದರೂ ನಾವು ಕೇಳೋದಿಲ್ಲ ಎಂದು ಟೀಕಿಸಿದರು. ಇದೇ ವೇಳೆ ಸಿದ್ದರಾಮಯ್ಯರ ಪುತ್ರ ಯತಿಂದ್ರ ಸಿದ್ದರಾಮಯ್ಯರ ಕುರಿತ ಭವಿಷ್ಯವಾಣಿ ವಿಚಾರವೂ ಪ್ರಸ್ತಾಪಿಸಿ, ಯತೀಂದ್ರ ಸಿಎಂ ಆಗುತ್ತಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಡಿಕೆಶಿ ಹಾಗೂ ಡಿ.ಕೆ.ಸುರೇಶ್ ನಮ್ಮ ಹೈಕಮಾಂಡ್ ಇಲ್ಲಿಯೇ ಇದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ, ಕಾಂಗ್ರೆಸ್ ಹೈಕಮಾಂಡ್ ಬದಲಾಗಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ವ್ಯಂಗ್ಯವಾಡಿದರು.
Advertisement