'ಕುಮಾರಸ್ವಾಮಿ ಸಿಎಂ ಆಗುವುದು ನನ್ನ ಕೈಯಲ್ಲಿಲ್ಲ, ಅದು ಮೋದಿ, ಶಾ ತೀರ್ಮಾನ, ಇಷ್ಟು ಕೆಟ್ಟ ಆಡಳಿತ ನೀಡಿರುವ ರಾಜ್ಯ ಸರ್ಕಾರ ನಾನು ನೋಡಿಲ್ಲ': H D ದೇವೇಗೌಡ

ವಿಜಯಪುರದಲ್ಲಿ ನಿನ್ನೆ ಆಯೋಜಿಸಲಾಗಿದ್ದ ಜೆಡಿಎಸ್ ಬೆಳ್ಳಿಹಬ್ಬದ ಜನತಾ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
H  D Deve Gowda in Vijayapura programme
ವಿಜಯಪುರದಲ್ಲಿ ನಡೆದ ಜೆಡಿಎಸ್ ಬೆಳ್ಳಿಹಬ್ಬದ ಸಂಭ್ರಮ ಹಾಗೂ ಜನತಾ ಸಮಾವೇಶದಲ್ಲಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ
Updated on

ವಿಜಯಪುರ: ಜೆಡಿಎಸ್ ನಾಯಕ ಕೇಂದ್ರ ಸಚಿವರಾಗಿರುವ ನನ್ನ ಪುತ್ರ ಹೆಚ್ ಡಿ ಕುಮಾರಸ್ವಾಮಿಯನ್ನು ಮತ್ತೆ ಮುಖ್ಯಮಂತ್ರಿ ಮಾಡುವುದು ನನ್ನ ಕೈಯಲ್ಲಿಲ್ಲ. ಅದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತೀರ್ಮಾನ ಮಾಡಬೇಕು ಎಂದು ಮಾಜಿ ಪ್ರಧಾನ ಮಂತ್ರಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.

ವಿಜಯಪುರದಲ್ಲಿ ನಿನ್ನೆ ಆಯೋಜಿಸಲಾಗಿದ್ದ ಜೆಡಿಎಸ್ ಬೆಳ್ಳಿಹಬ್ಬದ ಜನತಾ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಜೆಡಿಎಸ್ ಪಕ್ಷ ಎನ್ ಡಿಎ ಮೈತ್ರಿಕೂಟಕ್ಕೆ ನೀಡುವ ಶಕ್ತಿಯನ್ನು ಗುರುತಿಸಿ ಅದನ್ನು ಸೂಕ್ತವಾಗಿ ಬಳಸಿಕೊಳ್ಳುವ ಬುದ್ಧಿವಂತಿಕೆ, ರಾಜಕೀಯ ಜಾಣ್ಮೆ ಮತ್ತು ಪ್ರಬುದ್ಧತೆ ಮೋದಿ ಮತ್ತು ಅಮಿತ್ ಶಾ ಅವರಿಗಿದೆ. ಎನ್ ಡಿಎ ಮುಂದಿನ ದಿನಗಳಲ್ಲಿ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದರು.

ನನಗೆ ಈಗಾಗಲೇ 93 ವರ್ಷ ವಯಸ್ಸಾಗಿದೆ, ನಾನು ಮತ್ತೆ ಮಂತ್ರಿ, ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾಗುವ ಇಚ್ಛೆ ಇಲ್ಲ. ಈ ಶರೀರದಿಂದ ಆತ್ಮ ಹೊರ ಹೋಗುವ ಮುನ್ನ ರಾಜ್ಯದಲ್ಲಿ ಯೋಗ್ಯ ಆಡಳಿತ ಕೊಡುವ ಸರ್ಕಾರ ಬರಲಿದೆ. ಅದನ್ನು ಮೋದಿ ಮಾಡಲಿದ್ದಾರೆ. 2028ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಧಿಕಾರಕ್ಕೆ ಬರಲಿದೆ ಎಂದರು.

ನನ್ನ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ಆಡಳಿತ ನೀಡಿರುವ ರಾಜ್ಯ ಸರ್ಕಾರ ನೋಡಿಲ್ಲ. ಇವತ್ತು ನಿಮ್ಮ ಮುಂದೆ ಕೈಚಾಚಿ ಕೇಳುವೆ, ಪ್ರಾದೇಶಿಕ ಪಕ್ಷ ಜೆಡಿಎಸ್‌ನ ಬೆಳೆಸಿ, ಉಳಿಸಿ ಎಂದು ಮನವಿ ಮಾಡಿದ್ದಾರೆ.

ಆಲಮಟ್ಟಿ ನಿರ್ಮಾಣದಲ್ಲಿ ನನ್ನ ಕೊಡುಗೆ

ಆಲಮಟ್ಟಿ ಜಲಾಶಯ ನಿರ್ಮಾಣದಲ್ಲಿ ನನ್ನ ಕೊಡುಗೆಯೂ ಇದೆ. ಕೃಷ್ಣಾ ನದಿ ನೀರನ್ನು ಕೊಡುವಲ್ಲಿ ಅಂದಿನ ಸರ್ಕಾರ ವಿಫಲವಾಗಿದ್ದವು. ನಾನು ಅಧಿಕಾರ ವಹಿಸಿಕೊಂಡ ಬಳಿಕ ಆಲಮಟ್ಟಿ ಆಣೆಕಟ್ಟೆಗೆ ಹಣಕಾಸು ಹೊಂದಾಣಿಕೆ ಮಾಡಿದೆ ಎಂದರು.

H  D Deve Gowda in Vijayapura programme
ಪಾರದರ್ಶಕ ನೇಮಕಾತಿಗಾಗಿ ರಾಷ್ಟ್ರೀಯ ಮಾನದಂಡ ಸ್ಥಾಪಿಸಿ: ಸಿಎಂ ಸಿದ್ದರಾಮಯ್ಯಗೆ ನಿಖಿಲ್ ಕುಮಾರಸ್ವಾಮಿ ಮನವಿ

ಇಲ್ಲಿನ ಜನರಿಗೆ ನೀರು ಸಿಗಬೇಕು ಎನ್ನುವ ಕಾರಣಕ್ಕಾಗಿ ಕೆಲಸ ಮಾಡಿದೆ. ನಾನು ಇಲ್ಲಿ ಬಂದಿರೋದು ನನ್ನ ಮುಖ್ಯಮಂತ್ರಿ ಮಾಡಿ ಎನ್ನಲು ಅಲ್ಲ. ಮೊದಲು ಕೃಷ್ಣಾನದಿ ನೀರನ್ನು 50 ಸಾವಿರ ಎಕರೆಗೆ ಕೊಟ್ಟಿದ್ದರು. 200 ಕೋಟಿ ರೂಪಾಯಿ ಸಾಲ ತಂದು ಸರ್ಕಾರದ ಅಧಿಕಾರಿಗಳ ಸಂಬಳ ಕೊಡುವ ಟೈಂನಲ್ಲಿ ನಾನು ಸಿಎಂ ಆದೆ ಎಂದರು.

ವಿಜಯಪುರದಲ್ಲಿ ಚುನಾವಣೆಯಲ್ಲಿ ಪಕ್ಷದ ಮುಖಂಡರು ಸೋತಿದ್ದರೂ ಎದೆಗುಂದಿಲ್ಲ. ನಾನು ಮತ್ತೆ ಸಿಎಂ ಆಗಲ್ಲ, ಪಿಎಂ ಸಹ ಆಗಲ್ಲ. ಇಲ್ಲಿನ ನಮ್ಮ ಹಿರಿಯರು ಭೀಕರ ಬರಗಾಲದಿಂದ ಗೋವಾ, ಮಹಾರಾಷ್ಟ್ರ ಗುಳೆ ಹೋಗುತ್ತಿದ್ದರು. 1973 ರಿಂದ ಈ ಭಾಗದ ಮೂಲೆ ಮೂಲೆಯಲ್ಲಿ ನಾನು ಸುತ್ತಿದ್ದೇನೆ. ನನಗೆ ಅಧಿಕಾರ ಕೊಡಿ ಎಂದು ಕೇಳಲು ಬಂದಿಲ್ಲ ಎಂದರು. ಇಂಡಿಯ ಪರಾಜಿತ ಅಭ್ಯರ್ಥಿ ಬಿ.ಡಿ.ಪಾಟೀಲನನ್ನು ಕರೆದು ನೀನು ಈ ಬಾರಿ ಗೆಲ್ತಿಯಾ ಎಂದರು. ಮಾಜಿ ಶಾಸಕ ದೇವಾನಂದ ಚವ್ಹಾಣ, ಅಪ್ಪುಗೌಡ ಮನಗೂಳಿ, ಬಾಗಲಕೋಟೆ ಮುಖಂಡರನ್ನ ಕರೆದು ಗೆಲ್ತೀರಿ ಎಂದು ಆಶೀರ್ವದಿಸಿದರು.

ಹಿಂದಿನ ರಾಜಕೀಯ ನೆನೆದ ದೇವೇಗೌಡರು

ಇವತ್ತು ನಾನು ಅಧಿಕಾರ ಕೇಳಲು ಇಲ್ಲಿಗೆ ಬಂದಿಲ್ಲ. ಮೊರಾರ್ಜಿ ದೇಸಾಯಿ ಅವರು ಪ್ರಧಾನಿ ಆಗಿದ್ದಾಗ ಪಕ್ಷದ ಜವಾಬ್ದಾರಿ ನನಗೆ ನೀಡಿದರು. ಅದಾದ ನಂತರ ಏನೇನು ಆಯ್ತು ಎಂಬುವುದು ನಿಮಗೆ ಗೊತ್ತು. 1980ರಲ್ಲಿ ಇಂದಿರಾಗಾಂಧಿ ಅವರು ಕಮಲಾಪತಿ ತ್ರಿಪಾಠಿ ಅವರನ್ನು ಕಳುಹಿಸಿ, ದೇವರಾಜು ಅರಸು ಕಾಂಗ್ರೆಸ್‌ನಿಂದ ಹೊರಗೆ ಹೋಗಿದ್ದಾರೆ, ನಿಮ್ಮನ್ನು ಸಿಎಂ ಮಾಡ್ತೀವಿ ಎಂದು ಹೇಳಿದರು.

ತ್ರಿಪಾಠಿ ಸಮ್ಮುಖದಲ್ಲಿ ಬಿಎಂ ಪಾಟೀಲರ ಮನೆಯಲ್ಲಿ ಎರಡು ಸಭೆ ನಡೆಯಿತು. ಬಿ.ಡಿ.ಜತ್ತಿ ಅವರು ಫೋನ್‌ ಮಾಡಿ, ದೇವೇಗೌಡರೇ ಚುನಾವಣೆ ನಡೆಸಲು ಸಾಲ ಮಾಡಿದ್ದೀರಿ, ನೀವು ಕಾಂಗ್ರೆಸ್‌ ಸೇರಿ ಎಂದು ಕೇಳಿದ್ದರು. ಆದರೆ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಸೇರಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ಮೊರಾರ್ಜಿ ದೇಸಾಯಿ ಅವರು ಕೊಟ್ಟಿರುವ ಜವಾಬ್ದಾರಿ ನಿರ್ವಹಿಸಿಕೊಂಡು ಬಂದಿದ್ದು, ಇಂದಿಗೆ 25 ವರ್ಷ ಆಗಿದೆ ಎಂದು ತಿಳಿಸಿದರು.

ಲಾಲ್‌ ಬಹದೂರ್‌ ಶಾಸ್ತ್ರಿ ಅವರನ್ನು ನಿಜಲಿಂಗಪ್ಪ ಅವರು ಕರೆಸಿ ಆಲಮಟ್ಟಿ ಜಲಾಶಯಕ್ಕೆ ಶಿಲಾನ್ಯಾಸ ಮಾಡಿಸಿದರು. ಆದರೆ, ನಾನು ಬರುವವರೆಗೆ ನಿಜಲಿಂಗಪ್ಪ, ಬಿಡಿ ಜತ್ತಿ, ವೀರೇಂದ್ರ ಪಾಟೀಲ್‌ ದೇವರಾಜ ಅರಸು, ಹೆಗ್ಗಡೆಯವರು ಇವರೆಲ್ಲಾ ಸಿಎಂ ಆಗಿದ್ದರು. ಆದರೆ, ಎಷ್ಟು ನೀರು ಸಂಗ್ರಹಿಸಿದರು. ಕೇವಲ ಶೇ.10 ನೀರನ್ನು ಮಾತ್ರ ಸಂಗ್ರಹವಾಗಿತ್ತು.

ನಾರಾಯಣಪುರ ಡ್ಯಾಂ ಕಟ್ಟಿ ಕೇವಲ 15 ಲಕ್ಷ ಎಕರೆಗೆ ಕೃಷ್ಣಾನದಿ ನೀರು ನೀಡಬೇಕಾಗಿತ್ತು. ಆದರೆ, ಕೇವಲ 50 ಸಾವಿರ ಎಕರೆಗೆ ನೀರು ಕೊಟ್ಟಿದ್ದರು. ನಾನು ಸಿಎಂ ಆದ ವೇಳೆ ವೀರಪ್ಪ ಮೊಯ್ಲಿ ಅವರು 200 ಕೋಟಿ ಸಾಲ ಮಾಡಿ, ಸರ್ಕಾರಿ ಅಧಿಕಾರಿಗಳ ಸಂಬಳ ಕೊಟ್ಟಿದ್ದರು. ಅಂತಹ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿ ಆದೆ. ಈ ವೇಳೆ ಕೃಷ್ಣಾ ಮೇಲ್ದಂಡೆ ಯೋಜನೆ, ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಿದ್ದನ್ನು ಸ್ಮರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com