

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸತೀಶ್ ಜಾರಕಿಹೊಳಿ ನಡುವೆ ಮುನಿಸು ವಿಚಾರ ಇದೀಗ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸರ್ವ ಸದಸ್ಯರ ಸಭೆಯ ವೇದಿಕೆಯಲ್ಲಿ ಉಭಯ ನಾಯಕರು ಯಾವುದೇ ಮಾತುಕತೆ ನಡೆಸಿದೆ ಅಂತರ ಕಾಯ್ದುಕೊಂಡಿರುವುದು ರಾಜಕೀಯ ಪಾಳಯದಲ್ಲಿ ಚರ್ಚೆ ಹುಟ್ಟುಹಾಕಿದೆ.
ಕೆಪಿಸಿಸಿ ಸರ್ವಸದಸ್ಯರ ಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಕ ಮೊದಲಿಗೆ ಕುಳಿತಿರದಿದ್ದರೂ ನಂತರ ನಾನು ಪಕ್ಕದಲ್ಲಿ ಕುಳಿತಿದ್ದೆ. ನಾವಿಬ್ಬರೂ ಮೊದಲಿನಂತೆಯೇ ಇದ್ದೇವೆ. ಯಾವುದೇ ಅಂತರವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಸಭೆಯಲ್ಲಿ ಒಟ್ಟಿಗೆ ಕುಳಿತುಕೊಳ್ಳದಿರುವುದೇನೂ ಹೊಸದಲ್ಲ, ನಾವು ಮೊದಲಿನಂತೆಯೇ ಇದ್ದೇವೆ. ಬೇಕಿದ್ದರೆ, ಹಳೆಯ ಕಾರ್ಯಕ್ರಮಗಳ ವಿಡಿಯೋ ತುಣುಕುಗಳನ್ನು ತೆಗೆದು ನೋಡಿ. ಹಿಂದೆ ಇದ್ದಂತೆಯೇ ಈಗಲೂ ಇದ್ದೇವೆ. ಹಿರಿಯ ನಾಯಕರು ಬರಬಹುದು ಅಂತ ಪಕ್ಕಕ್ಕೆ ಕುಳಿತಿರಲಿಲ್ಲ. ನಂತರ ಪಕ್ಕದಲ್ಲೇ ಕುಳಿತಿದ್ದೆವು. ಮಾತನಾಡಿಲ್ಲ ಅಂತ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ನಡುವೆ ಮುಂದೆಯೂ ಹೀಗೆ ಇರುತ್ತದೆ. ಹಿರಿಯರು ಬಂದ್ರೆ ಏಳಬೇಕು ಅಂತ ದೂರ ಕುಳಿತುಕೊಂಡಿದ್ದೆ. ಹತ್ತು ವರ್ಷದಿಂದ ನಾವು ಹೀಗೆ ಇದ್ದೇವೆ. ಇದರಲ್ಲಿ ಬೇರೆ ಏನೂ ಗೊಂದಲ ಇಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ಮಾಜಿ ಸಚಿವ ವಿ.ಸುನೀಲ್ ಕುಮಾರ್ ಜಾತಿ ಗಣತಿ ವರದಿ ಮಂಡನೆಗೆ ಒತ್ತಾಯಿಸಿರುವ ಬಗ್ಗೆ ಗಮನಸೆಳೆದಾಗ, ಕ್ಯಾಬಿನೆಟ್, ಅಧಿವೇಶನಕ್ಕೂ ತರಬೇಕು. ಗಣತಿ ವರದಿಯಿಂದ ಯಾರಿಗೂ ತೊಂದರೆ ಇಲ್ಲ. ಡಿ.ಕೆ.ಶಿವಕುಮಾರ್ ಕೂಡ ಜಾತಿ ಗಣತಿಯನ್ನು ವಿರೋಧಿಸಿರಲಿಲ್ಲ. ಹಳೆಯದಾಗಿದ್ದು ಹೊಸದಾಗಿ ಮಾಡಬೇಕು ಎಂದು ಹೇಳಿದ್ದರಷ್ಟೇ. ಈಗ ಚರ್ಚಿಸಿ ಸೂಕ್ತ ತೀರ್ಮಾನ ಮಾಡುತ್ತಾರೆ. ಕೇಂದ್ರದ ಜಾತಿಗಣತಿ ವರದಿ ಬಂದರೂ ಒಳ್ಳೆಯದೇ ಎಂದರು.