

ಬೆಂಗಳೂರು: ಬಿಜೆಪಿಯವರು ರಾಮನ ಹೆಸರಿನಲ್ಲಿಯೇ ಲೂಟಿ ಮಾಡುವವರು, ಇನ್ನು ಧರ್ಮಸ್ಥಳ ಮಂಜುನಾಥ ಸ್ವಾಮಿಯ ಹೆಸರಿನಲ್ಲಿ ಸತ್ಯ ಹೇಳುತ್ತಾರಾ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಶಾಸಕರಿಂದ ವಿಧಾನ ಪರಿಷತ್ ಚುನಾವಣೆ ಬಗ್ಗೆ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿ ಮುಂದೆ ಆಣೆ ಪ್ರಮಾಣ ಮಾಡಿಸುತ್ತೇವೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಅವರ ಪಕ್ಷವನ್ನು ನೋಡಿಕೊಳ್ಳಲು ಹೇಳಿ. ಮಲ್ಲಿಕಾರ್ಜುನ ಖರ್ಗೆಯವರು ಹಿರಿಯರು ಅವರಿಗೆ ಅನುಭವ ಕೂಡ ಇದೆ. ಪಕ್ಷದಲ್ಲಿ ನಾಯಕರು, ಶಾಸಕರು, ಕಾರ್ಯಕರ್ತರನ್ನು ಶಿಸ್ತಿನ ಹಾದಿಯಲ್ಲಿ ನಡೆಸುವ ಅಧಿಕಾರ ಅವರಿಗಿದೆ.ಬಿಜೆಪಿಗೆ ಶಿಸ್ತೇ ಇಲ್ಲ, ಅದಕ್ಕಾಗಿ ಅಡ್ಡ ಮತದಾನ ಮಾಡಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ನವರ ಒಗ್ಗಟ್ಟು ನೋಡಿಯೇ ಬಿಜೆಪಿಯ 7-8 ಮಂದಿ ವಿಧಾನ ಪರಿಷತ್ ಚುನಾವಣೆಯಲ್ಲಿ ನಮಗೆ ಮತ ಹಾಕಿದರು. ಜೆಡಿಎಸ್ ನವರು ಹಾಕಿದ ಒಬ್ಬ ಅಭ್ಯರ್ಥಿಗೆ ಬಿಜೆಪಿಯವರ ಒಪ್ಪಿಗೆ ಕೂಡ ಇತ್ತು. ಹಾಗಾದರೆ ಜೆಡಿಎಸ್ ನಲ್ಲಿ ಬಿಜೆಪಿಯಲ್ಲಿ ಒಗ್ಗಟ್ಟು ಇದೆಯೇ, ನಿಮ್ಮ ಮನೆ ಒಡೆದು ಮನೆಯೊಂದು ಮೂರು ಬಾಗಿಲು ಆಗಿದೆ. ಹಾಗಿರುವಾಗ ನೀವ್ಯಾಕೆ ಕಾಂಗ್ರೆಸ್ ವಿಚಾರದಲ್ಲಿ ತಲೆ ಹಾಕುತ್ತೀರಿ ಎಂದು ಕೇಳಿದರು.
ಎಂಎಲ್ಸ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮೊದಲ ಹಂತದಲ್ಲಿಯೇ ಆರಿಸಿ ಬಂದಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಅವರು ವೋಟ್ ಹಾಕಿರದಿದ್ದರೆ ಬಿಜೆಪಿಗೆ ಒಂದೇ ಸೀಟು ಬರುತ್ತಿತ್ತು. ನಿಮ್ಮ ಮನೆಯನ್ನು ಪರಿಶೀಲಿಸಿ, ಇಲ್ಲದಿದ್ದರೆ ಇನ್ನು ಆರು ತಿಂಗಳಲ್ಲಿ ಇನ್ನೂ 10 ಮಂದಿ ಕಿತ್ತು ಬರುತ್ತಾರೆ ಎಂದರು.
Advertisement