

ಬೆಂಗಳೂರು: ಇನ್ನು ಮುಂದೆ ಕಾರ್ಯಕರ್ತರಿಗೆ ಅಧಿಕಾರ ಕೊಡಿ.ನಿಜವಾದ ಕಾರ್ಯಕರ್ತರನ್ನು ಗುರುತಿಸಿ ಹುದ್ದೆ ನೀಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಕಿವಿಮಾತು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ಬಿ. ಕೆ. ಹರಿಪ್ರಸಾದ್ ಪದಗ್ರಹಣ ಮಾಡಿದ ಸಮಾವೇಶದಲ್ಲಿ ಮಾತನಾಡಿದ ಅವರು, ಇಷ್ಟು ದಿನ ಏನಾಯ್ತು ಆಯ್ತು, ಯಾರಿಗೆ ಏನು ಬೇಕೋ ಅದನ್ನು ಮಾಡಿಕೊಂಡರು. ಇನ್ನು ಮುಂದೆ ಕಾರ್ಯಕರ್ತರಿಗೆ ಅಧಿಕಾರ ಕೊಡಿ. ನಿಜವಾದ ಕಾರ್ಯಕರ್ತರನ್ನು ಗುರುತಿಸಿ ಹುದ್ದೆ ಕೊಡಿ. ಕಷ್ಟಪಟ್ಟು ಎಲ್ಲರನ್ನೂ ಸಮಾಧಾನ ಮಾಡಿ, ಎಲ್ಲರ ಮನೆಗೂ ಹೋಗಿ ಒಂದುಗೂಡಿಸಿ ಕೆಲಸ ಮಾಡಿ ಎಂದರು.
ಸಿಎಂ ಡಿಕೆಶಿ, ಬಿ. ಕೆ. ಹರಿಪ್ರಸಾದ್ಗೆ ಕಿವಿಮಾತು
ಡಿ. ಕೆ. ಶಿವಕುಮಾರ್, ಬಿ. ಕೆ. ಹರಿಪ್ರಸಾದ್ ಅವರಿಗೆ ಹಿರಿಯರಾಗಿ ಮತ್ತು ಎಐಸಿಸಿ ಅಧ್ಯಕ್ಷರಾಗಿ ಕಿವಿಮಾತು ಹೇಳಿದ ಮಲ್ಲಿಕಾರ್ಜುನ ಖರ್ಗೆ, ಇಬ್ಬರು ಒಂದಾಗಿ ನಡೆಯಿರಿ. ನಿಮ್ಮಲ್ಲಿ ಎಷ್ಟೇ ಡಿಫರೆನ್ಸ್ ಬಂದರೂ ಒಳಗೆ ಕೂತು ಚರ್ಚೆ ಮಾಡಿ. ಇಡೀ ಪಾರ್ಟಿ ಮೇಲೆ ಪರಿಣಾಮ ಬೀರುತ್ತದೆ. ಎಐಸಿಸಿಗೆ ಕೆಟ್ಟ ಹೆಸರು ತರಬೇಡಿ. ಅಧಿಕಾರ ಹಸ್ತಾಂತರ ಸುಸೂತ್ರವಾಗಿ ನಡೆದಿದೆ. ಅದಕ್ಕಾಗಿ ರಂದೀಪ್ ಸುರ್ಜೇವಾಲಾಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ
ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಬಿಜೆಪಿ ಅವರಿಗೆ ಅವಕಾಶ ನೀಡಿದರೆ, ಗ್ಯಾರಂಟಿ ಕಿತ್ತು ಹಾಕ್ತಾರೆ. ನಾವು ಗ್ಯಾರಂಟಿ ರಕ್ಷಣೆ ಮಾಡುತ್ತೇವೆ. ವಿರೋಧ ಪಕ್ಷದವರು ಕಾಂಗ್ರೆಸ್ ಮೇಲೆ ಅಷ್ಟೇ ಅಲ್ಲ, 1.22 ಮಹಿಳೆಯರ ಮೇಲೆ ಹಲ್ಲೆ ಮಾಡ್ತಿದ್ದಾರೆ. ಗ್ಯಾರಂಟಿ ಫಲಾನುಭವಿಗಳ ಮೇಲೆ ಬಿಜೆಪಿ ಹಲ್ಲೆ ಮಾಡುತ್ತಿದೆ. ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಕೇಂದ್ರ ಸರ್ಕಾರ ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಿದೆ. ಬಿಜೆಪಿ ಸರ್ಕಾರ ಸಂವಿಧಾನದ ವಿರುದ್ಧ ಹೋರಾಟ ಮಾಡುತ್ತಿದೆ. ನಾವು ವೇದಿಕೆ ಮೇಲೆ ಸಂವಿಧಾನ ಹಂಚಿದ್ದೇವೆ. ಬಿಜೆಪಿ ಸರ್ಕಾರ ಅಲ್ಪಸಂಖ್ಯಾತ, ಒಬಿಸಿ ಮತದಾರರ ಹಕ್ಕು ಕಿತ್ತುಕೊಳ್ಳುತ್ತಿದೆ. ಎಸ್ಐಆರ್ ಮಾಡಿ ಮತಗಳನ್ನು ಕಿತ್ತು ಹಾಕ್ತಿದೆ, ನಿಮ್ಮ ಹಕ್ಕು ಕಸಿದುಕೊಳ್ತಿದೆ. ಹರಿಪ್ರಸಾದ್, ಸಿಎಂ, ಡಿ. ಕೆ. ಶಿವಕುಮಾರ್ ಅವರಿಗೆ ಜವಾಬ್ದಾರಿ ಹೆಚ್ಚಾಗಿದೆ. ಸಂವಿಧಾನ ಮಾತ್ರವಲ್ಲ, ರಾಜ್ಯದ ಜನರ ಹಿತ ನೀವು ಕಾಪಾಡಬೇಕಾಗಿದೆ ಎಂದು ಕರೆ ನೀಡಿದರು.
Advertisement