

ಬೆಂಗಳೂರು: ರಾಜಕಾರಣದಲ್ಲಿ ನನ್ನ ಮೇಲೆ, ನನ್ನ ಕುಟುಂಬದವರ ಮೇಲೆ ಟೀಕೆ, ಆರೋಪಗಳು ಹೊಸದೇನಲ್ಲ. ಪ್ರಚೋದನೆ ಮಾಡಲೆಂದೇ ಒಂದು ಗುಂಪು ಕೆಲಸ ಮಾಡುತ್ತಿದೆ. ಹೀಗಾಗಿ ಕಾರ್ಯಕರ್ತರು ಉದ್ವೇಗಕ್ಕೆ ಒಳಗಾಗುವುದು ಬೇಡ. ಚಪ್ಪಲಿ ಎಸೆಯುವುದು ನಮ್ಮ ಸಂಸ್ಕೃತಿ ಅಲ್ಲ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನಿನ್ನೆ ಕೆಂಪೇಗೌಡ ಜಯಂತಿ ವೇಳೆ ಗಲಾಟೆ ವಿಚಾರವಾಗಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾರ ವಿರುದ್ಧವೂ ಧಿಕ್ಕಾರ ಕೂಗುವುದು ಬೇಡ. ಸಮಾಜದಲ್ಲಿ ಅಶಾಂತಿ ಉಂಟು ಮಾಡುವುದು ಬೇಡ. ಇಂಥ ಸಂದರ್ಭದಲ್ಲಿ ಶಾಂತಚಿತ್ತದಿಂದ ಇರಬೇಕೆಂದು ಮನವಿ ಮಾಡಿದರು.
ಶಾಸಕ ಪ್ರದೀಪ್ ಈಶ್ವರ್ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದಾಗ ನನ್ನ ನಮಸ್ಕಾರ ಎಂದಷ್ಟೇ ಕುಮಾರಸ್ವಾಮಿ ಹೇಳಿದರು.
2028ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ (NDA) ಮೈತ್ರಿಕೂಟದ ಮುಖವಾಗಿ ನೀವು ಇರುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೆಚ್.ಡಿ. ಕುಮಾರಸ್ವಾಮಿ ಅವರು, ಯಾರು ನಾಯಕತ್ವ ವಹಿಸುತ್ತಾರೆ ಎಂಬುದು ಬೇರೆ ವಿಷಯ, ನನ್ನ ವೈಯಕ್ತಿಕ ಗುರಿ ಈ ಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದಾಗಿದೆ. ಏಕೆಂದರೆ ಇದೇ ರೀತಿಯ ಆಡಳಿತ ಮುಂದುವರಿದರೆ, ಅಂತಿಮವಾಗಿ ಕರ್ನಾಟಕ ಮತ್ತು ಅದರ ಜನರ ಭವಿಷ್ಯ ಏನಾಗುತ್ತದೆ 2028ರ ಚುನಾವಣೆಯಲ್ಲಿ ಈ ಕೆಟ್ಟ ಸರ್ಕಾರವನ್ನು ಅಧಿಕಾರದಿಂದ ದೂರ ಮಾಡುವುದು ನನ್ನ ಜವಾಬ್ದಾರಿ ಎಂದು ಹೇಳಿದರು.