

ಬೆಂಗಳೂರು: ನಮ್ಮ ರಾಜ್ಯದ ವಿಧಾನಸಭೆಯಲ್ಲಿ ಇತ್ತೀಚೆಗೆ ನಡೆದ ಚರ್ಚೆಯನ್ನು ಕೇಳಿ ಮನಸ್ಸಿಗೆ ಅತೀವ ನೋವು ಮತ್ತು ಆಕ್ರೋಶ ಉಂಟಾಗಿದೆ. ಮುಂಬರುವ ಐಪಿಎಲ್ ಪಂದ್ಯಗಳಿಗಾಗಿ ಶಾಸಕರು ಮತ್ತು ಅವರ ಕುಟುಂಬದವರಿಗೆ 'ಉಚಿತ ವಿಐಪಿ ಟಿಕೆಟ್' ಬೇಕು ಎಂದು ಪಕ್ಷಭೇದ ಮರೆತು ಹಠ ಹಿಡಿದಿರುವುದು ಎಂತಹ ದುರ್ದೈವ ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಜನರ ಜೀವ ಮುಖ್ಯವೋ? ವಿಐಪಿ ಟಿಕೆಟ್ ಮುಖ್ಯವೋ? ನಮಗೆಲ್ಲಾ ನೆನಪಿರಲಿ, ಕಳೆದ ಬಾರಿ ಆರ್ಸಿಬಿ (RCB) ವಿಜಯೋತ್ಸವದ ಸಂಭ್ರಮದ ನಡುವೆ ನಡೆದ ಆ ಭೀಕರ ಕಾಲ್ತುಳಿತದಲ್ಲಿ 11 ಅಮಾಯಕ ಯುವಕರು ಪ್ರಾಣ ಕಳೆದುಕೊಂಡಿದ್ದರು. ಆ ಹನ್ನೊಂದು ಕುಟುಂಬಗಳ ಕಣ್ಣೀರು ಇಂದಿಗೂ ಆರಿಲ್ಲ. ಆ ದುರಂತಕ್ಕೆ ಕಾರಣರಾದ ಆರ್ಸಿಬಿ ಮ್ಯಾನೇಜ್ಮೆಂಟ್ ಆಗಲಿ ಅಥವಾ ಕೆಎಸ್ಸಿಎ (KSCA) ಆಗಲಿ ಇದುವರೆಗೂ ಯಾರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ. ಆ ಕುಟುಂಬಗಳಿಗೆ ಕನಿಷ್ಠ ನ್ಯಾಯವೂ ಸಿಕ್ಕಿಲ್ಲ ಎಂಬುದು ವ್ಯವಸ್ಥೆಯ ಅತಿದೊಡ್ಡ ವೈಫಲ್ಯ.
ಜನರ ತೆರಿಗೆ ಹಣದಲ್ಲಿ ಸವಲತ್ತು ಪಡೆಯುವ, ಕೇವಲ ₹1,600 ಬಾಡಿಗೆಗೆ 16 ಎಕರೆ ಸರ್ಕಾರಿ ಭೂಮಿಯನ್ನು ಅನುಭವಿಸುತ್ತಿರುವ ಕೆಎಸ್ಸಿಎ ಸಂಸ್ಥೆ, ಸಾಮಾನ್ಯ ಜನರ ಸುರಕ್ಷತೆಯನ್ನು ಗಾಳಿಗೆ ತೂರಿ ಟಿಕೆಟ್ ಹೆಸರಿನಲ್ಲಿ ಲೂಟಿ ಮಾಡುತ್ತಿದೆ. ಇಂತಹ ಸಮಯದಲ್ಲಿ ಜನರ ಪರವಾಗಿ ಧ್ವನಿ ಎತ್ತಬೇಕಾದ ಜನಪ್ರತಿನಿಧಿಗಳು ಕೇವಲ ತಮ್ಮ ವೈಯಕ್ತಿಕ ಸೌಲಭ್ಯಗಳಿಗಾಗಿ ಚರ್ಚಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.
ಒಬ್ಬ ಯುವಕನಾಗಿ ನಾನು ಕೇಳಬಯಸುತ್ತೇನೆ: ನಮ್ಮ ಯುವಕರ ಜೀವಕ್ಕಿಂತ ನಮಗೆ ಐಪಿಎಲ್ ಟಿಕೆಟ್ಗಳೇ ದೊಡ್ಡದಾದವೇ? ಸಾಮಾನ್ಯ ಜನರ ರಕ್ತ ಹರಿಸಿ ಕಟ್ಟುವ ಕ್ರೀಡಾಂಗಣದಲ್ಲಿ ಅವರಿಗೆ ಬೆಲೆ ಇಲ್ಲವೇ? ಉಚಿತ ಟಿಕೆಟ್ಗಳು ಬೇಡ, ಆ 11 ಯುವಕರ ಸಾವಿಗೆ ಕಾರಣರಾದವರ ಮೇಲೆ ತಕ್ಷಣ ಕಠಿಣ ಕಾನೂನು ಕ್ರಮವಾಗಲಿ. ಅಧಿಕಾರ ಇರುವುದು ಜನರ ಸೇವೆಗಾಗಿಯೇ ಹೊರತು, ಮೋಜು-ಮಸ್ತಿಗಾಗಿ ಅಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Advertisement