

ಬೆಂಗಳೂರು: ಬಿಡದಿ ಟೌನ್ ಶಿಪ್ ಯೋಜನೆಯಿಂದ ಕುಮಾರಸ್ವಾಮಿ ಅವರಿಗೆ ಒಳ್ಳೆ ಲಾಟರಿ ಬರಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕುಟುಕಿದ್ದಾರೆ.
ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಬಿಡದಿ ಟೌನ್ ಶಿಪ್ ಯೋಜನೆಗೆ ಸಂಪುಟ ಅನುಮೋದನೆ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ತುಂಗಭದ್ರಾ ಗೇಟ್ ವಿಚಾರವಾಗಿ ಟೀಕೆ ಮಾಡುತ್ತಿದ್ದರು ಈಗ ಏನಾಗಿದೆ. ನಾವು ಟೀಕೆ ಮೀರಿ ಕೆಲಸ ಮಾಡಿದ್ದೇವೆ.
ಕುಮಾರಸ್ವಾಮಿ ಅವರು ಈಗ ನಾನೇ ಮಾಡಿದ್ದು 8 ಸಾವಿರ ಅಡಿ ಕೊಡುತ್ತೇನೆ ಎಂದು ಹೇಳಿದ್ದೆ ಎಂದು ದೆಹಲಿಯಲ್ಲಿ ಕುಳಿತು ಈಗ ಹೇಳುತ್ತಿದ್ದಾರೆ. ಅವರ ಕ್ಷೇತ್ರ ಆದ ಕಾರಣ ಡಿನೋಟಿಫೈ ಮಾಡಬೇಕಿತ್ತು. ಅವರದ್ದೇ ಜಮೀನು ಇದೆಯಲ್ಲ. ಈಗ ಹಣ ಪಡೆಯಲಿ ನೋಡೋಣ. ದುಡ್ಡು ಬೇಡ ಎಂದು ಕೊಟ್ಟು ಬಿಡಲಿ. ಅವರು ಎಷ್ಟಕ್ಕೆ ತೆಗೆದುಕೊಂಡಿದ್ದರು.
ಈಗ ಎಷ್ಟಕ್ಕೆ ಹೋಗುತ್ತದೆ ಎಂದು ಗೊತ್ತಿಲ್ಲವೇ? ಅವರ ಸೇಲ್ ಡೀಡ್ ತೆಗೆದು ನೋಡಿ. ಈಗ ಒಳ್ಳೆ ಲಾಟರಿ ಬರುತ್ತಿದೆ ಅವರಿಗೆ. ಅವರು ಯಾರಿಗೋ ಜಿಪಿಎ ನೀಡಿದ್ದರು. ನನಗೆ ಹಣ ನೀಡಿ ಎಂದು ಅವರು ಹೇಳಿದ್ದಾರೆ. ಏನಾದರೂ ಹೆಚ್ಚು ಕಡಿಮೆ ಆಗುತ್ತದೆ ಅಂತ ನಾನು ಭೂಮಿ ಮಾಲೀಕರಿಗೆ ನೀಡಿ ಎಂದು ನಾನೇ ಹೇಳಿದ್ದೇನೆ ಎಂದರು.
ಭೂ ಮಾಲೀಕರು ನನ್ನ ಮೇಲೆ ವಿಶ್ವಾಸ ಇಡಿ. ನಿಮ್ಮ ಭೂಮಿ ಉಳಿಸಿಕೊಳ್ಳಿ. ನಿಮಗೆ ಸಾಕಷ್ಟು ಲಾಭ ಸಿಗಲಿದೆ. ರೈತರು ಹೋರಾಟ ಮಾಡುತ್ತಾರೆ. ವಿಪಕ್ಷಗಳು ಎತ್ತಿ ಕಟ್ಟುತ್ತಾರೆ. ಏನು ಮಾಡುವುದು?. ಟೀಕೆ ಟಿಪ್ಪಣಿ ಇದ್ದೇ ಇರುತ್ತದೆ ಏನು ಮಾಡುವುದು ಎಂದರು.
ಎಕ್ಸಿಟ್ ಪೋಲ್ಗಳ ಬಗ್ಗೆ ಕೇಳಿದಾಗ, ನನಗೆ ಎಕ್ಸಿಟ್ ಪೋಲ್ಗಳ ಬಗ್ಗೆ ನಂಬಿಕೆಯಿಲ್ಲ. ಇದರಲ್ಲಿ ಸತ್ಯ, ಸುಳ್ಳು ಇರಬಹುದು ಆದರೆ ನನಗೆ ವೈಯಕ್ತಿಕವಾಗಿ ನಂಬಿಕೆಯಿಲ್ಲ. ನಾನು ರಾಜಕೀಯದಲ್ಲಿ ವಿಶೇಷ ಅನುಭವ ಹೊಂದಿರುವೆ. ನಾವು ಕಾರ್ಯಕರ್ತರ ಹಾಗೂ ನಾಯಕರ ಮೇಲೆ ನಂಬಿಕೆ ಇಟ್ಟಿದ್ದೇನೆ" ಎಂದರು.
ಕೇರಳದಲ್ಲಿ ಯುಡಿಎಫ್ ಅಧಿಕಾರಕ್ಕೆ ಬರುವ ಭವಿಷ್ಯದ ಬಗ್ಗೆ ಕೇಳಿದಾಗ, ಈ ದೇಶ ಬದಲಾವಣೆ ಬಯಸುತ್ತಿದೆ. ಹೊಸ ಆಡಳಿತ ಬೇಕಿದೆ. ಬದಲಾವಣೆಗಾಗಿ ಇಂಡಿಯಾ ಒಕ್ಕೂಟ ಗೆಲ್ಲಲಿದೆ ಎಂದರು
Advertisement