

ಬೆಂಗಳೂರು: ಹೈಕೋರ್ಟ್ ನಿರ್ದೇಶನದಂತೆ ಅಂಚೆ ಮತಪತ್ರಗಳ ಮರು ಎಣಿಕೆಯ ಬಳಿಕ ಶೃಂಗೇರಿ ವಿಧಾನಸಭಾ ಕ್ಷೇತ್ರ ಕಳೆದುಕೊಂಡ ಕಾಂಗ್ರೆಸ್ ನಾಯಕ ಟಿ ಡಿ ರಾಜೇಗೌಡ, ಮತಪತ್ರಗಳ ಕೃತಕ ತಿದ್ದುಪಡಿ, ನಕಲಿ ದಾಖಲೆ ಸೃಷ್ಟಿ ಮತ್ತು ಅಪರಾಧ ಸಂಚು ಆರೋಪಿಸಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ.
ಸತ್ಯ ಹೊರಬರಲು 2023ರ ಮೇ 13ರಂದು ನಡೆದ ಮೊದಲ ಮತ ಎಣಿಕೆಯ ದಿನದ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ತಮ್ಮ ಸಮ್ಮುಖದಲ್ಲಿ ಮರು ಪರಿಶೀಲಿಸಬೇಕೆಂದು ರಾಜೇಗೌಡ ಮನವಿ ಮಾಡಿದ್ದಾರೆ.
ಶೃಂಗೇರಿ ಕ್ಷೇತ್ರದಲ್ಲಿ ತಿರಸ್ಕೃತಗೊಂಡಿದ್ದ 279 ಅಂಚೆ ಮತಪತ್ರಗಳ ಬಗ್ಗೆ ಮಾತ್ರ ಜೀವರಾಜ್ ಆಕ್ಷೇಪ ವ್ಯಕ್ತಪಡಿಸಿದ್ದು, ಮರು ಪರಿಶೀಲಿಸಲು ಹೈಕೋರ್ಟ್ ಆದೇಶಿಸಿತ್ತು ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
“2026ರ ಮೇ 2ರಂದು ನಡೆದ ಮರು ಎಣಿಕೆಯಲ್ಲಿ ತಿರಸ್ಕೃತಗೊಂಡ ಅಂಚೆ ಮತಪತ್ರಗಳಲ್ಲಿ ಕೇವಲ ಎಂಟು ಮತಪತ್ರಗಳನ್ನು ಮಾತ್ರ ಎಣಿಕೆಗೆ ಅಂಗೀಕರಿಸಲಾಯಿತು. ಅದರಲ್ಲಿ ಮೂರು ತಾಂತ್ರಿಕ ಕಾರಣಗಳಿಂದ ತಿರಸ್ಕೃತಗೊಂಡಿದ್ದವು. ಉಳಿದ ಐದು ಮತಪತ್ರಗಳಲ್ಲಿ ಮೂರು ನನ್ನ ಪರವಾಗಿದ್ದರೆ, ಎರಡು ಜೀವರಾಜ್ ಪರವಾಗಿದ್ದವು. ಆದರೆ ನನ್ನ ಕಟ್ಟುಗಳಲ್ಲಿ ಇದ್ದ 257 ಮಾನ್ಯ ಮತಪತ್ರಗಳನ್ನು ‘ಡಬಲ್ ಎಂಟ್ರಿ’ ಕಾರಣ ನೀಡಿ ತಿರಸ್ಕರಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಅಧಿಕಾರಿಗಳು ಮತಪತ್ರಗಳನ್ನು ತಿರಸ್ಕರಿಸುವುದು ಸಾಧ್ಯವಿಲ್ಲ ಎಂದು ರಾಜೇಗೌಡ ಪಿತೂರಿ ನಡೆದಿದೆ ಎಂದು ಆರೋಪ ಮಾಡಿದ್ದಾರೆ.
ಜೀವರಾಜ್, ಆರ್ಒ ವೇದಮೂರ್ತಿ ಮತ್ತು ಡಿ ಸಿ ರಮೇಶ್ ಸಂಚು ರೂಪಿಸಿ, ತೆರೆಯಲ್ಪಟ್ಟ ಕವರ್ಗಳಲ್ಲಿ ಇದ್ದ ಮತಪತ್ರಗಳಲ್ಲಿ ತಿದ್ದುಪಡಿ ಮಾಡಿ ಅವುಗಳನ್ನು ಅಮಾನ್ಯಗೊಳಿಸಿದ್ದಾರೆ. 2023ರ ಎಲ್ಲಾ ಸಹಿಗಳಿರುವ ತೀರ್ಮಾನ ಪುಸ್ತಕವನ್ನೂ ಬದಲಾಯಿಸಲಾಗಿದೆ. ಸ್ಟ್ರಾಂಗ್ ರೂಮ್ನಲ್ಲಿ ಹಾನಿಗೊಳಗಾದ ಪೆಟ್ಟಿಗೆಗಳ ಬಗ್ಗೆ ನನ್ನ ಏಜೆಂಟ್ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ರಾಜೇಗೌಡ ಹೇಳಿದ್ದಾರೆ.
ಅಧಿಕಾರಿಗಳು ಮತ್ತು ಅಭ್ಯರ್ಥಿಯ ವಿರುದ್ಧ ಜನಪ್ರತಿನಿಧಿತ್ವ ಕಾಯ್ದೆಯ ಸೆಕ್ಷನ್ 136ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಅವರು ಮುಖ್ಯ ಚುನಾವಣಾಧಿಕಾರಿಯನ್ನು ಒತ್ತಾಯಿಸಿದ್ದಾರೆ.
Advertisement