

ಬೆಂಗಳೂರು: ನಮ್ಮ ದೇಶದಲ್ಲಿ ಇಂದು ದಿನಕ್ಕೊಂದು ಗಂಭೀರ ಸಮಸ್ಯೆಗಳು ಉದ್ಭವಿಸುತ್ತಿದ್ದರೂ, ಅದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ಪ್ರವಾಸಗಳಲ್ಲಿ ನಿರತರಾಗಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರನ್ನು ರೋಮ್ ಸಾಮ್ರಾಜ್ಯದ ನೀರೋ ಚಕ್ರವರ್ತಿ ಹಾಗೂ ಆಸ್ಟ್ರಿಚ್ (ಉಷ್ಟ್ರಪಕ್ಷಿ) ಪಕ್ಷಿಗೆ ಹೋಲಿಸಬಹುದು. ಆಸ್ಟ್ರಿಚ್ ಪಕ್ಷಿ ಬಿರುಗಾಳಿ ಬಂದಾಗ ಮರುಭೂಮಿಯೊಳಗೆ ಕತ್ತು ಹೂತುಕೊಂಡು ನಿಂತುಕೊಳ್ಳುತ್ತದೆ. ಬಿರುಗಾಳಿ ಬಂದಾಗ ಹೇಗೆ ಎದುರಿಸಬೇಕೆಂದು ಹುಡುಕುವ ಬದಲು ತಲೆಯೊಳಗೆ ಹಾಕುವಂತೆ ನರೇಂದ್ರ ಮೋದಿಯವರು. ದೇಶಕ್ಕೆ ಇಂದು ಬಿರುಗಾಳಿ, ಸುಂಟರಗಾಳಿ ಬಂದಿದೆ. ಅದನ್ನು ಯಾವ ರೀತಿ ಎದುರಿಸಬೇಕೆಂದು ಹುಡುಕುವ ಬದಲು ಫಾರಿನ್ ಟೂರ್ ಹೋಗುತ್ತಿದ್ದಾರೆ ಎಂದರು.
ಪ್ರಧಾನಿ ಮೋದಿಯವರು ಇಟಲಿಗೆ ಹೋಗಿ 'ಪಾರ್ಲೆ ಮೆಲೋಡಿ' ಚಾಕೊಲೇಟ್ ಅನ್ನು ಜಾರ್ಜಿಯಾ ಮೆಲೋನಿಗೆ ಕೊಟ್ಟು, ಭಾರತದಲ್ಲಿ ಪಾರ್ಲೆ ಕಂಪನಿಯ ಶೇರು ದರ ಹೆಚ್ಚಾಗುವಂತೆ ಮಾಡಿದ್ದಾರೆ. ಪ್ರಧಾನಿಯಾದವರು ದೇಶದ ರಾಜತಾಂತ್ರಿಕತೆ ಬಿಟ್ಟು, ಅಲ್ಲಿಯೂ ಪಾರ್ಲೆ ಕಂಪನಿಯ ಜೊತೆ ಸೇರಿಕೊಂಡು ವ್ಯಾಪಾರ ಕುದುರಿಸಿದ್ದಾರೆ" ಎಂದು ಗಂಭೀರವಾಗಿ ಆರೋಪಿಸಿದರು.
ರೋಮ್ ಹೊತ್ತಿ ಉರಿಯುವಾಗ ನೀರೋ ಪಿಟೀಲು ಬಾರಿಸುತ್ತಿದ್ದ!
ರೋಮ್ ನಗರವು ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದಾಗ ಅಲ್ಲಿನ ಕ್ರೂರ ದೊರೆ ನೀರೋ ಮಹಾರಾಜ ಆರಾಮವಾಗಿ ಕುಳಿತು ಪಿಟೀಲು ನುಡಿಸುತ್ತಿದ್ದನಂತೆ. ಭಾರತದ ಇಂದಿನ ಪರಿಸ್ಥಿತಿಯೂ ಹಾಗೇ ಆಗಿದೆ. ದೇಶದಲ್ಲಿ ಪ್ರತಿದಿನವೂ ಹತ್ತಾರು ಜನವಿರೋಧಿ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಆದರೆ, ನಮ್ಮ ಪ್ರಧಾನಿ ಮೋದಿಯವರು ದೇಶದ ಗಂಭೀರ ಪರಿಸ್ಥಿತಿಯನ್ನು ಬದಿಗೊತ್ತಿ ವಿದೇಶಿ ಪ್ರವಾಸಗಳನ್ನು (Foreign Trips) ಮಾಡುತ್ತಿದ್ದಾರೆ" ಎಂದು ಹರಿಪ್ರಸಾದ್ ಆಪಾದಿಸಿದರು.
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಭೇಟಿಯ ಫೋಟೋಗಳ ಬಗ್ಗೆ ಮಾತನಾಡಿ "70 ವರ್ಷದ ಮುದಿಯ ಪ್ರಧಾನಿ ನರೇಂದ್ರ ಮೋದಿಯವರು, ತಮಗಿಂತ ತೀರಾ ಸಣ್ಣ ವಯಸ್ಸಿನ ಇಟಲಿ ಪ್ರಧಾನಿ ಜೊತೆಗೆ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಹಾಗೂ ರೋಮ್ ನಗರದಲ್ಲಿ ಅವರಿಬ್ಬರು ತೆಗೆಸಿಕೊಂಡಿರುವ ರೊಮ್ಯಾಂಟಿಕ್ ಫೋಟೋಗಳನ್ನು ನೋಡಿದರೆ ದೇಶದ ಜನರಿಗೆ ನಗು ಬರುತ್ತದೆ. ದೇಶದಲ್ಲಿ ಇಷ್ಟೆಲ್ಲಾ ಸಮಸ್ಯೆ ಇರುವಾಗ, ಇವರು ಮಾತ್ರ ತಮಗಿಂತ ಸಣ್ಣ ವಯಸ್ಸಿನವರ ಜೊತೆಗೆ 'ಮೆಲೋಡಿ' (Melodi) ಹಂಚಿಕೊಂಡು ಕಾಲ ಕಳೆಯುತ್ತಿದ್ದಾರೆ" ಎಂದು ವ್ಯಂಗ್ಯವಾಡಿದರು.
ರಾಜನೇ ವ್ಯಾಪಾರಿಯಾದಾಗ ದೇಶದ ಪ್ರಜೆಗಳು ಬಿಕಾರಿಯಾಗುತ್ತಾರೆ ಎಂಬುದು ಚಾಣಕ್ಯ ನೀತಿ. ಭಾರತದ ಇತಿಹಾಸದಲ್ಲೇ ದೇಶದ ಜನರನ್ನು ಅತ್ಯಂತ ಕಡು ಬಿಕಾರಿ ಮಾಡಿದ ಪ್ರಧಾನಿ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ ಮಾತ್ರ. ದೇಶದ ಸಂಪತ್ತನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡುತ್ತಾ, ಜನರ ಬದುಕನ್ನು ಬೀದಿಗೆ ತಂದಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
Advertisement