

ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಉಲ್ಲಂಘಸಿ ವಿದೇಶದಲ್ಲಿ ಅಕ್ರಮವಾಗಿ ಹೂಡಿಕೆ ಮಾಡಿದ ಆರೋಪದಡಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಅವರ ಕುಟುಂಬ ಸದಸ್ಯರು ಮತ್ತು ಇತರ ಆಪ್ತರ ಮನೆಗಳ ಮೇಲೆ ಕಳೆದ ಬುಧವಾರ ಮತ್ತು ಗುರುವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು.
ಇಡಿ ದಾಳಿ ಬಗ್ಗೆ ಶನಿವಾರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಕೆಎನ್ ರಾಜಣ್ಣ ಅವರು, ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕಳೆದ ನಾಲ್ಕು ದಶಕಗಳಿಂದ ನೋಡಿದ್ದೇನೆ. ಅವರು ವ್ಯವಹಾರದಲ್ಲಿ ಶ್ರೇಷ್ಠ ವ್ಯಕ್ತಿ. ಯಾವುದೇ ವಿಚಾರದಲ್ಲೂ ತಪ್ಪು ಮಾಡುವುದಿಲ್ಲ ಎಂದರು.
ಸತೀಶ್ ಜಾರಕಿಹೊಳಿ ಒಬ್ಬ ಸಂಭಾವಿತ ವ್ಯಕ್ತಿಯಾಗಿದ್ದು, ನಾನು ಅವರ ಜೊತೆ ನಿಲ್ಲುತ್ತೇನೆ. ಸತೀಶ್ ಭೇಟಿ ಮಾಡಲು ಅವರ ಮನೆಗೆ ಹೋಗಿದ್ದೆ. ಆದರೆ ಕೆಲಸದ ನಿಮಿತ್ತ ಅವರು ಹೊರಗಡೆ ಹೋಗಿದ್ದರು. ಅವರ ಕುಟುಂಬ ಮತ್ತು ಅಭಿಮಾನಿಗಳ ಜತೆ ಮಾತನಾಡಿದೆ. ನಾನು ಸತೀಶ್ ಜತೆ ನಿಲ್ಲು ಭರವಸೆ ನೀಡಿದ್ದೇನೆ ಎಂದರು.
ಇಡಿ ದಾಳಿ ರಾಜಕೀಯ ಪ್ರೇರಿತ ಎಂದ ರಾಜಣ್ಣ, ಕೇಂದ್ರ ಸರ್ಕಾರ ಎಲ್ಲಾ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಇದೇ ವೇಳೆ ಇನ್ನೂ ನಾಲ್ಕೈದು ಸಚಿವರ ಮೇಲೆ ಇಡಿ ದಾಳಿ ಆಗಬಹುದು ಎಂದು ಹೇಳಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಎನ್ ರಾಜಣ್ಣ, ಈ ಬಗ್ಗೆ ನೀವು ಅವರನ್ನೇ ಕೇಳಬೇಕು. ಈ ರೀತಿಯ ರೇಡ್ ನಲ್ಲಿ ಅವರು ಪರಿಣಿತರು. ಇದರ ಹಿಂದೆ ಯಾರದ್ದಾದರೂ ಕೈವಾಡ ಇರಬಹುದು ಎಂದು ತಿರುಗೇಟು ನೀಡಿದರು.