ಕನ್ನಡ ಮಾಧ್ಯಮ ಕಡ್ಡಾಯಗೊಳಿಸದಿದ್ದರೆ ಸಾಹಿತ್ಯ ಸಮ್ಮೇಳನ ಮಾಡುವುದಿಲ್ಲ: ಕಸಾಪ

ಇನ್ನೊಂದು ವರ್ಷದೊಳಗೆ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಬೋಧಿಸಲು ಕಡ್ಡಾಯ ಮಾಡದೆ ಹೋದರೆ...
೮೧ನೆ ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ
೮೧ನೆ ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ

ಬೆಂಗಳೂರು: ಇನ್ನೊಂದು ವರ್ಷದೊಳಗೆ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಬೋಧಿಸಲು ಕಡ್ಡಾಯ ಮಾಡದೆ ಹೋದರೆ ಇನ್ನು ಮುಂದೆ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವುದನ್ನು ನಿಲ್ಲಿಸುತ್ತೇವೆ ಎಂದು ಸರ್ಕಾರಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಶುಕ್ರವಾರ ತಿಳಿಸಿದೆ. ಇದೇ ಕಾರಣಕ್ಕೆ ಶ್ರವಣಬೆಳಗೊಳದಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಲು ಖ್ಯಾತ ಸಾಹಿತಿ ದೇವನೂರು ಮಹದೇವ ನಿರಾಕರಿಸಿದ್ದರು. ಆದುದರಿಂದ ಕವಿ ಸಿದ್ಧಲಿಂಗಯ್ಯ ಸಮ್ಮೇಳನಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ವರದಿಗಾರರೊಂದಿಗೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ "ದೇವನೂರು ಮಹದೇವ ಅವರ ನಿಲುವಿಗೆ ಬೆಂಬಲ ನೀಡಲು ಸಮ್ಮೇಳನದಲ್ಲಿ ವಿಶೇಷ ಸಮಾಲೋಚನೆ ನಡೆಸಲಾಗುವುದು. ನಂತರ ಇದರ ಪರವಾಗಿ ನಿಲುವಳಿ ಮಂಡಿಸಲಾಗುವುದು" ಎಂದಿದ್ದಾರೆ. ಹಾಗೆಯೇ ಚುನಾಯಿತ ಪ್ರತಿನಿಧಿಗಳು ಇದನ್ನು ಸಾಕಾರವಾಗಿಸುವತ್ತ ಗಮನ ಹರಿಸಬೇಕು ಎಂದಿದ್ದಾರೆ.

ಸಾಹಿತ್ಯ ಪರಿಷತ್ತು ಸರ್ಕಾರದ ಆಡಳಿತಕ್ಕೆ ಒಳಪಡುವ ಸಂಸ್ಥೆಯಲ್ಲ ಆದುದರಿಂದ ಕನ್ನಡಕ್ಕಾಗಿ "ಗೋಕಾಕ್ ಮಾದರಿ ಚಳವಳಿ" ನಡೆಸಬೇಕಾಗುತ್ತದೆ. ಸಮ್ಮೇಳನದ ನಂತರ ಕನ್ನಡ ಮಾಧ್ಯಮದ ವಿಷಯವಾಗಿ ವಿಶೇಷ ಸಮಿತಿಯೊಂದನ್ನು ರಚಿಸಲಾಗುವುದು ಹಾಗು ಅದಕ್ಕಾಗಿ ಎಲ್ಲ ಕನ್ನಡ ಪರ ಸಂಘಟನೆಗಳನ್ನು ಒಗ್ಗೂಡಿಸಲಾಗುವುದು ಎಂದಿದ್ದಾರೆ.

೮೧ನೆ ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ


ಶ್ರವಣಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ೮೧ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಲೋಕಾರ್ಪಣೆ ಮಾಡಿದ್ದಾರೆ.

ಗೊರೂರು ಅಣೆಕಟ್ಟು, ಬಾಹುಬಲಿ ಮತ್ತು ಹಲ್ಮಿಡಿ ಶಾಸನಗಳನ್ನು ಒಳಗೊಂಡಿರುವ ಲಾಂಛನ ಹಾಸನದ ವ್ಯಾವಹಾರಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣಗಳನ್ನು ಸೆರೆಹಿಡಿಯಲು ಪ್ರಯತ್ನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com