ಕವನ ಸುಂದರಿ: ತೇಜಶ್ರೀ: ಚಿಟ್ಟೆಗಳನರಳಿಸಿತು ಹೂಬಳ್ಳಿ
ಚಿಟ್ಟೆಗಳನರಳಿಸಿತು ಹೂಬಳ್ಳಿ
ಜೋತು ಬಿದ್ದ ಗೊಂಚಲು
ಹೂಗೊಂಚಲೊಳಗೆ ದುಂಬಿಗಳೆಲ್ಲ
ತುಂಬಿ ಹಾಡುತ್ತ
ಸಂಗೀತ ಕೇಳಿ
ಆರೋಹಣ ಅವರೋಹಣದ ಆಲಾಪ!
ಎಷ್ಟು ಕಾಲದ ರಿಯಾಜು ಇದು
ಇಷ್ಟೆಲ್ಲ ರಾಗಗಳ ಮೈದುಂಬಿಕೊಂಡು
ನಿಡಿನಿಡಿದು ಕೈಯಿ ಮೈಯಿ ಚಾಚುತ್ತ
ಮುನ್ಮುಂದಕ್ಕೆ ಬಳ್ಳಿ ಲೋಕ ಮುಟ್ಟುವ ಪರಿಯೇನು!
ಎಲೆ ಎಲೆ! ಪಚ್ಚೆ ಎಸಳು ಬಿರಿದು ಹಿಗ್ಗುವುದೇನು!
ಪುಷ್ಪವತಿಯೇ ಹುಲುಸೇನು!
ತುಂತುಂ ತುಂಬಿ ಹೂಗಳ ತುಂಬಿ
ಮುಖವೊಡ್ಡಿ ಪುಷ್ಪರಸವ ಈಡಾಡಿ
ಹೊಸಸೃಷ್ಟಿಯ ಹೊತ್ತು ಹಾರುವುದೇನು!
ಚಿಟ್ಟೆದುಂಬಿಭ್ರಮರಗಳ ಅರಳಿಸಿದ ಹೂಬಳ್ಳಿಯೇ
ನೋಡು
ನೀನೇ ಅರಳಿಸಿರುವ ಈ ಕವಿತೆಯನ್ನೂ.
ಎಂ.ಎ.(ಇಂಗ್ಲಿಷ್) ಮತ್ತು ಭಾಷಾಂತರ ಡಿಪ್ಲೊಮಾ ಪದವೀಧರೆ ಆಗಿರುವ ಕವಯಿತ್ರಿ ತೇಜಶ್ರೀ ಅವರು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ವರ್ಷ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ 'ಟ್ಯಾಗೋರ್ ಪೀಠ'ದಲ್ಲಿ ಸಂಶೋಧನಾ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿರುವ ಶ್ರೇಯ ಅವರದು. ಲಯ, ತಿಳಿಗೊಳ, ಕತ್ತಲೆಯ ಬೆಳಗು, ಅವನರಿವಲ್ಲಿ, ಉಸುಬುಂಡೆ, ಮಾಗಿಕಾಲದ ಸಾಲುಗಳು ಕವನ ಸಂಕಲನಗಳು, ಕವಿ ರವೀಂದ್ರ, ಬೆಟ್ಟದ ಮೇಲಿನ ಬೆಳಕು ಕೃತಿಗಳನ್ನು ಅವರು ಹೊರತಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ