ನಾಳೆ ವರ್ಷದ ಎರಡನೆ ಹಾಗೂ ಕೊನೆಯ ಚಂದ್ರಗ್ರಹಣ: ಸ್ಪರ್ಶ ಕಾಲ, ಮೋಕ್ಷ ಕಾಲ ವಿವರ ಇಲ್ಲಿದೆ...

ನಾಳೆ ನವೆಂಬರ್ 8ರಂದು ಸಂಪೂರ್ಣ ಚಂದ್ರಗ್ರಹಣ(Lunar eclipse) ಸಂಭವಿಸಲಿದೆ. ಭಾರತದ ಪ್ರಮುಖ ಸ್ಥಳಗಳಲ್ಲಿ ಸಂಪೂರ್ಣ ಚಂದ್ರಗ್ರಹಣ ಗೋಚರಿಸಲಿದೆ. 
ಚಂದ್ರಗ್ರಹಣ ಸಾಂದರ್ಭಿಕ ಚಿತ್ರ
ಚಂದ್ರಗ್ರಹಣ ಸಾಂದರ್ಭಿಕ ಚಿತ್ರ

ಬೆಂಗಳೂರು: ನಾಳೆ ನವೆಂಬರ್ 8ರಂದು ಸಂಪೂರ್ಣ ಚಂದ್ರಗ್ರಹಣ(Lunar eclipse) ಸಂಭವಿಸಲಿದೆ. ಭಾರತದ ಪ್ರಮುಖ ಸ್ಥಳಗಳಲ್ಲಿ ಸಂಪೂರ್ಣ ಚಂದ್ರಗ್ರಹಣ ಗೋಚರಿಸಲಿದೆ. 

ಗ್ರಹಣವು ಮಧ್ಯಾಹ್ನ 2.39ಕ್ಕೆ ಸ್ಪರ್ಶಿಸಿ ಅಪರಾಹ್ನ 4.29ಕ್ಕೆ ಉಚ್ಛ್ರಾಯ ಮಧ್ಯ ಸ್ಥಿತಿ ಗೆ ತಲುಪಿ ಸಂಜೆ 6.19ಕ್ಕೆ ಮೋಕ್ಷವಾಗಲಿದೆ. ಚಂದ್ರೋದಯ ಆಗುವುದು ಸಂಜೆ 5.59ಕ್ಕೆ. ಆ ನಂತರ ಕಾಣಿಸುತ್ತದೆ. ಆದರೆ ಮೋಕ್ಷ ಕಾಲ ಸಂಜೆ 6.19ಕ್ಕೆ ಇರುವುದರಿಂದ 20 ನಿಮಿಷದಲ್ಲಿ ಚಂದ್ರ ಗ್ರಹಣದ ದರ್ಶನ ಸಹಿತ ಇಡೀ ಗ್ರಹಣ ಮುಗಿದು ಹೋಗುತ್ತದೆ. ಇದು ಕಾರ್ತಿಕ ಹುಣ್ಣಿಮೆ ಗ್ರಹಣವಾಗಿದೆ. 

ಇದು ಈ ವರ್ಷದ ಕೊನೆಯ ಚಂದ್ರಗ್ರಹಣವಾಗಿದೆ. ಇದು ಭಾರತ ಸೇರಿದಂತೆ ದಕ್ಷಿಣ/ಪೂರ್ವ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರದಲ್ಲಿ ಗೋಚರಿಸುತ್ತದೆ.

ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬರುವುದನ್ನು ಚಂದ್ರಗ್ರಹಣ ಎನ್ನುತ್ತಾರೆ. ಈ ಸಮಯದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಚಂದ್ರನು ಸಂಪೂರ್ಣವಾಗಿ ಮುಚ್ಚಲ್ಪಡುತ್ತಾನೆ. ಅದೇ ಸಮಯದಲ್ಲಿ, ಚಂದ್ರನು ಭೂಮಿಯ ಸುತ್ತ ಸುತ್ತುತ್ತಾನೆ, ಚಂದ್ರನು ಭೂಮಿಯ ನೆರಳಿನಲ್ಲಿ ಉಳಿಯುವವರೆಗಿನ ಸ್ಥಿತಿಯನ್ನು ನಾವು ಚಂದ್ರಗ್ರಹಣ ಎಂದು ಹೇಳುತ್ತೇವೆ.

ಹಲವು ದೇವಾಲಯಗಳಲ್ಲಿ ಪ್ರವೇಶ ನಿರ್ಬಂಧ: ನಾಳೆ ರಾಹುಗ್ರಸ್ಥ ಚಂದ್ರಗ್ರಹಣ ಹಿನ್ನೆಲೆ ರಾಜ್ಯದ ವಿವಿಧೆಡೆ ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಮೈಸೂರಿನ ಚಾಮುಂಡಿದೇವಿ ದೇಗುಲ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ನಾಳೆ ಮಧ್ಯಾಹ್ನ 1 ಗಂಟೆ ಬಳಿಕ ಚಾಮುಂಡಿಬೆಟ್ಟಕ್ಕೆ ಭಕ್ತರ ನಿಷೇಧವಿರಲಿದೆ. 

ಧರ್ಮಸ್ಥಳ ಮಂಜುನಾಥ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಕಟೀಲು ದೇವಸ್ಥಾನಗಳ ದರ್ಶನ ಸಮಯ ಬದಲಾವಣೆ ಮಾಡಲಾಗಿದೆ. ಧರ್ಮಸ್ಥಳ ದೇವಸ್ಥಾನ ನಾಳೆ ಮಧ್ಯಾಹ್ನ 1.30ರಿಂದ ಸಂಜೆ 7ರವರೆಗೆ ಬಂದ್ ಆಗಿರಲಿದೆ. ನಾಳೆ ಸೇವೆ, ಅನ್ನಪ್ರಸಾದ ಇರುವುದಿಲ್ಲ. ನಾಳೆ ಬೆಳಗ್ಗೆ 11.30ರಿಂದ ಮಧ್ಯಾಹ್ನ 2.30ರವರೆಗೆ ದರ್ಶನಕ್ಕೆ ನಿರ್ಬಂಧವಿರಲಿದೆ. ನಂತರ ಸಂಜೆ 7.30ರಿಂದ ರಾತ್ರಿ 9ರವರೆಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಳೆ ಬೆಳಗ್ಗೆ 9.30ರ ಬಳಿಕ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪ್ರವೇಶ ನಿಷೇಧ ಹೇರಿದ್ದು ರಾತ್ರಿ 8 ಗಂಟೆಗೆ ಕಟೀಲು ದೇಗುಲದಲ್ಲಿ ಪೂಜೆ, ಅನ್ನಪ್ರಸಾದ ಇರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com