ಹೊಸ ತಲೆಮಾರಿನ ಖಂಡಾಂತರ ಕ್ಷಿಪಣಿ ಅಗ್ನಿ-ಪ್ರೈಮ್ ಪರೀಕ್ಷೆ ಯಶಸ್ವಿ!
ನವದೆಹಲಿ: ಭಾರತವು ಬುಧವಾರ ಸಂಜೆ ಒಡಿಶಾದ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಹೊಸ ತಲೆಮಾರಿನ ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರೈಮ್ ಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಕುರಿತು ರಕ್ಷಣಾ ಸಚಿವಾಲಯ ಗುರುವಾರ ಮಾಹಿತಿ ನೀಡಿದ್ದು, “ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಜೊತೆಗೆ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (ಎಸ್ಎಫ್ಸಿ) ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಹೊಸ ತಲೆಮಾರಿನ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿಪ್ರೈಮ್ ಹಾರಾಟ ಪರೀಕ್ಷೆಯನ್ನು ಬುಧವಾರ ಸಂಜೆ 7 ಗಂಟೆ ಸುಮಾರಿನಲ್ಲಿ ಯಶಸ್ವಿಯಾಗಿ ನಡೆಸಲಾಯಿತು ಎಂದು ತಿಳಿಸಿದೆ.
ಅಗ್ನಿ ಪ್ರೈಮ್ ಕ್ಷಿಪಣಿಯು ನಿಗದಿತ ಗುರಿ ಸಾಧಿಸಿದ್ದು, ಭಾರತೀಯ ಸೇನೆಗೆ ಮತ್ತೊಂದು ಬಲ ಬಂದಂತಾಗಿದೆ. ಟರ್ಮಿನಲ್ ಪಾಯಿಂಟ್ನಲ್ಲಿ ಇರಿಸಲಾದ ಎರಡು ಡೌನ್ರೇಂಜ್ ಹಡಗುಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾದ ಹಲವಾರು ರೇಂಜ್ ಸೆನ್ಸಾರ್ ಗಳಿಂದ ಡೇಟಾ ಕಲೆ ಹಾಕಲಾಗಿದ್ದು, ಕ್ಷಿಪಣಿಯು ಉದ್ದೇಶಿತ ಗುರಿಯನ್ನು ಮುಟ್ಟಿದೆ ಎಂದು ರಕ್ಷಣಾ ಸಚಿವಾಲಯ ದೃಢಪಡಿಸಿದೆ. ಉಡಾವಣೆಗೆ ರಕ್ಷಣಾ ಪಡೆಯ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಕಾರ್ಯತಂತ್ರದ ಪಡೆಗಳ ಕಮಾಂಡ್ ಮುಖ್ಯಸ್ಥರು ಮತ್ತು DRDO ಮತ್ತು ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಸಾಕ್ಷಿಯಾದರು.
ಕ್ಷಿಪಣಿಯ ಮೂರು ಯಶಸ್ವಿ ಅಭಿವೃದ್ಧಿ ಪ್ರಯೋಗಗಳ ನಂತರ ಕಳೆದ ವರ್ಷ ಜೂನ್ ತಿಂಗಳಲ್ಲಿ ಮೊದಲ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ರಾಡಾರ್, ಟೆಲಿಮಿಟ್ರಿ, ಎಲೆಕ್ಟ್ರೋ ಅಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ ಗಳನ್ನು ವಿವಿಧ ಕಡೆಗಳಲ್ಲ ನಿಯೋಜಿಸಲಾಗಿತ್ತು. ಎರಡನೇ ಪರೀಕ್ಷೆಯನ್ನು ಡಿಸೆಂಬರ್ನಲ್ಲಿ ನಡೆಸಲಾಯಿತು. ಇದು ವ್ಯವಸ್ಥೆಯಲ್ಲಿ ಸಂಯೋಜಿಸಲಾದ ಎಲ್ಲಾ ಸುಧಾರಿತ ತಂತ್ರಜ್ಞಾನಗಳ ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಲು ಕಾರಣವಾಯಿತು. 'ಅಗ್ನಿ ಪ್ರೈಮ್' ಎರಡು-ಹಂತದ ಪರಮಾಣು ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ನ್ಯಾವಿಗೇಷನ್ ಮತ್ತು ಮಾರ್ಗದರ್ಶನ ವ್ಯವಸ್ಥೆಯನ್ನು ಹೊಂದಿದೆ. ಇದು 1,000-2,000 ಕಿಮೀ ವ್ಯಾಪ್ತಿಯ ಸಾಮರ್ಥ್ಯವನ್ನು ಹೊಂದಿದ್ದು, ಪರೀಕ್ಷಾ ಹಾರಾಟ ಹೊಸ ಶಸ್ತ್ರಾಸ್ತ್ರ ವ್ಯವಸ್ಥೆಯ ಕಾರ್ಯಾಚರಣೆಯತ್ತ ಮಹತ್ವದ ಹೆಜ್ಜೆಯಾಗಿದೆ.
ಗುರುವಾರ ಯಶಸ್ವಿ ಪರೀಕ್ಷೆಗಾಗಿ ಡಿಆರ್ಡಿಒ, ಎಸ್ಎಫ್ಸಿ ಮತ್ತು ಸಶಸ್ತ್ರ ಪಡೆಗಳನ್ನು ಅಭಿನಂದಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, “ಕ್ಷಿಪಣಿಯ ಯಶಸ್ವಿ ಅಭಿವೃದ್ಧಿ ಮತ್ತು ಇಂಡಕ್ಷನ್ ಸಶಸ್ತ್ರ ಪಡೆಗಳಿಗೆ ಅತ್ಯುತ್ತಮ ಬಲ ತಂದುಕೊಟ್ಟಿದೆ ಎಂದು ಶ್ಲಾಘಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ