ಶ್ರೀ ರಾಮನುಜಚಾರ್ಯರಿಗೆ ಗೋಷ್ಠಿ ಪೂರ್ಣರು ಮಂತ್ರಾರ್ಥಗಳನ್ನು ಉಪದೇಶಿಸಿ, "ಯಾರಿಗೂ ಹೇಳಬೇಡ. ಹೇಳಿದರೆ ಪಾಪದಿಂದ ನರಕಕ್ಕೆ ಹೋಗುತ್ತೀಯ" ಎಂದು ಎಚ್ಚರಿಸಿದರು. ಶ್ರೀ ರಾಮನುಜಾಚಾರ್ಯರು ಗೋಷ್ಠಿಪೂರ್ಣರು ಇದ್ದ ದೇವಾಲಯದ ಗೋಪುರವನ್ನು ಹತ್ತಿ ಜಾತಿ, ಮತ, ಪಂಥ ಎಂಬ ಭೇದವಿಲ್ಲದೆ ಸಾರ್ವಜನಿಕರನ್ನು ಕರೆದು ಮಂತ್ರೋಪದೇಶ ಮಾಡಿದರು. ಗೋಷ್ಠಿಪೂರ್ಣರು ಆಕ್ಷೇಪಿಸಿದಾಗ ಶ್ರೀ ರಾಮನುಜರು, "ನಾನೊಬ್ಬನೇ ನರಕಕ್ಕೆ ಹೋದರು ಪರವಾಗಿಲ್ಲ, ನಮ್ಮ ಮನುಕುಲ ಸ್ವರ್ಗಕ್ಕೆ ಹೋದರೆ ಸಾಕು" ಎಂದು ಉತ್ತರಿಸಿದರು. ಹಾಗೆಯೇ ಹೊಯ್ಸಳರ ಜೊತೆ ನಿಕಟ ಸಂಪರ್ಕ ಹೊಂದಿದ ಶ್ರೀ ರಾಮಾನುಜಾಚಾರ್ಯರು ಹೊಯ್ಸಳರ ಕಾಲದಲ್ಲಿ ತಲಕಾಡು, ತೊಂಡನೂರು, ಬೇಲೂರು, ಗದಗ ಮತ್ತು ಮೇಲುಕೋಟೆಯಲ್ಲಿ ದೇವಸ್ಥಾನವನ್ನು ಕಟ್ಟಿ ಸದ್ಭಾವನೆಯನ್ನು ಮೂಡಿಸುವಲ್ಲಿ ಪ್ರೇರಿತರಾದರು.