ತೆಲಂಗಾಣ: ನಮ್ಮಲ್ಲಿ ಅದೆಷ್ಟೋ ಜನರಿಗೆ ರಾಷ್ಟ್ರಗೀತೆ ಹಾಡುಬ್ ಪೂರ್ಣವಾಗಿ ಗೊತ್ತಿಲ್ಲ. ಇನ್ನಷ್ಟು ಜನ ರಾಷ್ಟ್ರಗೀತೆ ಹಾಡುವಾಗ ಗೌರವ ಕೊಡಬೇಕೆಂದೇ ಭಾವಿಸುವುದಿಲ್ಲ. ಆದರೆ ತೆಲಂಗಾಣದ ಕರೀಂ ನಗರ ಜಿಲ್ಲೆ ಜಮ್ಮಿಕುಂಟ ಎನ್ನುವ ಪುಟ್ಟ ನಗರದಲ್ಲಿ ಪ್ರತಿ ದಿನ ಮುಂಜಾನೆ ರಾಷ್ಟ್ರಗೀತೆ ಮೊಳಗುತ್ತದೆ. ನಗರದಲ್ಲಿ 16 ಧ್ವನಿವರ್ಧಕಗಳಲ್ಲಿ 'ಜನಗಣಮನ' ಮೊಳಗುವಾಗ ಇಡೀ ಹಳ್ಳಿಯ ಜನ ನಿಶ್ಶಬ್ದವಾಗಿ ಎದ್ದು ನಿಂತು ಗೌರವ ಸೂಚಿಸುತ್ತಾರೆ.
ಶಾಲೆಗೆ ಹೋಗುತ್ತಿರುವ ಮಕ್ಕಳು, ದ್ವಿಚಕ್ರ ವಾಹನ ಸವಾರರು, ಆಟೋ, ಬಸ್, ಕಾರಿನಲ್ಲಿ ಹೋಗುವವರು, ಪಾದಚಾರಿಗಳು ಎಲ್ಲರೂ 52 ಸೆಕೆಂಡ್ ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ ನಂತರವೇ ಮುಂದೆ ಸಾಗುತ್ತಾರೆ.
ಮೊನ್ನೆ ಸ್ವಾತಂತ್ರ ದಿನದ ಮರು ದಿನ ಆಗಸ್ಟ್ 16ರಿಂದ ಜಮ್ಮಿಕುಂಟ ನಗರದ ಪೊಲೀಸ್ ಅಧಿಕಾರಿ ಪಿ. ಪ್ರಶಾಂತ್ ರೆಡ್ಡಿ ಅವರು ಈ ಪರಿಪಾಠವನ್ನು ಆರಂಭಿಸಿದ್ದಾರೆ.
ರಾಷ್ಟ್ರಗೀತೆ ಎಲ್ಲರಿಗೂ ಗೊತ್ತಿರಲೇ ಬೇಕು. ಇದು ದೇಶ ಭಕ್ತಿ, ಸ್ವಾತಂತ್ರ ದಿನಕ್ಕೆ ಮಾತ್ರ ಸೀಮಿತವಲ್ಲ. ಜನರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಲು, ದೇಶದ ಬಗ್ಗೆ ಇರುವ ಜವಾಬ್ದಾರಿಗಳನ್ನು ನೆನಪಿಸಲೂ ಇದು ಸಹಕಾರಿಯಾಗಿದೆ. ಎನ್ನುವುದು ಪ್ರಶಾಂತ್ ರೆಡ್ಡಿ ಅವರ ಮಾತು.
ರೆಡ್ಡಿಯವರು ಪ್ರಾರಂಭಿಸಿದ್ದ ಈ ಕಾರ್ಯಕ್ಕೆ ಜನರಿಂದಲೂ ಉತ್ತಮ ಸ್ಪಂದನೆ ದೊರಕುತ್ತಿದೆ.