ಡಾ.ಪಾವಗಡ ಪ್ರಕಾಶ್ ರಾವ್
ಡಾ.ಪಾವಗಡ ಪ್ರಕಾಶ್ ರಾವ್

ಹತ್ತು ನೂರಾಗಿ, ನೂರು ಸಾವಿರವಾಗಿ... 'ಸತ್ಯದರ್ಶನದ ಪ್ರಕಾಶ' 'ಸಹಸ್ರದರ್ಶನ'ವಾದಾಗ...

ಸತ್ಯದರ್ಶನದ ಹಿಂದಿನ ಪರಿಕಲ್ಪನೆ ಏನಾಗಿತ್ತು. ಅದರ ರೂವಾರಿಗಳಾರು? ರೂಪುರೇಷೆ ಸಿದ್ಧಗೊಂಡಿದ್ದು ಹೇಗೆ? ಈ ಬಗ್ಗೆ ಸತ್ಯದರ್ಶನ ಖ್ಯಾತಿಯ, ಡಾ.ಪಾವಗಡ ಪ್ರಕಾಶ್ ರಾವ್ ಕನ್ನಡಪ್ರಭ.ಕಾಂ ಗೆ ಸಂದರ್ಶನ ನೀಡಿದ್ದಾರೆ.
ಅರಸುಗಳಿಗಿದು ವೀರ, ದ್ವಿಜರಿಗೆ ಪರಮವೇದದ ಸಾರ, ಯೋಗೀಶ್ವರರ ತತ್ವವಿಚಾರ, ಮಂತ್ರಿಜನಕ್ಕೆ ಬುದ್ಧಿಗುಣ | ವಿರಹಿಗಳ ಶೃಂಗಾರ ವಿದ್ಯಾ ಪರಿಣತರಲಂಕಾರ ಕಾವ್ಯಕೆ ಗುರುವೆನಲು ರಚಿಸಿದ ಕುಮಾರ ವ್ಯಾಸ ಭಾರತವ ||
ಇದು ಕುಮಾರವ್ಯಾಸ ಭಾರತವನ್ನು ರಚಿಸಿದಾಗ ಹೇಳಿರುವ ಮಾತು. ಅಂದರೆ ರಾಜರುಗಳಿಗೆ ಇದು ವೀರವೆನಿಸಿದರೆ, ಬ್ರಾಹ್ಮಣರಿಗೆ ಪರವೇದದ ಸಾರವಾಗಿ ತೋರುತ್ತದೆ, ಯೋಗಿಗಳಿಗೆ-ಮುನಿಜನರಿಗೆ ತತ್ವವಿಚಾರವಾಗಿ ತೋರುತ್ತದೆ ಮತ್ತು ಮಂತ್ರಿಗಳಿಗೆ ರಾಜನೀತಿಯ ಬುದ್ಧಿಯನ್ನು ಹೇಳುತ್ತದೆ. ಇದಲ್ಲದೇ ವಿರಹಿಗಳಿಗೆ ಶೃಂಗಾರಕಾವ್ಯವೆನಿಸಿದರೆ ಪಂಡಿತರಿಗೆ ಅಲಂಕಾರವಾಗಿ ಕಾಣುತ್ತದೆ ಎಂಬ ಪ್ರೇರಣೆ ದೊರತದ್ದರಿಂದ ಕುಮಾರವ್ಯಾಸ ಭಾರತವನ್ನು ಬರೆದನೆಂದಿದ್ದಾನೆ.
ಹೇಗೆ ಕುಮಾರ ವ್ಯಾಸಭಾರತ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಆಯಾ ಪ್ರಮುಖ ವರ್ಗಗಳಿಗೆ ಅಗತ್ಯವಿರುವುದನ್ನು ತಿಳಿಸುವ ಕೃತಿಯಾಗಿದೆಯೋ, ಹಾಗೆಯೇ ಚಂದನ ವಾಹಿನಿಯಲ್ಲಿ 13 ವರ್ಷಗಳಿಂದ ಪ್ರಸಾರವಾಗುತ್ತಿದ್ದ, 1,111 ಸಂಚಿಕೆಗಳನ್ನು ಪೂರೈಸಿರುವ ಸತ್ಯದರ್ಶನವೂ ಸಹ ಎಲ್ಲರಿಗೂ ತಲುಪಿರುವ, ಜಿಜ್ಞಾಸುಗಳ ನೆಚ್ಚಿನ ಕಾರ್ಯಕ್ರಮವಾಗಿದೆ. ಏಕೆಂದರೆ 13 ವರ್ಷಗಳಿಂದ ಸತ್ಯದರ್ಶನ ಕಾರ್ಯಕ್ರಮದಲ್ಲಿ ಚರ್ಚೆಯಾಗದ ವಿಷಯವನ್ನು ಗುರುತಿಸುವುದೇ ಕಷ್ಟದ ಕೆಲಸ. ಸತ್ಯದರ್ಶನ ಕಾರ್ಯಕ್ರಮದಲ್ಲಿ  ಚರ್ಚೆಯಾದ ಪ್ರಶ್ನೋತ್ತರಗಳ ವ್ಯಾಪ್ತಿ ಅಂತಹದ್ದು!. ಎಲ್ಲಾ ವರ್ಗಗಳಿಗೂ, ಎಲ್ಲಾ ಶಾಖೆ, ಪಂಥಗಳ ಜಿಜ್ಞಾಸೆಗಳಿಗೂ ಉತ್ತರ ನೀಡಿ ಸತ್ಯದರ್ಶನವನ್ನು ಮಾಡಿಸಿದ್ದವು. ರಾಮಾಯಣ, ಮಹಾಭಾರತ, ಭಗವದ್ಗೀತೆ, ಸಿದ್ಧಪುರುಷರು, ಅದ್ವೈತ, ಬೌದ್ಧ, ಜೈನ, ಸಿಖ್ ಪಂಥ, ದಿನ ನಿತ್ಯದ ಆಚರಣೆಗಳಿಗೆ ಸಂಬಂಧಿಸಿದ ಪ್ರಶ್ನೆಗಳು, ವಿಶೇಷ ಸಂದರ್ಭಗಳಲ್ಲಿ ಪಾಲನೆ ಮಾಡಬೇಕಾದ ಧರ್ಮ, ಪ್ರಶ್ನೋತ್ತರಗಳಿಗೆ ಮಿತಿ ಎಲ್ಲಿ? ಓಹ್ ಯಾವುದಿರಲಿಲ್ಲ ವಿದ್ವಾಂಸರಾದ ಡಾ.ಪಾವಗಡ ಪ್ರಕಾಶ್ ರಾವ್ ಅವರು ನಡೆಸಿಕೊಡುತ್ತಿದ್ದ "ಸತ್ಯದರ್ಶನದ"ಲ್ಲಿ?
ಇಷ್ಟಕ್ಕೂ ಇಂದಿನ ಟಿಆರ್ ಪಿ ಪೈಪೋಟಿ, ಬಗೆಬಗೆಯ ಮನರಂಜನಾ ಕಾರ್ಯಕ್ರಮಗಳು, ವರ್ಷಗಟ್ಟಲೆ ನಡೆಯುವ ದಾರಾವಾಹಿಗಳ ಭರಾಟೆಯಲ್ಲಿ, ಸತ್ಯದರ್ಶನದಂತಹ  ಧಾರ್ಮಿಕ ವಿಷಯಗಳಂತಹ ಸೂಕ್ಷ್ಮ, ಅತಿ ಗಂಭೀರ ಚಿಂತಕರನ್ನೇ ಪ್ರಧಾನವಾಗಿಟ್ಟುಕೊಂಡು ನಡೆಯುವ ಕಾರ್ಯಕ್ರಮ ಸತತ 13 ವರ್ಷ  ದಾಖಲೆಯ 1,111 ಸಂಚಿಕೆಗಳನ್ನು ಪೂರೈಸಿರುವುದೇನು ಕಡಿಮೆ ಸಾಧನೆಯೇ? ಆ ಕಾರ್ಯಕ್ರಮದ ಹಿಂದಿನ ಪರಿಕಲ್ಪನೆ ಏನಾಗಿತ್ತು. ಅದರ ರೂವಾರಿಗಳಾರು? ರೂಪುರೇಷೆ ಸಿದ್ಧಗೊಂಡಿದ್ದು ಹೇಗೆ? ಈ ಬಗ್ಗೆ ಸತ್ಯದರ್ಶನ ಖ್ಯಾತಿಯ, ಕನ್ನಡಪ್ರಭ.ಕಾಂ ನ ರಾಮಾಯಣ ಅವಲೋಕನ ಅಂಕಣಕಾರರೂ ಆಗಿರುವ ಡಾ.ಪಾವಗಡ ಪ್ರಕಾಶ್ ರಾವ್ ಕನ್ನಡಪ್ರಭ.ಕಾಂ ಗೆ ಸಂದರ್ಶನ ನೀಡಿದ್ದಾರೆ. ಹಾಗಾದರೆ ಸುದೀರ್ಘ 1,111 ಸಂಚಿಕೆಗಳ ವಿಕ್ರಮವನ್ನು ಅವರಿಂದಲೇ ಕೇಳೋಣವೇ?
ಸತ್ಯದರ್ಶನ ಕಾರ್ಯಕ್ರದಮ ಪ್ರಾರಂಭಗೊಂಡಿದ್ದು ಹೇಗೆ? ಕಲ್ಪನೆ ಏನಿತ್ತು?
"ದೂರದರ್ಶನದ ನಿರ್ದೇಶಕರಾಗಿ 13 ವರ್ಷಗಳ ಹಿಂದೆ ಹೈದರಾಬಾದ್ ನಿಂದ ಬೆಂಗಳೂರಿಗೆ ಬಂದಿದ್ದ ವೆಂಕಟೇಶ್ವರುಲು ಅವರು ತೆಲುಗಿನಲ್ಲಿ ಧರ್ಮ ಸಂದೇಹಾಲು(ಧರ್ಮ ಸಂದೇಹ) ಎಂಬ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಹಾಗೆಯೇ ಕನ್ನಡದಲ್ಲಿ ಅಂತಹದ್ದೇ ಒಂದು ಕಾರ್ಯಕ್ರಮ ಮಾಡಬೇಕೇಂದುಕೊಂಡಿದ್ದೇನೆ. ನೀವು ಸಹಾಯ ಮಾಡುತ್ತೀರಾ ಎಂದು ಕೇಳಿದರು. ನನಗೆ ವಾಸ್ತವವಾಗಿ ಆ ಕಾರ್ಯಕ್ರಮ ಮಾಡೋದಕ್ಕೆ ಇಷ್ಟ ಇರಲಿಲ್ಲ. ನೂರು ಪ್ರಶ್ನೆ ಕೇಳುತ್ತಾರೆ. ನಾನು ಅದನ್ನಲ್ಲಾ ಎಲ್ಲಿ ಅಧ್ಯಯನ ಮಾಡಲಿ? ರಾಮಾಯಣದ್ದೋ, ಭಗವದ್ಗೀತೆಯದ್ದೋ ಉಪನ್ಯಾಸ ಕೊಡುತ್ತೇನೆ ಅದನ್ನ ಮಾಡಿಸಿ ಎಂದೆ. ಇಂತಹ ಕಾರ್ಯಕ್ರಮಗಳಿಂದ ಜನರಿಗೆ ಉಪಕಾರವಾಗುತ್ತೆ. ನೀವು ಮಾಡಿ ಎಂದು ಒತ್ತಾಯಿಸಿದರು. 13 ವರ್ಷಗಳ ಹಿಂದೆ ಜಿವಿ ಅಯ್ಯರ್ ಅವರು ಈ ಕಾರ್ಯಕ್ರಮದ ಮೊಟ್ಟ ಮೊದಲನೆಯ ಉದ್ಘಾಟನಾ ಭಾಷಣ ಮಾಡಿದ್ದರು. ಸತ್ಯದರ್ಶನ ಕಾರ್ಯಕ್ರಮ ಪ್ರಾರಂಭವಾದದ್ದು ಹೀಗೆ.
ಆಗೆಲ್ಲಾ  14 ಸಂಚಿಕೆಗಳ ಮಿತಿ ಇತ್ತು. ಆದರೆ 108 ಕ್ಕೆ ನಿಲ್ಲಿಸಬೇಕು ಎಂದುಕೊಂಡಿದ್ದೆವು. 108 ಸಂಚಿಕೆ ಪೂರೈಸಿದ್ದರ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮಿಗಳು ಬಂದಿದ್ದರು. ಅದೇ ಕಾರ್ಯಕ್ರಮದಲ್ಲಿ ಸತ್ಯದರ್ಶನ ಮುಕ್ತಾಯವಾಗುತ್ತೆ ಎಂದು ಹೇಳಿದ್ದೆವು. ಆದರೆ ಗಣಪತಿ ಸಚ್ಚಿದಾನಂದ ಸ್ವಾಮಿಗಳು ಮುಂದುವರೆಸಬೇಕೆಂದು ಒತ್ತಾಯಿಸಿದರು. ಈಗ ಮುಂದುವರೆದು 13 ವರ್ಷಕ್ಕೆ ಬಂದು ನಿಂತಿದೆ.
ಸತ್ಯದರ್ಶನಕ್ಕೆ ಬರುತ್ತಿದ್ದ ಪತ್ರಗಳು ಅದರ ಆಯ್ಕೆ ಬಗ್ಗೆ ಒಂದಷ್ಟು ಮಾಹಿತಿ...?
"ಮೊದಲ ಹಂತದಲ್ಲಿ ಒಂದಷ್ಟು ಪತ್ರಗಳನ್ನು ಆಯ್ಕೆ ಮಾಡುತ್ತಿದ್ದರು. ಆ ನಂತರ ನನಗೆ ಒಂದಷ್ಟು ಕೊಡುತ್ತಿದ್ದರು. ನಾನು ಸರ್ವಜ್ಞ ಅಲ್ಲ. ಏನಾದರೂ ಉತ್ತರ ಕೊಡಬೇಕಿದ್ರೆ, ಅದು ಅಧಿಕೃತವಾಗಿರಬೇಕು. ಸತ್ಯವಾಗಿರಬೇಕು. ಹಾಗಿರಬೇಕಾದರೆ ಅಧ್ಯಯನ ಇರಬೇಕು. ಅದರ ಮೂಲದಲ್ಲಿ, ತಪಸ್ಸು ಮಾಡಬೇಕು. ಬಹಳ ಜನ ತಪ್ಪು ತಿಳಿದಿದ್ದಾರೆ. ಪ್ರಕಾಶ್ ರಾಯರು ಪ್ರಶ್ನೆ ಕೇಳುತ್ತಿದ್ದಂತೆಯೇ ಉತ್ತರ ಹೇಳಿಬಿಡುತ್ತಾರೆ ಅಂತ ಅವೆಲ್ಲಾ ಸುಳ್ಳು. ನಾನೂ
ವಿಚಾರಗಳ ಬಗ್ಗೆ ಅಧ್ಯಯನ ಮಾಡುತ್ತೇನೆ. ಅಧ್ಯಯನ ಮಾಡಿ, ಸೂಕ್ತ ಅಂತ ಅನ್ನಿಸಿದ್ದನ್ನ ಉತ್ತರ ಕೊಡುತ್ತೇನೆ. ಪ್ರಶ್ನೆಗಳು ಸಾಕಷ್ಟು ಬರುತ್ತೆ. ಆಯ್ಕೆ ಆಗುತ್ತೆ. ಅಧ್ಯಯನ ಆಗುತ್ತೆ. ಆ ನಂತರವೇ ಉತ್ತರ.
ಸತ್ಯದರ್ಶನ ಕಾರ್ಯಕ್ರಮದಲ್ಲಿ ರಾಮಾಯಣದಿಂದ ಹಿಡಿದು ಗೋಂದಾವಳಿ ಮಹಾರಾಜರವರೆಗೆ ಎಲ್ಲಾ ವಿಷಯಗಳೂ ಚರ್ಚೆಯಾಗಿವೆ, ಹೇಳದೇ ಇರುವುದೇನಾದರೂ ಇದೆಯೇ?
108 ಸಂಚಿಕೆಗಳಾದ ನಂತರ ತಯಾರಿಸಿದ ಪಟ್ಟಿಯಲ್ಲಿ ಅದ್ವೈತ, ಬೌದ್ಧ, ಜೈನ, ವೀರಶೈವ, ವಿಶಿಷ್ಠಾದ್ವೈತ, ದ್ವೈತ, ಸಿಖ್ ಪಂಥಗಳಿದ್ದವು. ದರ್ಶನಗಳ ಪೈಕಿ ಸಾಂಖ್ಯ, ಕಣಾದರ ದರ್ಶನ, ಗೌತಮರ ನ್ಯಾಯ, ಯೋಗಸೂತ್ರ, ಪೂರ್ವ ಮೀಮಾಂಸೆ ಇತ್ತು. ಹಲವಾರು ದ್ವೈತ ಮುಖಂಡರು ನಮ್ಮ ಚಂದನಕ್ಕೆ ಕಾಗದ ಬರೆದು, ಪ್ರಕಾಶ್ ರಾಯರು ದ್ವೈತದ ಬಗ್ಗೆ ಮಾತನಾಡಬಾರದು ಎಂದರೆ ಅದ್ಯಾಕೆ ಗೊತ್ತಿಲ್ಲ ಅವರಿಗೆ ಬಹುಶಃ ನಾನು ಅದರ ಬಗ್ಗೆ ದೋಷಾರೋಪಣೆ ಮಾಡುತ್ತೀನಿ ಎನಿಸಿರಬೇಕು. ಆದರೆ ನಾನು ಹಾಗೆ ಮಾಡುತ್ತಲೂ ಇರಲಿಲ್ಲ.  ನಮಗೆ ತ್ರಯಾಚಾರ್ಯರೂ ಸಮಾನರೇ. ಆದರೆ ಮಾತನಾಡಬೇಕು ಅಂತ ಅಂದುಕೊಂಡಿದ್ದ ಮತ್ತೊಂದು ಆಗಿಲ್ಲ. ಅದೇನು ಅಂದ್ರೆ ಕನ್ನಡ ಸಾಹಿತ್ಯ. 1,100 ವರ್ಷಗಳವರೆಗಿನ ಕನ್ನಡ ಸಾಹಿತ್ಯ ಚರಿತ್ರೆ ಇದೆ ನಮ್ಮಲ್ಲಿ. ನನಗೆ ಪಂಪನಿಂದ ಕುವೆಂಪು ವರೆಗೆ ಒಂದು 500 ಸಂಚಿಕೆಗಳನ್ನ ಮಾಡಬೇಕು ಎಂಬ ಇಷ್ಟ ಇತ್ತು. ಕನ್ನಡ ಸಾಹಿತ್ಯದ ದಿಗ್ದರ್ಶನವನ್ನು ಮಾಡಬೇಕು ಎಂಬ ಇಷ್ಟವಿತ್ತು. ಪಂಪನಿಂದ ಕುವೆಂಪು ವರೆಗೆ ಮಾತನಾಡಿ ದಾಖಲು ಮಾಡಬೇಕು ಅಂದುಕೊಂಡಿದ್ದಿದ್ದೆ. ಹಲ್ಮಿಡಿ ಶಾಸನದಿಂದ ಆರಂಭವಾಗಿ, ನವ್ಯ ಸಾಹಿತ್ಯದ ವರೆಗೂ ಲಭ್ಯವಿರುವ ಅಂಶಗಳನ್ನು ಯಾವ ಕನ್ನಡ ವಾಹಿನಿಯೂ ಬಳಸಿಕೊಂಡಿಲ್ಲ. ಅದನ್ನು ಮಾಡಬೇಕು ಎಂದುಕೊಂಡಿದ್ದೆ. ಈಗಲೂ ಆಸಕ್ತ ಪ್ರಾಯೋಜಕರಿದ್ದರೆ ಮಾಡುವ ಮನಸ್ಸಿದೆ.
ಉದ್ವಿಗ್ನತೆಯಿಂದ ವಿರೋಧ ವ್ಯಕ್ತಪಡಿಸುತ್ತೇವೆ, ರೋಚಕತೆಯ ಬೆನ್ನಟ್ಟಿ ಮೂಲತತ್ವವನ್ನು ಮರೆಯುತ್ತಿದ್ದೇವೆ, ಈ ನಿಟ್ಟಿನಲ್ಲಿ ಸತ್ಯದರ್ಶನದಂತಹ ಕಾರ್ಯಕ್ರಮಗಳ ಪಾತ್ರವೇನು?
ನಾನು ಸಾಕಷ್ಟು ಬಾರಿ ಚರ್ಚೆ ಮಾಡಿದ್ದೇನೆ. ಉದಾಹರಣೆ ಹೇಳುತ್ತೇನೆ. ನೀವು ಜಿಜ್ಞಾಸು ಆದರೆ ತಪ್ಪಿಲ್ಲ. ಸಂದೇಹ ಪಟ್ಟರೆ ತಪ್ಪಿಲ್ಲ.ಸಾಧಾರವಾಗಿ ವಿರೋಧಿಸಿದರೆ ತಪ್ಪಿಲ್ಲ. ನಂಬಿಕೆಯೇ ಇಲ್ಲದೇ ಇದ್ದರೆ ತಪ್ಪಿಲ್ಲ. ಆದರೆ ಕೇವಲ ವಿರೋಧಿಸಬೇಕು ಅನ್ನುವ ಕಾರಣದಿಂದ ದೇವರುಗಳ ಬಗ್ಗೆ ವಿರೋಧಿಸುವುದು ಆ ಒಂದು ಕಾರಣದಿಂದ ವಿರೋಧಿಸುವುದು ಇದನ್ನು ಖಂಡಿಸುತ್ತಾ ಬಂದಿದ್ದೇನೆ. ವಿರೋಧಿಸುವಂತಿದ್ದರೆ, ಸಾಧಾರವಾಗಿ ವಿರೋಧಿಸಿ. ಬೇರೆ ವಿದ್ವಾಂಸರು ಏನು ಹೇಳಿದ್ದಾರೆ, ಅದರ ಬಗ್ಗೆ ನನ್ನ ಜ್ಞಾನದ ಮಿತಿಯೇನು ಎಂಬುದನ್ನೇನೂ ಅರಿಯದೇ ಸುಮ್ಮನೇ ಭಗವದ್ಗೀತೆಯಂತಹ ಗ್ರಂಥಗಳನ್ನು ಸುಡುತ್ತೇನೆ ಎನ್ನುವುದು ಸರಿಯಲ್ಲ. ಅಂತೆಯೇ ಮೂಲ ಗ್ರಂಥಗಳ ರಚನೆಯಲ್ಲಿ ಇಲ್ಲದ ಅಂಶಗಳನ್ನು, ಮತ್ತೆ ಯಾವುದೋ ಗ್ರಂಥಗಳಿಂದ ಹೆಕ್ಕಿ ಸುಳ್ಳು ಮಾಹಿತಿ ನೀಡಿ ಸ್ಥಾಪಿಸುವುದು ಸರಿಯಲ್ಲ. ನಮಗೆ ವಾಲ್ಮೀಕಿ ವಿರಚಿತ ರಾಮಾಯಣ ಮಾನ್ಯವೇ ಹೊರತು, ಬೇರೆ ಬೇರೆ ರಾಮಾಯಣಗಳು ನಮಗೆ ಮಾನ್ಯವಲ್ಲ. 
ಅಗಸ್ತ್ಯರ ಆತಿಥ್ಯದಲ್ಲಿದ್ದ ಶ್ರೀರಾಮರು ಗೋಮಾಂಸ ಸೇವಿಸಿದರೆಂಬುದಾಗಲೀ ಅಥವಾ ಇಂತಹ ಯಾವುದೇ ಅಂಶಗಳು ಮೂಲದಲ್ಲಿ ಇಲ್ಲ. ನನಗೆ ಮಾಂಸದ ಊಟದ ಬಗ್ಗೆ ವಿರೋಧವಿಲ್ಲ ಇಂತಹದ್ದೇ ವಿಷಯಗಳನ್ನು ಸತ್ಯದರ್ಶನ ಮಾಡಿಸಬೇಕು.  ಆ ರೀತಿಯ ಸತ್ಯದರ್ಶನ ನನಗೆ 100 ಕ್ಕೆ 90 ಭಾಗ ಸಂತೋಷ ನೀಡಿದೆ. ಸಾಕಷ್ಟು ಪ್ರಚಾರ, ಸಂಭಾವನೆಯೂ ದೊರೆತಿದೆ. ದೂರದರ್ಶನದಲ್ಲಿ ಸತ್ಯದರ್ಶನ ಪ್ರಚಾರವಾಗುತ್ತಿದ್ದಂತೆಯೆ ಹೊರಗಡೆ ಉಪನ್ಯಾಸಕ್ಕೂ ಹೆಚ್ಚು ಮಾನ್ಯತೆ ಸಿಕ್ಕಿತು. ಇದು ದೂರದರ್ಶನದಿಂದ ನನಗೆ ಆದ ಉಪಕಾರ. ಈ ಉಪಕಾರಕ್ಕಾಗಿ ಸತ್ಯದರ್ಶನವನ್ನು ಸೃಷ್ಟಿಸಿದ ವೆಂಕಟೇಶ್ವರುಲು ಅವರನ್ನು ನೆನಪಿಸಿಕೊಂಡು ಇಲ್ಲಿಯವರೆಗೆ ಬೆಳೆಸಿಕೊಂಡು ಬಂದ ಮಹೇಶ್ ಜೋಷಿಗಳಿಗೆ ಕೃತಜ್ಞನಾಗಿದ್ದೇನೆ.
13 ವರ್ಷ ವಿವಾದ ರಹಿತವಾಗಿ ನಡೆಸಿದರಲ್ಲ ಅದು ಹೇಗೆ ಸಾಧ್ಯವಾಯಿತು?
ಅದು ಸಾಧ್ಯವಾಗಿದ್ದರೆ ನಾನು ಯಾವುದೇ ಇಸಂ ಗೆ ಅಂಟಿಕೊಳ್ಳದೇ ಇರುವುದು ಪ್ರಧಾನವಾದ ಕಾರಣ. ನಾನು ಶುದ್ಧ ಅದ್ವೈತಿಯಾದರೂ ಭಾರತದಲ್ಲಿರುವ ಎಲ್ಲ ಧರ್ಮವನ್ನೂ ತಿರಸ್ಕರಿಸಿ ಅದ್ವೈತವನ್ನು ಮಾತ್ರ ಇಟ್ಟುಕೊಳ್ಳುವೆ ಎಂದಲ್ಲ. ವೀರಶೈವ, ಬೌದ್ಧ, ಜೈನ, ನಾಥ ಪಂಥದ ಬಗ್ಗೆ ಮಾತನಾಡುತ್ತೇನೆ. ಒಟ್ಟಾರೆ 13 ವರ್ಷಗಳ ವರೆಗೆ ಯಾವುದೇ ಇಸಂ ಗಳಿಗೆ ಅಂಟಿಕೊಳ್ಳದೇ ನನ್ನ ಅದ್ವೈತವನ್ನು ಮಂಡನೆ ಮಾಡುತ್ತಾ. ಉಳಿದೆಲ್ಲವಕ್ಕೂ ಮರ್ಯಾದೆ ನೀಡಿದ್ದರಿಂದ ವಿವಾದ ರಹಿತವಾಗಿ ನಡೆಸಿಕೊಡಲು ಸಾಧ್ಯವಾಗಿದೆ ಎನಿಸುತ್ತದೆ.
ಸತ್ಯದರ್ಶನದ ಸಂಪುಟಗಳ ಬಗ್ಗೆ ಹೇಳುವಿರಾ?
ಈಗಾಗಲೇ ಎರಡು ಸಂಪುಟಗಳು ಪ್ರಕಟವಾಗಿದೆ (ಸತ್ಯಪ್ರಕಾಶ-1, 2) 3 ನೇ ಸಂಪುಟ ಪ್ರಕಟವಾಗಲಿದೆ. ಶ್ರದ್ಧೆಗಳು ನಶಿಸುತ್ತಿದ್ದು, ಅದನ್ನು ಪುನಶ್ಚೇತನಗೊಳಿಸುವ ಬಗ್ಗೆ ಭಾರತೀಯ ವಿದ್ಯಾಭವನದಲ್ಲಿ ಡಾ.ವಿರೇಂದ್ರ ಹೆಗಡೆ ಅವರು ಆಯೋಜಿಸಿದ್ದ ಶ್ರದ್ಧಾ ಪುನಶ್ಚೇತನ ಎಂಬ ಸಭೆಯಲ್ಲಿ ಅವರೊಂದಿಗೆ ಮಾತುಕತೆ ನಡೆದಿದೆ. ಅವರು ವಿಶೇಷ ಸಂಚಿಕೆ ಮಾಡಿದರೆ. 2018 ರ ಮಾರ್ಚ್ ನಲ್ಲಿ ನಡೆಯಲಿರುವ ವಿಶೇಷ ಸಮ್ಮೇಳನದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಸಮ್ಮೇಳನದಲ್ಲಿ ಪ್ರಶ್ನೋತ್ತರ ಕಲಾಪ ನಡೆಸುವಂತೆ ಸಲಹೆ ನೀಡಿದ್ದೇನೆ, ಎಲ್ಲರೂ ಎಲ್ಲಾ ಧರ್ಮ, ಶ್ರದ್ಧೆಗಳ ಬಗ್ಗೆ ಅಧ್ಯಯನ ಮಾಡಿರಬೇಕು ಹಾಗಾದಲ್ಲಿ ಮಾತ್ರ ಧರ್ಮಕ್ಕೆ ಸಂಬಂಧಿಸಿದ ಯಾವುದೆ ಪ್ರಶ್ನೆಗಳನ್ನು ಸಮರ್ಥವಾಗಿ ಎದುರಿಸಬಹುದು.
ಸತ್ಯದರ್ಶನವನ್ನು ಮುಗಿಸುವ ಅನಿವಾರ್ಯತೆ ಇತ್ತಾ? ಮುಂದುವರೆಸಬಹುದಿತ್ತಲ್ಲಾ
ಮುಂದುವರೆಸಬಹುದಿತ್ತು... ಘೋಷಣೆ ಮಾಡಿ ಮುಕ್ತಾಯಗೊಳ್ಳಲು ಇನ್ನೊಂದು ತಿಂಗಳಿದೆ ಎನ್ನಬೇಕಾದರೆ ಅದರ ನಿರ್ಮಾಪಕರು ಸುಧಾಕರ್ ಪ್ರಿಯರಿಗೆ ಒದ್ದಾಟ ಪ್ರಾರಂಭವಾಯಿತು. ಮುಕ್ತಾಯ ಮಾಡುತ್ತಿದ್ದೇನೆ ಎಂದು ಹೇಳಬೇಡಿ ಎಂದರು. ಹೇಳಿದರೆ ಜನ ಪ್ರಶ್ನೆ ಕೇಳಲು ಪ್ರಾರಂಭಿಸುತ್ತಾರೆ ಎಂದರು. ಆ ಹಿನ್ನೆಲೆಯಲ್ಲಿ ಮಹೇಶ್ ಜೋಷಿಗಳೂ ಇದೇ ಪ್ರಶ್ನೆ ಕೇಳಿದ್ದರು. ಯಾಕೆ ನಿಲ್ಲಿಸಬೇಕು ಅಂದುಕೊಂಡಿದ್ದೀರಿ? ಅವರಿಗೆ ಕೊಟ್ಟ ಉತ್ತರವನ್ನು ನಾನು ನಿಮಗೂ ಕೊಡಬೇಕಿದೆ. ಸತ್ಯದರ್ಶನ ಕಾರ್ಯಕ್ರಮ ಮುಗಿಸುವುದು ಅನಿವಾರ್ಯತೆ ಎಂದು ಹೇಳುವುದಿಲ್ಲ. ಆದರೆ 13 ವರ್ಷಗಳು ಪುಟ್ಟ ಸಮಯವಲ್ಲ. 13 ವರ್ಷದಿಂದ ಪ್ರೇಕ್ಷಕರು ಇದೇ ಬಿಳಿ ಗಡ್ಡ ನೋಡುತ್ತಿದ್ದಾರೆ.  13 ವರ್ಷಗಳು ಕೇವಲ ಧರ್ಮಕ್ಕೆ ಸಂಬಂಧಿಸಿದ್ದು ಮಾತ್ರ ಚರ್ಚೆಯಾಯಿತು. ಹೀಗಾಗಿ ನಮ್ಮ ಜೀವನದಲ್ಲಿ ಧಾರ್ಮಿಕ ವಿಷಯಗಳಿಗೆ ಜಾಗ ಎಷ್ಟಿದೆ ಎಂಬುದನ್ನು ನೋಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ 13 ವರ್ಷಗಳು ಮಾಡಿದ್ದು ಸಾಕು ಎನಿಸಿತು. ಎಷ್ಟು ವರ್ಷ ಅಂತ ಒಂದೇ ಕಾರ್ಯಕ್ರಮ ನಡೆಸುವುದು? ಪ್ರೇಕ್ಷಕರಿಗೆ ಸಹನೆ ಎಷ್ಟಿದೆ?. ಅವರು ಸಾಕು ಎನ್ನುವುದಕ್ಕೆ ಮುನ್ನ ನಾವೇ ನಿಲ್ಲಿಸಲು ತೀರ್ಮಾನಿಸಿದ್ದೇವೆ. ಕನ್ನಡದ ಸಾಹಿತ್ಯದ ಬಗ್ಗೆ ಮುಂದೆ ಕಾರ್ಯಕ್ರಮ ಮಾಡುವ ಮನಸ್ಸಿದೆ. ಸೂಕ್ತ ವೇದಿಕೆ ಸಿಕ್ಕಲ್ಲಿ ಪ್ರಾರಂಭಿಸುತ್ತೇನೆ.
'ಸತ್ಯದರ್ಶನ' ಕಾರ್ಯಕ್ರಮ ಸಾವಿರದ ನೂರ ಹನ್ನೋಂದು (1,111) ಸಂಚಿಕೆಗಳ ನಂತರ ಅಂತ್ಯಗೊಂಡಿದ್ದು ಸತ್ಯದರ್ಶನ-ಸಹಸ್ರದರ್ಶನ ಸಹಸ್ರಾಭಿನಂದನೆ ಕಾರ್ಯಕ್ರಮವನ್ನು ಜೂ.27 ರಂದು ಮಂಗಳವಾರ ಸಂಜೆ 6:00 ರಿಂದ ರಾತ್ರಿ 8:00 ವರೆಗೆ  ಕುಮಾರಸ್ವಾಮಿ ಲೇಔಟ್ ನಲ್ಲಿರುವ ದಯಾನಂದ ಸಾಗರ್ ಕಾಲೇಜ್ ನ ಡಾ.ಪ್ರೇಮಚಂದ್ರ ಸಾಗರ ಆಡಿಟೋರಿಯಂ ನಲ್ಲಿ ಆಯೋಜಿಸಲಾಗಿದೆ. ಆಸಕ್ತರು ಭಾಗವಹಿಸಬಹುದಾಗಿದೆ.
-ಶ್ರೀನಿವಾಸ್ ರಾವ್
srinivasrao@newindianexpress.com, srinivas.v4274@gmail.com

Related Stories

No stories found.

Advertisement

X
Kannada Prabha
www.kannadaprabha.com